"ಮಾಡರ್ನ್ ಭಸ್ಮಾಸುರರು" ಎಂದು ಮೋದಿ, ಷಾ ಬಗ್ಗೆ ಕಿಡಿಕಾರಿದ ಉಗ್ರಪ್ಪ
ಚಿತ್ರದುರ್ಗ, ಜನವರಿ 20: "ನಮ್ಮ ದೇಶಕ್ಕೆ ಭಸ್ಮಾಸುರರು ವಕ್ಕರಿಸಿಕೊಂಡಿದ್ದಾರೆ. ಅದರಲ್ಲಿ ಮೋದಿ ಮತ್ತು ಅಮಿತ್ ಷಾ ಆಧುನಿಕ ಭಸ್ಮಾಸುರರು" ಎಂದು ಟೀಕಿಸಿದ್ದಾರೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ.
ಇಂದು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಇವರಿಂದಾಗಿ ದೇಶ ಅಧೋಗತಿಗೆ ಇಳಿಯುತ್ತಿದೆ. ಆರ್ಥಿಕತೆ ಡೋಲಾಯ ಸ್ಥಿತಿ ತಲುಪಿದೆ. ಕಾರ್ಖಾನೆಗಳು ಮುಚ್ಚುತ್ತಿವೆ. ದೇಶ ದಿವಾಳಿಯ ಅಂಚಿಗೆ ಹೋಗುತ್ತಿದೆ" ಎಂದು ಆಕ್ರೋಶಗೊಂಡರು.
ಯಡಿಯೂರಪ್ಪ 'ರಾಜಾ ಹುಲಿ' ಅಲ್ಲ 'ರಾಜಾ ಇಲಿ': ಉಗ್ರಪ್ಪ
"127 ರಾಷ್ಟ್ರಗಳಲ್ಲಿ ಹಸಿವಿನಲ್ಲಿ ನಾವು 102ನೇ ಸ್ಥಾನದಲ್ಲಿದ್ದೇವೆ. ಮೋದಿ, ಅಮಿತ್ ಶಾ ಏನು ಮಾಡುತ್ತಿದ್ದಾರೆ. ಮಾಡಬೇಕಾದ ಕೆಲಸ ಬಿಟ್ಟು ಸಿಎಎ, ಎನ್ಆರ್ ಸಿ ತಂದಿದ್ದಾರೆ. ವಿಶ್ವದ ಯಾವುದೇ ದೇಶದಲ್ಲೂ ಧರ್ಮದ ಆಧಾರದ ಮೇಲೆ ಪೌರತ್ವ ಕೊಡುವ ಕಾನೂನು ತಂದಿಲ್ಲ. ಆ ಕೆಲಸವನ್ನು ಮೋದಿ, ಅಮಿತ್ ಶಾ ಮಾಡುತ್ತಿದ್ದಾರೆ. ಸಮಾಜವನ್ನು ಒಡೆದು ಆಳುವ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
"ಮೋದಿಯವರೇ ಪೌರತ್ವದ ವಿಚಾರದಲ್ಲಿ ಜನಾದೇಶಕ್ಕೆ ಹೋಗೋಣ. ಬ್ಯಾಲೆಟ್ ಪೇಪರ್ ಮೇಲೆ ನೀವು ಗೆದ್ದು ಬಂದರೆ ನಿಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ. ನೀವು ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಬನ್ನಿ" ಎಂದು ಸವಾಲು ಹಾಕಿದರು.
ಮಂಗಳೂರು ಗೋಲಿಬಾರ್ ವಿಡಿಯೋ ಬಹಿರಂಗ: ಉಗ್ರಪ್ಪ ಏನಂದ್ರು?
ಇದೇ ಸಂದರ್ಭ ಯಡಿಯೂರಪ್ಪನವರನ್ನು ಟೀಕಿಸಿದ ಅವರು, "ರಾಜಾ ಹುಲಿ ಯಡಿಯೂರಪ್ಪ ಈಗ ರಾಜಾ ಇಲಿ ಆಗಿದ್ದಾರೆ. ಅವರಿಗೆ ಕ್ಯಾಬಿನೆಟ್ ವಿಸ್ತರಿಸಲು ಸ್ವತಂತ್ರ ಇಲ್ಲ. ಸಚಿವ ಸ್ಥಾನದ ವಿಚಾರ ಬಿಟ್ಟು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತಿಲ್ಲ. ಇದಕ್ಕೆಲ್ಲಾ ಯಡಿಯೂರಪ್ಪ ಅವರ ಅಸಹಾಯಕತೆ ಕಾರಣ. ನಿಷ್ಕ್ರಿಯ ಮುಖ್ಯಮಂತ್ರಿ ಎಂಬ ಹೆಸರು ಪಡೆದುಕೊಳ್ಳಬೇಕಿದ್ದರೆ ಹೀಗೇ ಇರಿ. ಇಲ್ಲದಿದ್ದರೆ ಹೈಕಮಾಂಡ್ ವಿರುದ್ಧ ಸಿಡಿದು ನಿಂತು ರಾಜ್ಯದ ಅಭಿವೃದ್ಧಿ ಮಾಡಿ" ಎಂದಿದ್ದಾರೆ.