ವಾಣಿವಿಲಾಸ ಸಾಗರ ಡ್ಯಾಂ ನೀರಿನ ಮಟ್ಟ ಏರಿಕೆ; ಜನರಿಗೆ ಆತಂಕ
ಚಿತ್ರದುರ್ಗ, ಆಗಸ್ಟ್, 12: ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ ಭರ್ತಿಗೆ ದಿನಗಣನೆ ಆರಂಭವಾಗಿದೆ. ಈ ವರ್ಷ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಹದ ಆತಂಕ ಎದುರಾಗಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಹಿರಿಯೂರು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
88 ವರ್ಷಗಳ ಬಳಿಕ ವಾಣಿವಿಲಾಸ ಸಾಗರ ಜಲಾಶಯ ನೀರಿನ ಸಂಗ್ರದಲ್ಲಿ ದಾಖಲೆ ಬರೆಯಲಿದೆ. 1933ರಲ್ಲಿ 135.25 ಅಡಿ ನೀರು ಭರ್ತಿಯಾಗಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಇದೀಗ 88 ವರ್ಷಗಳ ಬಳಿಕ ಎರಡನೇ ಬಾರಿಗೆ ಡ್ಯಾಂ ತುಂಬಿ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ.
ಚಿತ್ರದುರ್ಗ: ಭಾರೀ ಮಳೆ, ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳು
ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಹೊಸದುರ್ಗ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ವೇದಾವತಿ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ವಾಣಿವಿಲಾಸ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ 126.75 ಅಡಿ ಇದ್ದು, ಒಟ್ಟು 27.238 ಟಿಎಂಸಿ ನೀರು ಸಂಗ್ರವಾಗಿದೆ. ಇದು 88 ವರ್ಷಗಳ ನಂತರ ದಾಖಲೆಯಾಗಿದ್ದು, ಕೋಡಿ ಬೀಳಲು ಕೇವಲ 3.25 ಅಡಿ ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನದಿ ಪಾತ್ರದ ಜನರಿಗೆ ಶುರುವಾಯ್ತ ಆತಂಕ?
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇನ್ನು ಹೆಚ್ಚಿನ ಮಳೆಯಾಗುವ ಸಂಭವಿರುವುದರಿಂದ ಜಲಾಶಯ ಭರ್ತಿಗೆ ದಿನಗಣನೆ ಆರಂಭವಾಗಿದೆ. ಸ್ವಾಭಾವಿಕವಾಗಿ ಕೋಡಿ ಬೀಳುವ ಸಂದರ್ಭದಲ್ಲಿ ಹೆಚ್ಚುವರಿ ನೀರು ಹೊರ ಹೋಗುತ್ತದೆ. ಆದ್ದರಿಂದ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಮತ್ತು ಹೊಸದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಹರಿಯುವ ವೇದಾವತಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು. ತಗ್ಗು ಪ್ರದೇಶಗಳಲ್ಲಿ ಇರುವ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಜಾನುವಾರುಗಳನ್ನು ನದಿ ಪಾತ್ರದಲ್ಲಿ ಓಡಾಡದಂತೆ ನೋಡಿಕೊಳ್ಳಬೇಕು. ಹಾಗೂ ತಮ್ಮ ಆಸ್ತಿಪಾಸ್ತಿ ಸಂರಕ್ಷಣೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಈ ಮೂಲಕ ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿ
ಹಿರಿಯೂರು ತಾಲೂಕಿನ ವಾಣಿವಿಲಾಸಪುರ, ಕಾತ್ರಿಕೇನಳ್ಳಿ, ಲಕ್ಕವನಹಳ್ಳಿ, ಹಿರಿಯೂರು ನಗರ, ಮಾರುತಿ ನಗರ, ರಂಗನಾಥಪುರ, ಯಳನಾಡು, ಕೂಡ್ಲಳ್ಳಿ, ಸೂರನಹಳ್ಳಿ ಹಾಗೂ ಹಿರಿಯೂರು, ಹೊಸದುರ್ಗ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನ ವೇದಾವತಿ ನದಿ ಪಾತ್ರದ ಗ್ರಾಮಗಳು ವೇದಾವತಿ ನದಿ ಪಾತ್ರದಲ್ಲಿವೆ. ಒಂದು ವೇಳೆ ಡ್ಯಾಂ ಭರ್ತಿಯಾಗಿ ಹೆಚ್ಚು ನೀರು ಹೊರ ಬಂದರೆ ಕೆಲವು ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇರುವುದರಿಂದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದ ತಿಂಗಳು ಹಾಗೂ ಈ ತಿಂಗಳ ಸತತ ಮಳೆಯಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿದು ಬರುತ್ತಿದೆ. ಇಂದಿನ ವರದಿಯಲ್ಲಿ 2,569 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 126.75 ಅಡಿ ಇದೆ. 2021ರಲ್ಲಿ 125.50 ಅಡಿ ನೀರು ಸಂಗ್ರಹವಾಗಿ ದಾಖಲೆ ನಿರ್ಮಾಣವಾಗಿತ್ತು. ಇದೀಗ ಈ ದಾಖಲೆಯನ್ನು ಸರಿಗಟ್ಟುವ ಮೂಲಕ 88 ವರ್ಷಗಳ ಬಳಿಕ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಕೋಡಿ ಬೀಳಲು 3.28 ಅಡಿ ನೀರು ಬರಬೇಕಿದೆ.
ನೀರಿನ ಸಂಗ್ರಹದಲ್ಲಿ ವಿವಿ ಸಾಗರ ಹೊಸ ದಾಖಲೆ
ಕಳೆದ ತಿಂಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಈ ವರ್ಷ ಜಲಾಶಯದಲ್ಲಿ 6.75 ಅಡಿಗಳಷ್ಟು ಮಳೆ ನೀರು ಸಂಗ್ರಹವಾಗಿದೆ. 1932ರಲ್ಲಿ 125.50, 1933 ರಲ್ಲಿ 135.25, 1934ರಲ್ಲಿ 130.24 ಅಡಿ ನೀರು ಸಂಗ್ರಹವಾಗಿ ಇತಿಹಾಸ ನಿರ್ಮಾಣವಾಗಿತ್ತು. ನಂತರ 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.25 ಅಡಿ ನೀರು ಸಂಗ್ರಹವಾಗಿತ್ತು. ಬಳಿಕ 2000ನೇ ಇಸವಿಯಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ ನೀರು ಸಂಗ್ರಹವಾಗಿದೆ. ಇದೀಗ 1958ರ ದಾಖಲೆಯನ್ನು ಹಿಂದಿಕ್ಕಿ, ಡ್ಯಾಂ ನೀರಿನ ಮಟ್ಟ 125.50 ಅಡಿ ದಾಟಿ ಹೊಸ ದಾಖಲೆಯನ್ನು ನಿರ್ಮಿಸಲು ದಿನಗಣನೆ ಆರಂಭವಾಗಿದೆ.
ಬರಬರುತ್ತಾ ಹೆಚ್ಚಳವಾದ ನೀರಿನ ಮಟ್ಟ
ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಬತ್ತಿ ಹೋಗಿ, 63 ಅಡಿಯ ಡೆಡ್ ಸ್ಟೋರೆಜ್ಗೆ ನೀರಿನ ಮಟ್ಟ ತಲುಪಿತ್ತು. ಈ ವರ್ಷ ಡ್ಯಾಂ ನೀರಿನ ಮಟ್ಟ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಇದರಿಂದ ಹಿರಿಯೂರು ತಾಲೂಕಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳಿಗೆ ಹೊಸ ಭರವಸೆ ಸಿಕ್ಕಿದೆ.