ಎಲ್ಲೆಲ್ಲೂ ಮಳೆಯೋ ಮಳೆ, ಆದ್ರೆ ಇಲ್ಲಿ ಕಥೆ ಕೇಳೋರೇ ಇಲ್ಲ...
ಚಿತ್ರದುರ್ಗ, ಆಗಸ್ಟ್ 6: ರಾಜ್ಯದ ಬಹುತೇಕ ಕಡೆ ಜೋರು ಮಳೆಯಾಗುತ್ತಿದೆ. ಜಲಾಶಯಗಳೂ ಉಕ್ಕಿ ಹರಿಯುತ್ತಿವೆ. ಎಲ್ಲೆಲ್ಲೂ ಮಳೆಯದ್ದೇ ಕಾರುಬಾರು. ಆದರೆ ಚಿತ್ರದುರ್ಗದ ಹಿರಿಯೂರಿನ ವಿ.ವಿ. ಸಾಗರದ ಒಡಲು ಮಾತ್ರ ಇನ್ನೂ ಬರಿದಾಗೇ ಉಳಿದಿದೆ.
ರಾಜ್ಯದ ಲಿಂಗನಮಕ್ಕಿ ಜಲಾಶಯ, ಹೇಮಾವತಿ, ಕಬಿನಿ, ಹಾರಂಗಿ, ತುಂಗಭದ್ರಾ, ಬಸವಸಾಗರ ಡ್ಯಾಂ, ನೇತ್ರಾವತಿ ನದಿ, ಕೆಆರ್ ಎಸ್ ಮುಂತಾದ ಜಲಾಶಯಗಳು ಸೇರಿದಂತೆ ಸಣ್ಣ ಪುಟ್ಟ ಕೆರೆ ಕಟ್ಟೆಗಳು ಮಳೆಯಿಂದ ಮೈ ದುಂಬಿ ಹರಿಯುತ್ತಿವೆ. ಆದರೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿ ವಿಲಾಸ ಜಲಾಶಯ ಮಾತ್ರ ಬರಿದಾಗುತ್ತಿದೆ. ಜಲಾಶಯವಿರಲಿ, ಕೆರೆ ಕಟ್ಟೆಗಳಿಗೂ ಒಂದಿಷ್ಟು ನೀರು ಬಂದಿಲ್ಲ.
ಬೆಳಗಾವಿಯಲ್ಲಿ ಮನೆಯೊಳಗೇ ನುಗ್ಗಿದೆ ನೀರು: ನೆಲಕಚ್ಚುತ್ತಿವೆ ಸೂರು...
ಮಾರಿಕಣಿವೆ ಜಲಾಶಯ ಹಿರಿಯೂರು ತಾಲ್ಲೂಕಿಗಷ್ಟೇ ಅಲ್ಲ ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆಯ ಜನರ ಕುಡಿಯುವ ನೀರು ಪೂರೈಸುವ ಜೀವನಾಡಿ. ಕೃಷಿಗೂ ಇದೇ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಕಳೆದ ಐದಾರು ವರ್ಷಗಳಿಂದ ತಾಲೂಕಿನಲ್ಲಿ ಮಳೆ ಇಲ್ಲದೆ ಅಣೆಕಟ್ಟೆಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದುಬಂದಿಲ್ಲ. ಪ್ರಸ್ತುತ ನೀರಿನ ಮಟ್ಟ 60.30 ಅಡಿ ಇದೆ. ಈಗಾಗಲೇ ಡ್ಯಾಂ ಡೆಡ್ ಸ್ಟೋರೇಜ್ ತಲುಪಿದ್ದು ಖಾಲಿಯಾಗುವ ಹಂತಕ್ಕೆ ಬಂದಿದೆ.
ಒಂದು ವೇಳೆ ಈ ಬಾರಿಯೂ ಸರಿಯಾಗಿ ಮಳೆ ಬಾರದೆ ಇದ್ದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವುದು ಗ್ಯಾರಂಟಿ. ಜಾನುವಾರುಗಳು ಮೇವಿಲ್ಲದೆ ಕಂಗಲಾಗಿದ್ದು ಈ ಭಾಗದ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ.
ಮಳೆಯಲ್ಲಿ ಶಾರದಾಂಬೆ ಸ್ನಾನಘಟ್ಟ, ಸಂಧ್ಯಾವಂದನಾ ಮಂಟಪವೂ ಮುಳುಗಡೆ?
ಹದಿನೈದು ವರ್ಷಗಳ ಹಿಂದೆ, ಅಂದರೆ 2000ನೇ ಸಾಲಿನಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ವಿ.ವಿ. ಸಾಗರಕ್ಕೆ ನೀರು ಹರಿದುಬಂದಿದ್ದು, ಇನ್ನೇನು ಕೋಡಿ ಬೀಳಬಹುದು ಅಂದುಕೊಂಡಿದ್ದರು. ಆಗ ಜಲಾಶಯದ ನೀರು 122.50 ಅಡಿ ತುಂಬಿ, ಕೋಡಿ ಬಿಳಲು 7.50.ಅಡಿ ಬಾಕಿ ಇತ್ತು. ನಂತರ 2010ರಲ್ಲಿ 112 ಅಡಿ ಬಂದಿದ್ದು ಬಿಟ್ಟರೆ ಅಲ್ಲಿಂದ ಇಲ್ಲಿಯವರೆಗೂ ಜಲಾಶಯದಲ್ಲಿ ಯಾವುದೇ ನೀರಿನ ಪ್ರಮಾಣ ದಾಖಲಾಗಿಲ್ಲ.