Vani Vilasa Sagara : ವಿವಿ ಜಲಾಶಯ ಸುರಕ್ಷಿತವಾಗಿದೆ; ವದಂತಿಗೆ ತೆರೆ ಎಳೆದ ಅಣೆಕಟ್ಟೆ ಸುರಕ್ಷತಾ ಸಮಿತಿ
ಚಿತ್ರದುರ್ಗ, ಸೆಪ್ಟೆಂಬರ್ 8 : ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಗ್ರಾಮದ ಬಳಿ ಇರುವ ಮಾರಿಕಣಿವೆ ಡ್ಯಾಂ 89 ವರ್ಷಗಳ ಬಳಿಕ ದಾಖಲೆ ಮಟ್ಟದಲ್ಲಿ ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಜಲಾಶಯ ಬಿರುಕು ಬಿಟ್ಟಿದೆ, ಡ್ಯಾಂ ಸುರಕ್ಷಿತವಾಗಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಸುರಕ್ಷತೆ ಬಗ್ಗೆ ಗುರುವಾರ ಅಣೆಕಟ್ಟು ಸುರಕ್ಷಿತ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಕರ್ನಾಟಕ ಇಂಜಿನಿಯರ್ಸ್ ರಿಸರ್ಚ್ ಸ್ಟೇಶನ್ ಮುಖ್ಯ ಇಂಜಿನಿಯರ್ ಮಹೇಶ್, ಅಣೆಕಟ್ಟೆ ಸುರಕ್ಷಾ ಸಮಿತಿ ಸದಸ್ಯ ಕಮಲಾ ಶೇಖರನ್, ಭದ್ರಾ ಮೇಲ್ದಂಡೆ ಅಧೀಕ್ಷಕ ಇಂಜಿನಿಯರ್ ಶಿವಪ್ರಕಾಶ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಆರ್. ಚಂದ್ರಮೌಳಿ, ನಿವೃತ್ತ ಚೀಫ್ ಇಂಜಿನಿಯರ್ ಚೆಲುವರಾಜ್ ಇದ್ದ ತಂಡ ಪರಿಶೀಲನೆ ನಡೆಸಿತು.
Recommended Video
ಚಿತ್ರದುರ್ಗ; ವೇದಾವತಿ ನದಿಯ ಪ್ರವಾಹಕ್ಕೆ ಗ್ರಾಮಗಳು ಜಲಾವೃತ, ನಿರಾಶ್ರಿತ ಶಿಬಿರ ಸ್ಥಾಪನೆ
ಭದ್ರಾ ಮೇಲ್ದಂಡೆ ಯೋಜನೆ, ವಾಣಿವಿಲಾಸ ಅಣೆಕಟ್ಟೆ ನಿರ್ಮಾಣದ ಹಿಂದಿನ ಇತಿಹಾಸವನ್ನು ಭದ್ರಾ ಮೇಲ್ದಂಡೆ ಯೋಜನೆ ಅಧೀಕ್ಷಕ ಎಂಜಿನಿಯರ್ ಶಿವಪ್ರಕಾಶ್ ವಿವರಿಸಿದರೆ, ಅಣೆಕಟ್ಟೆ ಪ್ರದೇಶದ ಸುಂದರೀಕರಣಕ್ಕೆ, ನಾಲೆಗಳ ದುರಸ್ಥಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾಹಿತಿ ನೀಡಿದರು.
ಕೊಯಮತ್ತೂರ್ ಸರ್ ಹಲವು ಸಲಹೆಗಳನ್ನು ನೀಡಿದ್ದು, ಅವನ್ನು ಸಾರ್ವಜನಿಕವಾಗಿ ತಿಳಿಸಲು ಸಾಧ್ಯವಿಲ್ಲ. ಅಣೆಕಟ್ಟೆ ಸುರಕ್ಷತೆ ಬಗ್ಗೆ ಸಾರ್ವಜನಿಕರು ಸಂದೇಹ ಪಡುವುದು ಬೇಡ. ಈ ಬಗ್ಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಹಲವು ಬಾರಿ ಸ್ಪಷ್ಟನೆ ನೀಡಿದ್ದಾರೆ ಎಂದು ವಿಶ್ವೇಶ್ವರಯ್ಯ ಜಲನಿಗಮದ ಚೀಫ್ ಎಂಜಿನಿಯರ್ ಎಂ. ರವಿ ಸ್ಪಷ್ಟಪಡಿಸಿದರು.
ಜಲಾಯಶಕ್ಕೆ ಅಪಾಯವಿಲ್ಲ
" ಈ ಜಲಾಶಯ ಅತ್ಯಂತ ಸುರಕ್ಷಿತವಾಗಿದ್ದು, ಮುಂದೆಯೂ ಕೂಡ ಯಾವುದೇ ರೀತಿಯ ಅಪಾಯ ಸಂಭವಿಸಬಾರದು ಎಂಬ ನಿಟ್ಟಿನಲ್ಲಿ ಅಣೆಕಟ್ಟೆಯ ಕೆಳಗೆ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಅಣೆಕಟ್ಟೆಯ ಗೋಡೆಯ ಮೇಲೆ ಅಳವಡಿಸಿರುವ ವಿದ್ಯುತ್ ಮೀಟರ್ ಅನ್ನು ಬಲಬದಿಯ ಮಂಟಪಕ್ಕೆ ಸ್ಥಳಾಂತರಿಸುವುದು ಸೇರಿದಂತೆ 20 ಸಲಹೆಗಳನ್ನು ನೀಡಿದ್ದೇನೆ" ಎಂದು ಹಿರಿಯ ಅಣೆಕಟ್ಟೆ ತಜ್ಞ, ನಿವೃತ್ತ ಚೀಫ್ ಎಂಜಿನಿಯರ್ ಎಸ್.ಬಿ. ಕೊಯಮತ್ತೂರ್ ತಿಳಿಸಿದರು.
