ದೆಹಲಿಯಲ್ಲಿ ರೈತರ ಮೇಲಿನ ದೌರ್ಜನ್ಯ: ಚಿತ್ರದುರ್ಗದಲ್ಲಿ ಹೆದ್ದಾರಿ ಬಂದ್
ಚಿತ್ರದುರ್ಗ, ಡಿಸೆಂಬರ್ 3: ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕೋಟೆನಾಡು ಚಿತ್ರದುರ್ಗದಲ್ಲಿ ರೈತರು ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಬಳಿ ಹಾದುಹೋಗುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ರೈತ ಸಂಘದ ನೇತೃತ್ವದಲ್ಲಿ ರಸ್ತೆ ತಡೆದು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಸರ್ಕಾರಕ್ಕೆ ಇದು ಕೊನೆ ಅವಕಾಶ: ರೈತ ಸಂಘಟನೆಗಳ ಎಚ್ಚರಿಕೆ
"ದೆಹಲಿ ಚಲೋ' ಮೂಲಕ ದೇಶದ ಹಲವು ರಾಜ್ಯಗಳ ರೈತರು ದೆಹಲಿಯ ಗಡಿ ಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಧರಣಿ ನಿರತ ರೈತರ ಮೇಲೆ ಲಾಠಿ ಚಾರ್ಜ್, ಜಲ ಫಿರಂಗಿಯಂತಹ ದೌರ್ಜನ್ಯ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ನಡೆಸುತ್ತಿಲ್ಲ, ಬದಲಿಗೆ ಅಂಬಾನಿ, ಅದಾನಿಯ ಇತರೆ ಕಂಪನಿಗಳು ಸರ್ಕಾರವನ್ನು ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಜನರಿಗೆ ವಚನವನ್ನು ಕೊಟ್ಟು ಅಧಿಕಾರಕ್ಕೆ ಬಂದು, ಈಗ ಅದನ್ನು ಮರೆತಿದ್ದಾರೆ ಎಂದು ರೈತರು ಕಿಡಿಕಾರಿದರು.
ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸ್ ತರುತ್ತೇವೆ. ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದ ಪ್ರಧಾನಿ ಮೋದಿ, ನೋಟು ಬ್ಯಾನ್ ಮೂಲಕ ಜನರಿಗೆ ವಂಚನೆ ಮಾಡಿದ್ದಾರೆ. ಇದೇ ರೀತಿ ಸರ್ಕಾರ ಮುಂದುವರೆದರೆ ರೈತರು ಸರ್ವನಾಶವಾಗುತ್ತಾರೆ ಎಂದು ಕೇಂದ್ರ ಸರ್ಕಾರ ವಿರುದ್ಧ ರೈತರು ಗುಡುಗಿದರು.
Recommended Video
ಇನ್ನು ಚಿತ್ರದುರ್ಗದ ಚಳ್ಳಕೆರೆ ನಗರದಲ್ಲೂ ಕೂಡ ರೈತರು ಚಳ್ಳಕೆರೆ-ಬೆಂಗಳೂರು ರಸ್ತೆ ಹೆದ್ದಾರಿ ಬಂದ್ ಮಾಡಿ, ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ರೈತರ ಪ್ರತಿಭಟನೆಯಿಂದ ಕೆಲಕಾಲ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ನಂತರ ಪ್ರತಿಭಟನಾ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.