ವಿವಿ ಸಾಗರದಿಂದ ನೀರು ಹರಿಸಲು ಶಾಸಕಿ ಕೆ.ಪೂರ್ಣಿಮಾ ಚಾಲನೆ
ಚಿತ್ರದುರ್ಗ ಮಾರ್ಚ್ 06: ಹಿರಿಯೂರು ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶಗಳಿಗೆ ವಾಣಿವಿಲಾಸ ಸಾಗರದಿಂದ ನೀರು ಹರಿಸುವಂತೆ ರೈತರ ಬಹುದಿನಗಳ ಕನಸು ಇಂದು ನನಸಾಗಿದೆ.
ಬರಗಾಲಕ್ಕೆ ತುತ್ತಾಗಿದ್ದ ಹಿರಿಯೂರು ತಾಲ್ಲೂಕಿನ ತೋಟಗಳು ನೀರಿಲ್ಲದೇ ಒಣಗಿದ್ದವು. ಜನರಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಉಳಿದ ತೋಟಗಳನ್ನು ಉಳಿಸಿಕೊಳ್ಳಲು ರೈತರು ವಾಣಿವಿಲಾಸ ಸಾಗರದಿಂದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ವರ್ಷಗಳ ಬಳಿಕ ವಾಣಿವಿಲಾಸ ಸಾಗರದಿಂದ ನಾಲೆಗಳಿಗೆ ನೀರು
ಇಂದು ಅಧಿಕೃತವಾಗಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ನಾಲೆಗಳಿಗೆ ನೀರು ಹರಿಸಲು ಚಾಲನೆ ನೀಡಿದರು. ಇದಕ್ಕೂ ಮುನ್ನ ಕಣಿವೆ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ನಡೆಸಿ, ಜಲಾಶಯದಲ್ಲಿ ಗಂಗಾ ಪೂಜೆ ಸಲ್ಲಿಸಿದರು. ನಂತರ ಶಾಸಕರು ನೀರು ಹರಿಸಲು ಚಾಲನೆ ನೀಡುತ್ತಿದ್ದಂತೆಯೇ ನೂರಾರು ರೈತರಲ್ಲಿ ಹರ್ಷೋದ್ಗಾರ ಕೂಗಿದರು.
ವಾಣಿವಿಲಾಸ ಸಾಗರದಿಂದ ನೀರು ಹೊರಬರುತ್ತಿದ್ದಂತೆಯೇ ರೈತರ ಮೊಗದಲ್ಲಿ ಸಂತಸ ಮನೆಮಾಡಿತು. ನಾಲ್ಕು ವರ್ಷಗಳ ಬಳಿಕ ನಾಲೆಗಳಿಗೆ ನೀರು ಹರಿಸಲು ಜಿಲ್ಲೆಯ ಸಂಸದರು, ವಿವಿಧ ಮಠಾಧೀಶರು ಸಾಥ್ ನೀಡಿದರು.
ನಂತರ ರೈತರನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ಕೆ. ಪೂರ್ಣಿಮಾ, ""ರೈತರ ಬಹುದಿನಗಳ ಕನಸು ಇಂದು ನನಸಾಗಿದೆ. ಮೈಸೂರು ಮಹಾರಾಜರ ತಾಯಿಯ ನೆನಪಿಗೋಸ್ಕರ ವಾಣಿವಿಲಾಸ ಸಾಗರ ಅಣೆಕಟ್ಟೆಯನ್ನು ಕಟ್ಟಿದಂತಹ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರವಿದೆ. ಅವರನ್ನು ಪ್ರತಿಯೋಬ್ಬ ರೈತರು ಹಾಗೂ ಈ ಜಿಲ್ಲೆಯ ಜನತೆ ಅವರನ್ನು ಪೂಜಿಸಬೇಕು'' ಎಂದರು.
ವಿವಿ ಸಾಗರ ಡ್ಯಾಂನಲ್ಲಿ ಸೋರಿಕೆ; ರೈತರಿಗೆ ಆತಂಕ ಬೇಡ
ಇಂದಿನಿಂದ ಒಂದು ತಿಂಗಳ ಕಾಲ ನಾಲೆಗಳಿಗೆ ನೀರು ಹರಿಸಲಾಗುವುದು. 1.02. ಟಿಎಂಸಿ ನೀರು, ಸುಮಾರು 30 ಸಾವಿರ ಎಕರೆಗೆ ಹಾಯಿಸಬಹುದು, ನೀರನ್ನು ಮಿತವಾಗಿ ಬಳಸಿ, ಯಾವುದೇ ಕಾರಣಕ್ಕೂ ನೀರು ಪೋಲ್ ಆಗದಂತೆ ನೋಡಿಕೊಳ್ಳಬೇಕು ಎಂದು ರೈತರಿಗೆ ಕರೆ ನೀಡಿದರು.
ಚುನಾವಣಾ ಪೂರ್ವದಲ್ಲಿ ಭರವಸೆಯನ್ನು ನೀಡಿ ಮತ ಪಡೆದಿದ್ದೆ ಅದರಂತೆ ನಡೆಯುತ್ತಿದ್ದೇನೆ. ಹಿರಿಯೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನ ಆದ್ಯತೆ ನೀಡುತ್ತೆನೆ. ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬವಾಗಿದ್ದು, ಆದಷ್ಟು ಬೇಗ ಮುಗಿಸಲಾಗುವುದು ಎಂದರು.
ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿಂದೆ ಇಬ್ಬರು ಡಾಕ್ಟರ್ ಇದ್ದರು, ಈಗ 8 ಜನ ಡಾಕ್ಟರ್ ಗಳು ಇದ್ದಾರೆ. ಈಗಾಗಲೇ ಹಿರಿಯೂರಿಗೆ ಬಸ್ ಡೀಪೋ ಅವಶ್ಯಕತೆ ಇದ್ದು, ಸಾರಿಗೆ ಸಚಿವರು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಆರಂಭ ಮಾಡಲಾಗುವುದು ಎಂದು ತಿಳಿಸಿದರು.
ತಾಲ್ಲೂಕಿಗೆ 5 ಸಾವಿರ ಮನೆಗಳಿಗೆ ವಸತಿ ಸಚಿವರ ಹತ್ತಿರ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಧರ್ಮಪುರ ಕೆರೆಗಳಿಗೆ ನೀರು ಹರಿಸುವ ಯೋಜನೆ ಕೈಗೊಳ್ಳಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಸಂಸದ ಎ. ನಾರಾಯಣ ಸ್ವಾಮಿ, ಮುರುಘಾಮಠದ ಡಾ. ಶಿವಮೂರ್ತಿ ಶರಣರು, ಶಾಂತವೀರ ಸ್ವಾಮೀಜಿ, ಬಸವ ಯಾದವನಂದ ಶ್ರೀಗಳು, ಪುರುಷೋತ್ತಮ ಶ್ರೀಗಳು, ಕಬೀರಾನಂದ ಶ್ರೀಗಳು, ಡಿ.ಟಿ. ಶ್ರೀನಿವಾಸ್, ರೈತ ಮುಖಂಡರು ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.