"ನನಗೆ ಸಹಾಯ ಬೇಡ, ಈರುಳ್ಳಿ ಖರೀದಿಸಿ"; ವಿಡಿಯೋ ಮಾಡಿ ಮನವಿ ಮಾಡಿದ ಹಿರಿಯೂರು ರೈತ
ಚಿತ್ರದುರ್ಗ, ಏಪ್ರಿಲ್ 30: ಕೊರೊನಾ ಸೋಂಕು ಹರಡದಂತೆ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ರೈತರಿಗೆ ಇದು ಸಾಕಷ್ಟು ಹೊಡೆತ ಕೊಟ್ಟಿದೆ. ಚಿತ್ರದುರ್ಗದಲ್ಲೂ ಈರುಳ್ಳಿ ಮಾರಾಟವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Recommended Video
ಮೊನ್ನೆಯಷ್ಟೇ ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿ ಮಹಿಳೆಯೊಬ್ಬರು ಈರುಳ್ಳಿ ಬೆಲೆಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಈರುಳ್ಳಿ ಬೆಳೆದು ಕಂಗಾಲಾಗಿರುವ ಮತ್ತೊಬ್ಬ ರೈತನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
"ನನಗೆ ಸಹಾಯ ಬೇಡ, ಈರುಳ್ಳಿ ಕೊಂಡುಕೊಳ್ಳಿ"
ಹಿರಿಯೂರು ತಾಲ್ಲೂಕಿನ ಆದಿವಾಲ ಗೊಲ್ಲರಹಟ್ಟಿ ರೈತ ಮಹಾಲಿಂಗಪ್ಪ "ನನಗೆ ಸಹಾಯ ಬೇಡ, ನಾನು ಬೆಳೆದ ಈರುಳ್ಳಿ ಕೊಂಡುಕೊಳ್ಳಿ" ಎಂದು ವಿಡಿಯೋ ಮೂಲಕ ಖರೀದಿದಾರರಿಗೆ ಮನವಿ ಮಾಡಿದ್ದಾರೆ. "ನಾನು ಈರುಳ್ಳಿ ಬೆಳೆದು ಕಷ್ಟದಲ್ಲಿ ಇದ್ದೇನೆ. ಮಳೆ ಬಂದು ಟಾರ್ಪಲ್ ಹರಿದು ಹೋಗಿದೆ. ಮೋಟಾರ್ ಸುಟ್ಟು ಹೋಗಿದೆ. ದುಡ್ಡಿಲ್ಲ, ಮತ್ತೆ ಈರುಳ್ಳಿ ಬೀಜ ಹಾಕಬೇಕು. ನನಗೆ ಸಹಾಯ ಬೇಡ, ನಾನು ಬೆಳೆದ ಈರುಳ್ಳಿ ಕೊಂಡುಕೊಳ್ಳಿ" ಎಂದು ಕೇಳಿಕೊಂಡಿದ್ದಾರೆ.
ಲಾಕ್ ಡೌನ್: ಸಂಕಷ್ಟದಲ್ಲಿ ಚಿತ್ರದುರ್ಗದ ಈರುಳ್ಳಿ ಬೆಳೆಗಾರರು
"ಈರುಳ್ಳಿ ಫಸಲು ಚೆನ್ನಾಗಿದೆ, ಕೊಂಡುಕೊಳ್ಳಿ"
"ಯಾರಾದರೂ ಬಂದು ಈರುಳ್ಳಿ ಕೊಂಡುಕೊಳ್ಳಿ ಸ್ವಾಮಿ. ಈರುಳ್ಳಿ ಚೆನ್ನಾಗಿದೆ. ಇಂಥ ಇಳುವರಿ ಯಾವಾಗಲೂ ಬಂದಿಲ್ಲ. ಬರಗಾಲದಲ್ಲಿ ಬೆಳೆದಿರೋದು ಚೆನ್ನಾಗಿದೆ. ಬಂದು ಈರುಳ್ಳಿ ಕೊಂಡುಕೊಂಡು ಹೋಗಿ ಸ್ವಾಮಿ ಎಂದು ರೈತ ವಿಡಿಯೋದಲ್ಲಿ ಈರುಳ್ಳಿ ಕೊಳ್ಳುವವರಿಗೆ ಮನವಿ ಮಾಡಿಕೊಂಡಿದ್ದಾನೆ.
ಬೆಲೆ ಕುಸಿತ, ಶೇಖರಣೆಯಾದ ಈರುಳ್ಳಿ
ಚಿತ್ರದುರ್ಗ ಜಿಲ್ಲೆಯ ಸಾವಿರಾರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಸಾಗಿಸಲಾಗದೆ ರೈತರು ಶೆಡ್ ಗಳಲ್ಲಿ, ಹೊಲ, ಮನೆಗಳಲ್ಲಿ ನೂರಾರು ಚೀಲ ಈರುಳ್ಳಿ ಶೇಖರಿಸಿದ್ದಾರೆ. ಜೊತೆಗೆ ಬೆಲೆ ಕುಸಿತವೂ ಆಗಿದೆ. ಬೆಲೆ ಏರಿಕೆ ಕಂಡಿದ್ದ ಈರುಳ್ಳಿ ಲಾಕ್ ಡೌನ್ ಆದ ಪರಿಣಾಮ ಕುಸಿತ ಕಂಡಿದೆ. ಹೀಗಾಗಿ ರೈತರು ಈರುಳ್ಳಿ ಚೀಲಗಳನ್ನು ಶೇಖರಣೆ ಮಾಡಿಕೊಂಡು ಬೆಲೆ ಏರಿಕೆ ಕಾಣುವ ತವಕದಲ್ಲಿ ಇದ್ದಾರೆ.
ಬಳ್ಳಾರಿಯಲ್ಲಿ ಒಂದೂವರೆ ಎಕರೆ ಈರುಳ್ಳಿ ಕಟಾವು ಮಾಡಿ ಕದ್ದೊಯ್ದ ಖದೀಮರು!
ಸರ್ಕಾರ ಒತ್ತಾಯಿಸಿದ್ದ ಹಿರಿಯೂರು ಮಹಿಳೆ
ಲಾಕ್ ಡೌನ್ ಗೂ ಮುನ್ನ ಕ್ವಿಂಟಾಲ್ ಈರುಳ್ಳಿಗೆ 2,500 ರೂ. ಇತ್ತು. ನಂತರ 400 ರಿಂದ 1000 ರೂಪಾಯಿಗೆ ಇಳಿದಿದೆ. ಹೀಗಾಗಿ ಸರ್ಕಾರ ಕೂಡಲೇ ಈರುಳ್ಳಿಗೆ ಮಾರುಕಟ್ಟೆ ಒದಗಿಸಬೇಕು ಹಾಗೂ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿ ಮಹಿಳೆಯೊಬ್ಬರು ಸರ್ಕಾರವನ್ನು ಒತ್ತಾಯಿಸಿದ್ದರು.