ಆಗಸ್ಟ್ 10ರೊಳಗೆ ವಿವಿ ಸಾಗರಕ್ಕೆ ನೀರು ಬರದಿದ್ರೆ ರಾಜೀನಾಮೆ: ವೆಂಕಟರಮಣಪ್ಪ
ಚಿತ್ರದುರ್ಗ, ಜುಲೈ 4: ಜುಲೈ ತಿಂಗಳ ಅಂತ್ಯದಲ್ಲಿ ಭದ್ರೆ ನೀರು ಹರಿಸಲು ಸಿದ್ಧತೆ ನಡೆಯುತ್ತಿದ್ದು, ಸ್ವಲ್ಪ ತಡವಾದರೂ ಆಗಸ್ಟ್ ಹತ್ತರ ಒಳಗೆ ಭದ್ರಾದಿಂದ ವಿವಿ ಸಾಗರಕ್ಕೆ ನೀರು ಬರುವುದು ಖಚಿತ. ಒಂದು ವೇಳೆ ಭದ್ರಾದಿಂದ ವಿವಿ ಸಾಗರಕ್ಕೆ ನೀರು ಹರಿಯದಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಹೇಳಿದ್ದಾರೆ.
ಒತ್ತಡಕ್ಕೆ ಮಣಿದ ಜಿಲ್ಲಾಡಳಿತ, ವಿವಿ ಸಾಗರ ಹೋರಾಟಕ್ಕೆ ತಾತ್ಕಾಲಿಕ ಜಯ
ಹಿರಿಯೂರು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ವಿವಿಧ ಸಂಘಟನೆಗಳು ಡೆಡ್ ಸ್ಟೋರೇಜ್ ನೀರು ಉಳಿಸಿ ಡ್ಯಾಂ ರಕ್ಷಿಸಿ, ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸಿ ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಸಚಿವ ವೆಂಕಟರಮಣಪ್ಪ ಇಂದು ಎರಡನೇ ಬಾರಿಗೆ ಭದ್ರಾ ಕಾಮಗಾರಿ ವೀಕ್ಷಣೆಗೆ ಹೋಗಿದ್ದರು.
ವಿಷಯ ತಿಳಿದು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಡೆಸುತ್ತಿರುವವರನ್ನು ಉದ್ದೇಶಿಸಿ ಮತಾನಾಡಿದ ಸಚಿವರು, ತಾಲ್ಲೂಕಿನಲ್ಲಿ ಮಳೆಯಾಗಿಲ್ಲದ ಕಾರಣ ತಾಲ್ಲೂಕು ಬರಕ್ಕೆ ತುತ್ತಾಗಿದೆ. ಆದರೆ ಆಗಸ್ಟ್ ಹತ್ತರ ಒಳಗೆ ಭದ್ರಾ ನೀರು ವಿವಿ ಸಾಗರಕ್ಕೆ ಬರಲಿಲ್ಲ ಅಂದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.