ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಾದ ಕೇಂದ್ರ ಸಚಿವ ಸದಾನಂದ ಗೌಡ
ಚಿತ್ರದುರ್ಗ, ಜನವರಿ 03: ಕೇಂದ್ರ ಸಚಿವ ಡಿ. ವಿ ಸದಾನಂದ ಗೌಡ ಅವರನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಜ್ಞೆ ತಪ್ಪಿ ಕಾರಿನಲ್ಲಿ ಕುಸಿದು ಬಿದ್ದ ಸದಾನಂದ ಗೌಡ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೇಲ್ನೋಟಕ್ಕೆ ಪಿಟ್ಸ್ ಬಂದು ಮೂರ್ಛೆ ಹೋದ ರೀತಿಯಲ್ಲಿ ಕುಸಿದು ಬಿದ್ದರು ಎಂದು ಜೊತೆಗಿದ್ದ ಕಾರ್ಯಕರ್ತರು ಹೇಳಿದ್ದಾರೆ.
ಇತ್ತೀಚಿನ ಅಪ್ಡೇಟ್: ಬಸವೇಶ್ವರ ಆಸ್ಪತ್ರೆಯಿಂದ ಬೆಂಗಳೂರಿನ ಹೆಬ್ಬಾಳದ ಆಸ್ಪತ್ರೆಗೆ ಜೀರೋ ಟ್ರಾಫಿಕ್ ಮೂಲಕ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಗಿದೆ.
ಶಿವಮೊಗ್ಗದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ನಂತರ ಚಿತ್ರದುರ್ಗದ ಬಿಜೆಪಿ ಮುಖಂಡ ನವೀನ್ ಮಾಲೀಕತ್ವದ ನವೀನ್ ರೆಸಿಡೆನ್ಸಿಗೆ ಭೇಟಿ ನೀಡಿದ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಆದರೆ, ವೈದ್ಯರಿಂದ ತಕ್ಷಣಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಅವರ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಲೋ ಶುಗರ್ ಕಾರಣ ಕಣ್ಣು ಕತ್ತಲೆ ಕಟ್ಟಿ, ಕುಸಿದು ಬಿದ್ದಿದ್ದಾರೆ ಎಂದಿದ್ದಾರೆ.
ಹೋಟೆಲ್ ಮುಂಭಾಗ ಕಾರಿನಿಂದ ಇಳಿಯುತ್ತಿದ್ದಂತೆ ಡಿವಿ ಸದಾನಂದಗೌಡರು ಕುಸಿದು ಬಿದ್ದರು. ಅದೃಷ್ಟವಶಾತ್ ಆ ಕ್ಷಣಕ್ಕೆ ಅವರ ಅಂಗರಕ್ಷಕರು ಪಕ್ಕದಲ್ಲೇ ಇದ್ದು, ಸದಾನಂದ ಗೌಡರನ್ನು ಹಿಡಿದುಕೊಂಡರು. ನಂತರ ಪೊಲೀಸ್ ಎಸ್ಕಾರ್ಟ್ ಅಹನದಲ್ಲಿ ಬಸವೇಶ್ವರ ಆಸ್ಪತ್ರೆಗೆ ಕರೆದೋಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಸದಾನಂದ ಗೌಡ ಅವರು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಾದ ವಿಡಿಯೋ#DVSadanandaGowda #Chitradurga pic.twitter.com/iSQxvVd8o7
— oneindiakannada (@OneindiaKannada) January 3, 2021