ಚಿತ್ರದುರ್ಗದಲ್ಲಿ ದೆವ್ವ ಬಿಡಿಸುತ್ತೇನೆಂದು ಮಗುವನ್ನೇ ಕೊಂದ ಮಾಂತ್ರಿಕ
ಚಿತ್ರದುರ್ಗ, ಸೆಪ್ಟೆಂಬರ್ 28: ಎರಡು ವರ್ಷದ ಹೆಣ್ಣು ಮಗುವೊಂದು ಮಾಂತ್ರಿಕನ ಏಟಿಗೆ ಬಲಿಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅಜ್ಜಿಕ್ಯಾತನಹಳ್ಳಿ ಗ್ರಾಮದ ಪ್ರವೀಣ್ ಮತ್ತು ಬೇಬಿ ದಂಪತಿ ಪುತ್ರಿ ಎರಡು ವರ್ಷದ ಪೂರ್ಣಿಕಾ ಮಾಟಗಾರನ ಬೆತ್ತದ ಹೊಡೆತದಿಂದಾಗಿ ಪ್ರಾಣ ಕಳೆದುಕೊಂಡಿದೆ.
ಪೋಷಕರು ಮಗು ಪದೇ ಪದೇ ಭಯ ಬಿಚ್ಚಿ ಬೀಳುತ್ತಿದೆ ಎಂದು ಮಾಂತ್ರಿಕನ ಬಳಿ ಕರೆದುಕೊಂಡು ಹೋಗಿದ್ದರು. ಇತ್ತ 19 ವರ್ಷದ ರಾಕೇಶ್ ಅಜ್ಜಿಕ್ಯಾತನಹಳ್ಳಿಯ ಯಲ್ಲಮ್ಮನ ಆರಾಧಕ ಮಂತ್ರವಾದಿಯಾಗಿ ಗುರುತಿಸಿಕೊಂಡಿದ್ದನು. ಮಗು ಪದೇಪದೇ ಬಿಚ್ಚಿ ಬೀಳೋದಕ್ಕೆ ದೆವ್ವ ಹಿಡಿದಿದೆ, ಅದನ್ನು ಬಿಡಿಸಬೇಕು ಎಂದು ರಾಕೇಶ್ ಹೇಳಿದ್ದನು. ದೆವ್ವ ಬಿಡಿಸುವ ನೆಪದಲ್ಲಿ ಎಕ್ಕೆಗಿಡದ ಬೆತ್ತದಿಂದ ಮಗುವಿನ ಮೈ ತುಂಬಾ ಬಾಸುಂಡೆ ಬರುವಂತೆ ಥಳಿಸಿದ್ದಾನೆ. ಮಗು ಕುಸಿದುಬಿದ್ದು ಪ್ರಾಣಬಿಟ್ಟಿದೆ.
Recommended Video
ಮಗುವಿನ ಪೋಷಕರನ್ನು ಕರೆದು ಮಗು ಪ್ರಜ್ಞೆತಪ್ಪಿ ಬಿದ್ದಿದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಮಾಂತ್ರಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಪೋಷಕರು ಹೊಳಲ್ಕೆರೆಯ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಡಾಕ್ಟರ್ ಈಗಾಗಲೇ ಮಗು ಕೊನೆಯುಸಿರೆಳೆದಿದೆ ಎಂದು ತಿಳಿಸಿದ್ದಾರೆ. ಪೊಲೀಸರು ರಾಕೇಶ್ ನನ್ನು ಬಂಧಿಸಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.