ಕುಮಾರಸ್ವಾಮಿಗೆ ಹಾಕುವ ಮತವೇ ನನಗೆ ಮದುವೆ ಉಡುಗೊರೆ: ಆಮಂತ್ರಣ ಪತ್ರಿಕೆ ವೈರಲ್
ಚಿತ್ರದುರ್ಗ ಮೇ 7: 2023 ರ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದ್ದು ಈಗಾಗಲೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ರಾಜಕೀಯ ಪಕ್ಷಗಳಲ್ಲಿ ಲೆಕ್ಕಾಚಾರ ಗರಿಗೆದರಿತ್ತಿವೆ.
ಇನ್ನೊಂದು ಕಡೆ ಪಕ್ಷದ ಕಾರ್ಯಕರ್ತರು ಸಹ ಪಕ್ಷವನ್ನು ಅಧಿಕಾರಕ್ಕೆ ತರಲು ವಿಭಿನ್ನ ಶೈಲಿಯಲ್ಲಿ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಹರಸಾಹಸ ಪಡುತ್ತಿದೆ. ಈಗಾಗಲೇ ಪಕ್ಷದ ವತಿಯಿಂದ ಜನತಾ ಜಲಧಾರೆ ಕಾರ್ಯಕ್ರಮ ನಡೆಯುತ್ತಿದೆ. ಅದರಂತೆ ಇಲ್ಲೊಬ್ಬ ವರ 2023ರಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ನೀಡುವ ಮತವೇ ನೀವು ನೀಡುವ ಉಡುಗೊರೆ ಎಂಬ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ.
ಆಡಳಿತ ಪಕ್ಷಗಳ ದುರಾಡಳಿತ, ಭ್ರಷ್ಟಾಚಾರ, ಹಗರಣಗಳು ಹಾಗು ರಾಷ್ಟೀಯ ಪಕ್ಷಗಳ ಕಚ್ಚಾಟದ ಬಗ್ಗೆ ಬೇಸತ್ತಿದ್ದೇನೆ ಎಂದಿರುವ ಯುವಕನೋರ್ವ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುಂಬರುವ ಚುನಾವಣೆಯಲ್ಲಿ ನೀವು ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡುವ ಮತವೇ ನನಗೆ ಉಡುಗೊರೆ ಎಂದು ಹಾಕಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪಿ.ಗೌರೀಪುರ ಗ್ರಾಮದ ಪುಟ್ಟಮ್ಮ ನಾಗರಾಜಪ್ಪ ದಂಪತಿಯ ಪುತ್ರ ಜಯಕುಮಾರ್ ಇಂತಹದ್ದೊಂದು ವಿಶೇಷ ಮದುವೆ ಆಮಂತ್ರಣ ಹಂಚುತ್ತಿದ್ದು, ಇದೀಗ ಈ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.
ಜೆಡಿಎಸ್ ಅಧಿಕಾರಕ್ಕೆ ತನ್ನಿ:
ಮೇ18ರಂದು ನಡೆಯಲಿರುವ ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂಬ ಹಂಬಲ ಹೊಂದಿರುವ ಮದುಮಗ ಎನ್. ಜಯಕುಮಾರ್ ಸ್ನಾತಕೋತ್ತರ ಪದವಿಧರ ಆಗಿದ್ದಾನೆ. ಮದುಮಗಳು ಎಸ್. ಜ್ಯೋತಿಲಕ್ಷ್ಮೀ ಸಹ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ.
ಈ ಹಿಂದೆ ಸಿಎಂ ಆಗಿ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಜನಪರ ಆಡಳಿತವನ್ನು ಸ್ಮರಿಸಿಕೊಳ್ಳುತ್ತಾ, ಮತ್ತೊಮ್ಮೆ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಹೊತ್ತಿದ್ದಾರೆ. ಲಗ್ನ ಪತ್ರಿಕೆ ಒಳಭಾಗದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪೋಟೋ ಹಾಕಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಹಾಗೂ ಮೋದಿಗೆ ಮತ ಚಲಾಯಿಸಿ ಎಂಬ ಲಗ್ನಪತ್ರಿಕೆಗಳು ವೈರಲ್ ಆಗಿದ್ದನ್ನು ಒಮ್ಮೆ ಇಲ್ಲಿ ಸ್ಮರಿಸಬಹುದು.
ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಯುವಕನೊಬ್ಬ ಮದುವೆಯ ಆಮಂತ್ರಣ ಪತ್ರಿಕೆ ಗಮನ ಸೆಳೆದಿದ್ದು, "ನವ ಕರ್ನಾಟಕ ನಿರ್ಮಾಣಕ್ಕಾಗಿ ಜೆಡಿಎಸ್". ಆಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಇದೇ ನಮಗೆ ಕೊಡುವ ಉಡುಗೊರೆ ಎಂದಿದ್ದಾನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಯಾರ ಕೈ ಹಿಡಿಯುತ್ತಾನೆ ಕಾದು ನೋಡಬೇಕಿದೆ.