ನೀರೇ ಮಾಯವಾಗಿದ್ದ ಚಿತ್ರದುರ್ಗದಲ್ಲೀಗ ಭರ್ಜರಿ ಮಳೆ; 81 ಅಡಿ ಮುಟ್ಟಿದ ವಿವಿ ಸಾಗರ
ಚಿತ್ರದುರ್ಗ, ಅಕ್ಟೋಬರ್ 22: ಬರಗಾಲದಿಂದ ಕಂಗಾಲಾಗಿದ್ದ ಚಿತ್ರದುರ್ಗದಲ್ಲಿ ಇದೀಗ ನಿರಂತರ ಮಳೆಯಾಗುತ್ತಿದೆ. ಮೊನ್ನೆ ಸಂಜೆಯಿಂದ ಆರಂಭವಾಗಿ ನಿನ್ನೆ ತಡ ರಾತ್ರಿಯವರೆಗೂ ಮಳೆಯ ಆರ್ಭಟ ಮುಂದುವರೆದಿದ್ದು, ಸುರಿದ ಮಳೆಗೆ ಹೊಸದುರ್ಗ ತಾಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ಸೇತುವೆ ಕಾಮಗಾರಿ ಅಲ್ಪ ಮಟ್ಟದಲ್ಲಿ ಕೊಚ್ಚಿ ಹೋಗಿದೆ.
ಅಪಾಯ ಮಟ್ಟದಲ್ಲಿ ಕೆಲ್ಲೋಡ್ ಚೆಕ್ ಡ್ಯಾಂ ತುಂಬಿ ಹರಿಯುತ್ತಿದ್ದು, ಪಕ್ಕದ ಕಂಠಾಪುರ ಗ್ರಾಮದ ಮನೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ. ಸುತ್ತಮುತ್ತಲ ಹಲವು ಗ್ರಾಮಗಳೂ ಮುಳುಗಡೆ ಹಂತದಲ್ಲಿವೆ. ಕೆಲ್ಲೋಡ್ ಚೆಕ್ ಡ್ಯಾಂ ಮೈದುಂಬಿ ಹರಿಯುತ್ತಿರುವುದರಿಂದ ಹೊಸದುರ್ಗ - ಬೆಂಗಳೂರು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಜಾನಕಲ್ ಗ್ರಾಮದಲ್ಲಿ ಸುರಿದ ಮಳೆಗೆ ಹೊಸದುರ್ಗ ಸಂಪರ್ಕಿಸುವ ರಸ್ತೆಯಲ್ಲಿ ಕೂಡ ಭಾರೀ ನೀರು ಹರಿಯುತ್ತಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ಕಲ್ಮನೆ ಕಾಮೇಗೌಡರ ಚೆಕ್ ಡ್ಯಾಂನಲ್ಲಿ ಈಗ ನೀರ ಹಾಡು
ತಾಲೂಕಿನ ಅಗಸರಹಳ್ಳಿ ಕೆರೆ ಹತ್ತು ವರ್ಷಗಳ ನಂತರ ತುಂಬಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸುರಿದ ವರ್ಷಧಾರೆಗೆ ಈಗಾಗಲೇ ಜಿಲ್ಲೆಯ ಬಹುತೇಕ ಕೆರೆ ಕಟ್ಟೆಗಳು, ಚೆಕ್ ಡ್ಯಾಂಗಳು ಮೈದುಂಬಿಕೊಂಡು ಕಂಗೊಳಿಸುತ್ತಿವೆ.
ಚಿತ್ರದುರ್ಗದ ಏಕೈಕ ಜಲಾಶಯ ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ಹರಿಯುವ ನೀರಿನ ಪ್ರಮಾಣ ಹೆಚ್ಚಾಗಿದೆ. ನಿನ್ನೆಗೆ 71.30 ಅಡಿಯಿದ್ದ ವಿವಿ ಸಾಗರದ ನೀರಿನ ಮಟ್ಟ ಇಂದು 81 ಅಡಿಗೆ ತಲುಪಿದ್ದು, ಜಲಾಶಯದ ನೀರು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
ಚಿತ್ರಗಳು : ಉಡುಪಿಯಲ್ಲಿ ದಿಢೀರ್ ಮಳೆ; ಕೊಚ್ಚಿ ಹೋದ ರಸ್ತೆ
ಬರಕ್ಕೆ ಸಿಲುಕಿದ್ದ ಚಿತ್ರದುರ್ಗದ ಜನತೆ ಭದ್ರಾ ನೀರಿನ ಮೊರೆ ಹೋಗಿದ್ದರು. ಆದರೆ ಇದೀಗ ಮಳೆಯಾಗುತ್ತಿರುವುದು ರೈತರ ಆತಂಕ ನೀಗಿಸಿದೆ.