ಚಿತ್ರದುರ್ಗ ಪ್ರವೇಶಿಸಿದ್ದಾನೆ ವಿಷ್ಣು ರೂಪಿ ಮಹಾಗಣಪ
ಚಿತ್ರದುರ್ಗ, ಆಗಸ್ಟ್ 30: ಚಿತ್ರದುರ್ಗದ ಮಹಾಗಣಪತಿ ಎಂದರೆ ರಾಜ್ಯದಲ್ಲಿಯೇ ಹೆಸರುವಾಸಿ. ಈ ಬಾರಿಯೂ ಮಹಾ ಗಣಪತಿಯ ಮೂರ್ತಿಗೆ ಚಿತ್ರದುರ್ಗದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ನಿನ್ನೆ ನಗರದ ಹೊರವಲಯದ ಶ್ರೀ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಪೂಜೆ ಸಲ್ಲಿಸುವ ಮೂಲಕ ಗಣಪನನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ.
ನಂತರ ಶ್ರೀ ಮಠದಿಂದ ಮೂರ್ತಿಯನ್ನು ಸಾವಿರಾರು ಭಕ್ತರು, ಕಾರ್ಯಕರ್ತರು ಸಂಭ್ರಮದಿಂದ ಮೆರವಣಿಗೆ ಮೂಲಕ ನಗರದ ಸ್ಟೇಡಿಯಂ ರಸ್ತೆಯಲ್ಲಿರುವ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಕ್ಕೆ ತಂದರು.
ಜೆಪಿ ನಗರದಲ್ಲಿ 30 ಅಡಿ ಪರಿಸರ ಸ್ನೇಹಿ ʼತೆಂಗಿನಕಾಯಿ ಗಣೇಶʼ ದರ್ಶನ
ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುವ ಮಹಾ ಗಣಪತಿ ಹಬ್ಬ ಈ ವರ್ಷವೂ ವಿಜೃಂಭಣೆಯಿಂದ ನಡೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮೂರ್ತಿಯನ್ನು ಮಹಾರಾಷ್ಟ್ರದ ಸಾಂಗ್ಲಿಯಿಂದ ತರಲಾಗಿದೆ. 15 ಅಡಿ ಎತ್ತರದ ವಿಷ್ಣು ರೂಪಿಯಾದ ವಿಗ್ರಹವನ್ನು ಅಂದಾಜು ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದೆ.
ಪ್ರತಿ ವರ್ಷವೂ ಮಹಾಗಣಪತಿ ಯಾವ ರೂಪದಲ್ಲಿ ಬರುತ್ತಾನೆ ಎನ್ನುವ ಕುತೂಹಲ ಚಿತ್ರದುರ್ಗ ಜಿಲ್ಲೆಯ ಜನರಲ್ಲಿರುತ್ತದೆ. ಈ ವರ್ಷದ ಗಣಪತಿ ಬಗ್ಗೆ ಕೂಡ ಬಹಳಷ್ಟು ನಿರೀಕ್ಷೆ ಇದ್ದು, ವಿಷ್ಣು ರೂಪಿ ಗಣಪ ಜನರನ್ನು ಸೆಳೆದಿದ್ದಾನೆ.
ಗಣೇಶ ಚತುರ್ಥಿ; ಪರಿಸರಸ್ನೇಹಿ ಗಣಪನ ಹಬ್ಬಕ್ಕೆ ದಾವಣಗೆರೆಯಲ್ಲಿ ತಯಾರಿ
ಈ ಗಣಪನನ್ನು ಕಣ್ತುಂಬಿಕೊಳ್ಳಲು ನೂರಾರು ಮಂದಿ ಮಠದತ್ತ ಧಾವಿಸಿದ್ದರು. ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯಗಳೂ ಕಂಡುಬಂದವು. ಈ ಸಂದರ್ಭದಲ್ಲಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.