ವರ್ಷಗಳ ಬಳಿಕ ವಾಣಿವಿಲಾಸ ಸಾಗರದಿಂದ ನಾಲೆಗಳಿಗೆ ನೀರು
ಚಿತ್ರದುರ್ಗ, ಮಾರ್ಚ್ 04: ನಾಲ್ಕು ವರ್ಷಗಳ ಬಳಿಕ ಇದೆ ಮೊದಲ ಬಾರಿಗೆ ವಾಣಿವಿಲಾಸ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಹಿರಿಯೂರು ಭಾಗದ ರೈತರ ಮೊಗದಲ್ಲಿ ಒಂದಷ್ಟು ಮಂದಹಾಸ ಮೂಡಿಸಿದೆ.
ವಾಣಿ ವಿಲಾಸ ಜಲಾಶಯದಿಂದ ಎಡನಾಲೆ ಮತ್ತು ಬಲನಾಲೆಗಳಿಗೆ ಸುಮಾರು ಒಂದು ತಿಂಗಳ ಕಾಲ ನೀರು ಹರಿಸುವ ಸಾಧ್ಯತೆ ಇದೆ. ಈ ತಿಂಗಳ ಮಾರ್ಚ್ 6 ರಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಸಂಸದ ಎ.ನಾರಾಯಣಸ್ವಾಮಿ, ಜಿಲ್ಲೆಯ ಮಠಾಧೀಶರು ಸೇರಿದಂತೆ ಕಣಿವೆ ಮಾರಮ್ಮ ದೇವರಿಗೆ ಹಾಗೂ ಜಲಾಶಯಕ್ಕೆ ಪೂಜೆ ಸಲ್ಲಿಸಿ ನಂತರ ನೀರು ಹರಿಸಲು ಚಾಲನೆ ನೀಡಲಾಗುವುದು ಎಂದು ತಿಳಿದು ಬಂದಿದೆ.
ವಿವಿ ಸಾಗರ ಡ್ಯಾಂನಲ್ಲಿ ಸೋರಿಕೆ; ರೈತರಿಗೆ ಆತಂಕ ಬೇಡ
ಈ ಹಿಂದೆ 2016 ರಲ್ಲಿ ನಾಲೆಗಳಿಗೆ ನೀರು ಹರಿಸಲಾಗಿತ್ತು. ನಾಲ್ಕು ವರ್ಷಗಳ ಬಳಿಕ ಮತ್ತೆ ನೀರು ಹರಿಸುತ್ತಿದ್ದಾರೆ. ಮಧ್ಯೆ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಜನತೆ ನೀರಿಲ್ಲದೆ ಸೊರಗುವ ಪರಿಸ್ಥಿತಿ ಉಂಟಾಗುವ ಸಂದರ್ಭದಲ್ಲಿ ಈ ಭಾಗದ ಜನತೆಯ ಕಷ್ಟಗಳನ್ನು ಅರಿತ ಏಕೈಕ ರಾಜಮನೆತನ ಎಂದರೆ ಮೈಸೂರು ಒಡೆಯರ ರಾಜಮನೆತನ. ರೈತರ ಬಾಳಿಗೆ ಆಶಾ ಕಿರಣವಾಗಿದ್ದು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್.
ಮೈಸೂರು ಒಡೆಯರ್ ಕಟ್ಟಿಸಿದ ವಾಣಿವಿಲಾಸ ಸಾಗರ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿ ಚಿತ್ರದುರ್ಗದ ಹಿರಿಯೂರು ನಗರದ ಮೂಲಕ ಆಂಧ್ರಪ್ರದೇಶ ಸೇರುವ ವೇದಾವತಿ ನದಿಗೆ 1907 ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಅರಸರು ವಾಣಿವಿಲಾಸಪುರ ಗ್ರಾಮದ ಬಳಿ ಮಾರಿಕಣಿವೆ ಪ್ರದೇಶದಲ್ಲಿ ಅಡ್ಡಲಾಗಿ ಆಣೆಕಟ್ಟನ್ನು ಮೈಸೂರು ಒಡೆಯರ ತಾಯಿ ಕೆಂಪನಂಜಮ್ಮಣ್ಣಿ ಅವರ ಸವಿನೆನಪಿಗಾಗಿ ಕಟ್ಟಿಸಿದರು.
ವೇದಾವತಿ ನದಿಯಿಂದ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಚಿತ್ರದುರ್ಗದ ರೈತರಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮಾಡಿ ಈ ಭಾಗದಲ್ಲಿನ ನೀರಿನ ಬವಣೆಯನ್ನು ತಪ್ಪಿಸಿ ರೈತರ ಜೀವನಕ್ಕೆ ದಾರಿದೀಪ ತೋರಿದ್ದು, ವಾಣಿವಿಲಾಸ ಜಲಾಶಯ.
