ಜಮೀನಲ್ಲಿ ಕಂಡ ದೇವರು; ಅಲ್ಲೇ ದೇವಸ್ಥಾನ ನಿರ್ಮಾಣಕ್ಕೆ ಪಟ್ಟು ಹಿಡಿದ ಗ್ರಾಮಸ್ಥರು
ಚಿತ್ರದುರ್ಗ, ನವೆಂಬರ್ 26: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಜಮೀನೊಂದರಲ್ಲಿ ಮೂರು ದಿನಗಳ ಹಿಂದಷ್ಟೆ ಕೆಲವು ಪುರಾತನ ವಿಗ್ರಹಗಳು ಪತ್ತೆಯಾಗಿದ್ದವು. ವಿಗ್ರಹಗಳ ಜೊತೆಗೆ ಕೆಲವು ಕಲ್ಲುಗಳೂ ದೊರೆತಿದ್ದು, ಇದೀಗ ಈ ಸ್ಥಳದ ಇತಿಹಾಸವನ್ನು ಹುಡುಕುವ ಪ್ರಯತ್ನ ಸಾಗಿದೆ.
ಈ ವಿಗ್ರಹ ಸುಮಾರು ಎಂಟು ನೂರು ವರ್ಷಗಳ ಹಿಂದಿನದ್ದು ಎಂದು ಅಂದಾಜಿಸಲಾಗಿದ್ದು, ವಿಗ್ರಹ ದೊರೆತ ಕ್ಷಣದಿಂದಲೂ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ತಂಡೋಪತಂಡವಾಗಿ ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ವಿಗ್ರಹ ದೊರೆತ ಜಾಗದಲ್ಲಿ ದೇವಸ್ಥಾನ ನಿರ್ಮಿಸಬೇಕೆಂದು ಚಪ್ಪರ ಕೂಡ ಹಾಕಿದ್ದಾರೆ ಗ್ರಾಮಸ್ಥರು.
ಎಲ್ಲಿ ದೊರೆತಿತ್ತು ವಿಗ್ರಹ?
ಮೂರ್ನಾಲ್ಕು ದಿನಗಳ ಹಿಂದೆ ಜಮೀನಿನಲ್ಲಿ ಜೆಸಿಬಿಯಿಂದ ಮಣ್ಣು ಹಸನುಗೊಳಿಸುವಾಗ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಗಿರಿಸ್ವಾಮಿ ಮತ್ತು ವೆಂಕಟರಮಣಪ್ಪ ಅವರ ಜಮೀನಿನ ಮಧ್ಯದಲ್ಲಿ ಕೆಲವು ವಿಗ್ರಹಗಳು ದೊರೆತಿದ್ದವು. ಶಂಕು, ಚಕ್ರ, ಗದೆ, ಕೀರಿಟ, ಜನಿವಾರ ಸಹಿತವಿದ್ದ 4 ಅಡಿ ಮೂರ್ತಿ ದೊರೆತಿದ್ದು ಗ್ರಾಮಸ್ಥರಲ್ಲಿ ಅಚ್ಚರಿ ತಂದಿತ್ತು. ಈ ವಿಗ್ರಹದ ಜೊತೆಗೆ ಎರಡು ಸಣ್ಣ ಲಿಂಗಗಳು, ನಂದಿ ವಿಗ್ರಹ, ಶಿವನ ಪೀಠ ದೊರೆತಿದ್ದವು. ದೇವರ ಶಿಲೆ ಸಿಕ್ಕ ಸ್ಥಳದಲ್ಲೇ ಹಳೆಯ ಕಲ್ಲುಗಳು, ಇಟ್ಟಿಗೆಗಳೂ ದೊರತಿವೆ.
ಚಿತ್ರದುರ್ಗದಲ್ಲಿ ರೈತನ ಜಮೀನಿನಲ್ಲಿ ಪ್ರತ್ಯಕ್ಷನಾದ ದೇವರು!
ಗುಡ್ಲೆಕುಂಟೆ ಗ್ರಾಮ ಇತ್ತು ಅನ್ನುವ ನಂಬಿಕೆ
ಈ ದೇವರ ವಿಗ್ರಹ ದೊರೆತ ಸ್ಥಳದಲ್ಲಿ ಗುಡ್ಲೆಕುಂಟೆ ಎಂಬ ಗ್ರಾಮವಿತ್ತು ಎಂದು ಹೇಳುತ್ತಾರೆ ಗ್ರಾಮಸ್ಥರು. ಹಿಂದೆ ಈ ಜಾಗದಲ್ಲಿ ಕಾಡುಗೊಲ್ಲರು ವಾಸಿಸುತ್ತಿದ್ದು, ಗೊಲ್ಲರಹಟ್ಟಿ ಇದಾಗಿತ್ತು ಎಂದು ಹೇಳಾಗುತ್ತಿದೆ. ಈ ಗುಡ್ಲೆಕುಂಟೆ ಎಂಬ ಗ್ರಾಮ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಸುಮಾರು ಎರಡು ಮೂರು ಕಿ.ಮೀ. ಇದ್ದ ಮಾಹಿತಿ ದೊರೆತಿದೆ.
ಪುರಾತತ್ವ ಇಲಾಖೆ ಭೇಟಿ ಯಾವಾಗ?
ದೇವರ ಮೂರ್ತಿ ದೊರೆತ ಸ್ಥಳಕ್ಕೆ ತಾಲೂಕು ದಂಡಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಧ್ಯಯನ ನಡೆಸಬೇಕಿದೆ. ನಂತರ ಈ ಗ್ರಾಮದ ಇತಿಹಾಸ ದೊರೆಯುತ್ತದೆ.
ಕರುನಾಡಿನ ತುಂಗಭದ್ರೆಯ ತಟದಲ್ಲಿ ನೆಲೆಸಿದ್ದನಾ ಅಯೋಧ್ಯೆಯ ಶ್ರೀರಾಮ?
ದೇವಸ್ಥಾನ ಸ್ಥಾಪನೆಗೆ ಗ್ರಾಮಸ್ಥರ ಒತ್ತಾಯ
ಇಲ್ಲಿ ದೇವರ ವಿಗ್ರಹ ಮೂರ್ತಿ ದೊರೆತಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ಇಲ್ಲಿಯೇ ಅಧ್ಯಯನ ಮಾಡಲಿ, ಯಾವುದೇ ಕಾರಣಕ್ಕೂ ವಿಗ್ರಹವನ್ನು ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜೊತೆಗೆ ಇಲ್ಲಿಯೇ ದೇವಸ್ಥಾನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆ ಈ ಸ್ಥಳದಲ್ಲೇ ದೇವಸ್ಥಾನ ಇತ್ತು ಎನ್ನುವುದಕ್ಕೆ ದೇವಸ್ಥಾನದ ಬಂಡೆಗಳು, ಇಟ್ಟಿಗೆಗಳು ಹಾಗೂ ಶಿವಲಿಂಗ ದೊರೆತಿರುವುದು ಸಾಕ್ಷಿ. ಹಾಗಾಗಿ ವಿಗ್ರಹವನ್ನು ಇದೇ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಎಂದಿದ್ದಾರೆ. ಈಗಾಗಲೇ ಗ್ರಾಮಸ್ಥರು ಒಗ್ಗೂಡಿ ದೇವಸ್ಥಾನ ನಿರ್ಮಾಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.