ಡ್ಯಾಂ ವಿನ್ಯಾಸ ಬಗ್ಗೆ ಎಸ್.ಬಿ. ಕೊಯಮತ್ತೂರ್ ಮೆಚ್ಚುಗೆ
ಅಣೆಕಟ್ಟೆ ತಜ್ಞ, ನಿವೃತ್ತ ಚೀಫ್ ಎಂಜಿನಿಯರ್ ಎಸ್.ಬಿ. ಕೊಯಮತ್ತೂರ್, ಅಣೆಕಟ್ಟೆಯ ಬಲಬದಿಯ ಅಂಚಿನಲ್ಲಿ ಇಳಿದು, ಜಲಾಶಯದ ಇತಿಹಾಸ ಇರುವ ಫಲಕಗಳನ್ನು ಓದಿದ ಅವರು 40-50 ಅಗಲವಾದ ಮೆಟ್ಟಿಲುಗಳನ್ನು ಸರಾಗವಾಗಿ ಹತ್ತಿದ , ಅಣೆಕಟ್ಟೆಯ ಬಲತುದಿಯಿಂದ ಎಡತುದಿಯವರೆಗೆ ನಡೆದುಕೊಂಡು ಹೋಗಿ ಪರಿಶೀಲನೆ ನಡೆಸಿ, ಜಲಾಶಯವ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತೂಬುಗಳ ನಿರ್ವಹಣೆ ಮಾಡುವ ಬಾಕ್ಸ್ ಗಳನ್ನು ಕಾವಲಿನವರಿಂದ ತರೆಸಿ ತಪಾಸಣೆ ನಡೆಸಿದರು. ನಂತರ ಅಣೆಕಟ್ಟೆಯ ಮೇಲ್ಭಾಗದಲ್ಲಿ ನಡೆದಾಡಿದರು. ಅಣೆಕಟ್ಟೆಯ ಕೆಳಭಾಗದ ದೃಶ್ಯವನ್ನು ಪರಿಶೀಲಿಸಿದರು.
ಪೂರ್ಣಿಮಾ ಶ್ರೀನಿವಾಸ ಅಭಯ
ಈ ಕುರಿತು ಮಾತನಾಡಿದ ಶಾಸಕಿ " ಕೈಯಲ್ಲಿ ಮೊಬೈಲ್ಗಳಿವೆ ಎಂದು ವಾಟ್ಸಾಪ್ ನಲ್ಲಿ ಅನುಮಾನಸ್ಪದ ಸಂದೇಶಗಳನ್ನು ಕಳಿಸುವ ಮೂಲಕ ಕೆಲವರು ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ತರುತ್ತಿದ್ದಾರೆ. ಅಂತಹವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಸ್ಥಳೀಯ ಎಂಜಿನಿಯರ್ ಗಳು ಜಲಾಶಯ 120 ಅಡಿ ದಾಟಿದಂದಿನಿಂದ ಅಣೆಕಟ್ಟೆ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡುತ್ತಲೇ ಇದ್ದರೂ ಕಿಡಿಗೇಡಿಗಳು ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಈಗ ತಜ್ಞರ ತಂಡವೇ ಬಂದು ವರದಿ ನೀಡಿದ್ದು, ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ" ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಯ ನೀಡಿದರು.
ಜಲಸಂಪನ್ಮೂಲ ಸಚಿವ ಕಾರಜೋಳ ಹೇಳಿದ್ದೇನು?
ವಾಣಿವಿಲಾಸ ಸಾಗರ ಜಲಾಶಯದ ಸುರಕ್ಷತೆಯ ಬಗ್ಗೆ ಯಾವುದೇ ಆತಂಕ ಪಡುವ ಕಾರಣವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ತಜ್ಞರ ಸಮಿತಿಯು ಅಣೆಕಟ್ಟೆಗೆ ಭೇಟಿ ಕೊಟ್ಟಿದ್ದು ವಾಣಿವಿಲಾಸ ಸಾಗರ ಜಲಾಶಯದ ಅಣೆಕಟ್ಟೆಯನ್ನು ಸಮಗ್ರವಾಗಿ ಪರಿಶೀಲಿಸಿ, ಪರಿವೀಕ್ಷಿಸಿ ಅಣೆಕಟ್ಟೆಯ ಯಾವುದೇ ಭಾಗದಲ್ಲಿ ನೀರು ಸೋರುವಿಕೆ ಇಲ್ಲವೆಂದು ಹಾಗೂ ಅಣೆಕಟ್ಟೆಯ ಸುರಕ್ಷತೆಗೆ ಯಾವುದೇ ತೊಂದರೆ ಇಲ್ಲವೆಂದು ವರದಿ ನೀಡಿದೆ.
ಇನ್ನು ಅಣೆಕಟ್ಟೆಯ ಗರಿಷ್ಠ ಮಟ್ಟ 142 ಅಡಿ ಇರುವುದರಿಂದ ಪ್ರಸ್ತುತ ನೀರಿನ ಸಂಗ್ರಹಣೆ 135 ಅಡಿ ಇರುವುದರಿಂದ ಅಣೆಕಟ್ಟೆಗೆ ಯಾವುದೇ ತೊಂದರೆ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆಂದು ಭದ್ರಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರ್ ವರದಿ ಸಲ್ಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಜಲಾಶಯ ಕುರಿತು ಯಾವುದೇ ಆತಂಕ ಬೇಡ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.