1901 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಭೇಟಿ
130 ಅಡಿ ನೀರು ಹೊಂದುವ ಸಾಮರ್ಥ್ಯ (30 ಟಿಎಂಸಿ) ಈ ಜಲಾಶಯದ ಒಟ್ಟು ಎತ್ತರ 43.28 ಮೀಟರ್ (142 ಅಡಿ), ಉದ್ದ 405. 50 ಮೀಟರ್, ಜಲಾವೃತ ಪ್ರದೇಶ 5374 ಚದರ ಕಿಲೋಮೀಟರ್, ಒಟ್ಟು 30 ಟಿಎಂಸಿ ನೀರು ಸಂಗ್ರಹವಾಗುತ್ತದೆ.
ವಿವಿ ಸಾಗರದಲ್ಲಿ ನೀರಿದ್ದರೂ ರೈತರಿಗೆ ಯಾಕೆ ಬಿಡುತ್ತಿಲ್ಲ?
1901 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನವರು ಸ್ವತಃ ವಾಣಿವಿಲಾಸ ಸಾಗರ ಜಲಾಶಯಕ್ಕೆ ಭೇಟಿ ನೀಡಿದ್ದರು. ಈ ಜಲಾಶಯದ ನಿರ್ಮಾಣದ ಹಿಂದೆ ಇಂಜಿನೀಯರ್ ಗಳಾದ ಹೆಚ್.ಡಿ.ರೈಸ್, ಮೇಕನೀಲ್ ಕ್ಯಾಂಪ್ ಬೆಲ್, ಚುನ್ನಿಲಾಲ್ ತಾರಾಚಾಂದ್ ದಲಾಲ್ ಅವರು ಪ್ರಾಮಾಣಿಕ ಪ್ರಯತ್ನ ಇದೆ.
ಒಂದು ತಿಂಗಳವರೆಗೆ ನೀರು ಬಿಡಲು ಆದೇಶ
ಇಂದು ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆಯ ಡಿಆರ್ ಡಿಒ ಕುಡಿಯುವ ನೀರಿಗೆ ವಿವಿ ಸಾಗರವೇ ಆಧಾರವಾಗಿದೆ. ಹಿರಿಯೂರಿನ ಸಾವಿರಾರು ಎಕರೆಗಳಲ್ಲಿ ಬೆಳೆಯುವ ತೆಂಗು, ಅಡಿಕೆ, ಬಾಳೆ, ದಾಳಿಂಬೆ ಮತ್ತಿತರ ಬೆಳೆಗಳು ಸೇರಿದಂತೆ ರೈತರ ಕೃಷಿ ಚಟುವಟಿಕೆಗಳು ವಾಣಿವಿಲಾಸ ಜಲಾಶಯದ ಮೇಲೆ ಅವಲಂಬಿತವಾಗಿದೆ.
ಒಂದು ತಿಂಗಳ ಕಾಲ ನಾಲೆಗಳಿಗೆ ಹರಿಯುವ ನೀರು ಸುಮಾರು 1.02 ಟಿಎಂಸಿ ಬೇಕಾಗುತ್ತದೆ ಎನ್ನುತ್ತಾರೆ ವಿಶ್ವೇಶ್ವರಯ್ಯ ನೀರಾವರಿ ಜಲ ನಿಗಮದ ಅಧಿಕಾರಿಗಳು.
ಯುಗಾದಿಗೆ ರೈತರ ಮೊಗದಲ್ಲಿ ಸಂತಸ
ನೀರು, ಮೇವು ಇಲ್ಲದೆ ದನಕರುಗಳು ಕಂಗಲಾಗಿದ್ದವು. ಜಲಾಶಯದಲ್ಲಿ ನೀರಿಲ್ಲದೇ ಸುಮಾರು 40 ಸಾವಿರಕ್ಕೂ ಹೆಚ್ಚು ಎಕರೆಗಳಲ್ಲಿ ತೋಟಗಳು ಒಣಗಿ ರೈತರ ಆತಂಕಕ್ಕೆ ಒಳಗಾಗಿದ್ದರು. ಮಾರಿಕಣಿವೆ ಜಲಾಶಯವನ್ನೇ ಆಧಾರವಾಗಿ ನಂಬಿರುವ ಹಿರಿಯೂರಿನ ರೈತರು ಕಳೆದ ನಾಲ್ಕೈದು ವರ್ಷಗಳಿಂದ ಮಳೆ ಬಾರದ ಹಿನ್ನೆಲೆಯಲ್ಲಿ ಬರಗಾಲ ಆವರಿಸಿತ್ತು.
ಉಳಿದ ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹರಿಸಿದರು. ಬರಗಾಲಕ್ಕೆ ತುತ್ತಾಗಿದ್ದ ಹಿರಿಯೂರು ಇನ್ನು ಚೇತರಿಕೆ ಕಾಣುತ್ತಿಲ್ಲ. ಆದರೆ ಮಾರ್ಚ್ 6 ರಿಂದ ನಾಲೆಗಳಿಗೆ ನೀರು ಸೇರಿಸುವುದರಿಂದ ರೈತರಲ್ಲಿ ಸ್ವಲ್ಪ ಯುಗಾದಿ ಹಬ್ಬದ ಹೊಸತನ ಕಾಣಬಹುದಾಗಿದೆ.