ಚಿತ್ರದುರ್ಗ ವಿಡಿಯೋ; ಟೊಮೆಟೋವನ್ನು ರಸ್ತೆ ಬದಿ ಸುರಿದ ವ್ಯಾಪಾರಿ
ಚಿತ್ರದುರ್ಗ, ಸೆಪ್ಟೆಂಬರ್ 12; ರಾಜ್ಯದಲ್ಲಿ ಟೊಮೆಟೋ ಬೆಲೆ ಕುಸಿತ ಕಂಡಿದ್ದು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ಟೊಮೆಟೋ ವ್ಯಾಪರಿಯೊಬ್ಬ ಉತ್ತರ ಕರ್ನಾಟಕದ ರೈತನಿಂದ ಖರೀದಿ ಮಾಡಿದ ಟೊಮೆಟೋವನ್ನು ರಸ್ತೆ ಪಕ್ಕದಲ್ಲಿ ಸುರಿದಿದ್ದಾನೆ.
ಟೊಮೆಟೋ ಖರೀದಿಸಿ ಬೆಂಗಳೂರು ಎಪಿಎಂಸಿ ಮಾರುಕಟ್ಟೆಗೆ ಕೊಂಡೊಯ್ಯುತ್ತಿರುವಾಗ ಬೆಲೆ ಕುಸಿತದ ಸುದ್ದಿ ಕೇಳಿ ಚಿತ್ರದುರ್ಗ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 13ರ ರಸ್ತೆ ಬದಿಯಲ್ಲಿ ನೂರಾರು ಕ್ರೆಟ್ ಟೊಮೆಟೋವನ್ನು ಸುರಿದು ಹೋಗಿರುವ ಘಟನೆ ನಡೆದಿದೆ.
ಅವಿನಾಶ್ ಎನ್ನುವ ವ್ಯಾಪಾರಿ ರೈತರಿಂದ ಟೊಮೆಟೋ ಖರೀದಿಸಿಕೊಂಡು ಬೀದರ್ನಿಂದ ಬೆಂಗಳೂರಿಗೆ ಲಾರಿಯಲ್ಲಿ ಹೊರಟಿದ್ದರು. ಬೀದರ್ನಿಂದ ಬೆಂಗಳೂರಿಗೆ ಟೊಮೆಟೋ ಕೊಂಡೊಯ್ಯುಲು ಒಂದು ಕ್ರೆಟ್ ಬಾಕ್ಸಿಗೆ 100 ರೂಪಾಯಿ ಬಾಡಿಗೆ ಕೊಡಬೇಕು.
ಟೊಮೆಟೋ ಬೆಲೆ ಕುಸಿತ: ಟ್ರ್ಯಾಕ್ಟರ್ ನಲ್ಲಿ ತುಂಬಿ ಬೀಳು ಹೊಲಕ್ಕೆ ಸುರಿದ ಚಿತ್ರದುರ್ಗ ರೈತ
ಅಲ್ಲಿಗೆ ತೆಗೆದುಕೊಂಡು ಹೋದರೆ ಈಗಿರುವ ಮಾರುಕಟ್ಟೆ ಬೆಲೆಗೆ ಬಾಡಿಗೆಯೂ ದೊರೆಯುವುದಿಲ್ಲ. ಒಂದು ಬಾಕ್ಸಿಗೆ 50-60 ರೂಪಾಯಿ ಬರುತ್ತದೆ. ಅಲ್ಲಿಗೆ ತೆಗೆದುಕೊಂಡು ಹೋಗುವ ಬದಲು ಇಲ್ಲಿಯೇ ಸುರಿದರೆ ಉತ್ತಮ ಎಂದು ವ್ಯಾಪಾರಿ ರಸ್ತೆ ಬದಿ ಸುರಿದಿದ್ದಾನೆ.
2 ರುಪಾಯಿಗೆ ಒಂದು ಬುಟ್ಟಿ ಟೊಮೆಟೋ, ನೊಂದ ರೈತ ಮಾಡಿದ್ದೇನು?
ರೈತರಿಗೂ ತುಂಬಾ ನಷ್ಟ ಉಂಟಾಗಿದೆ. ಒಂದು ಬಾಕ್ಸಿಗೆ 50 ರೂಪಾಯಿ ಅಂತೆ ಖರೀದಿ ಮಾಡಲಾಗಿತ್ತು. ಬೀದರ್ನಿಂದ ಬೆಂಗಳೂರಿಗೆ ಒಟ್ಟು 42 ಸಾವಿರ ರೂಪಾಯಿ ಬಾಡಿಗೆ ಇದೆ. ಈ ಹಣ್ಣನ್ನು ಮಾರುಕಟ್ಟೆಯಲ್ಲಿ ತೆಗೆದುಕೊಂಡು ಹೋದರು ಬಾಡಿಗೆಯ ಹಣ ಬರುವುದಿಲ್ಲ ಎನ್ನುತ್ತಾರೆ. 120 ಟೊಮೆಟೋ ಹಣ್ಣಿನ ಬಾಕ್ಸ್ ರಸ್ತೆ ಪಕ್ಕದಲ್ಲಿ ಸುರಿದು ಬೀದರ್ಗೆ ವಾಪಸ್ ಹೋಗಿದ್ದಾರೆ.
ಮುಂಬೈನಲ್ಲಿ ಟೊಮೆಟೋ ಕದ್ದವನಿಗೆ ಎರಡು ದಿನಗಳ ಜೈಲು ಶಿಕ್ಷೆ!
ಹಿರಿಯೂರು ರೈತನಿಗೆ ಸಿಗದ ಲಾಭ; ಹಿರಿಯೂರು ತಾಲೂಕಿನ ಮಾರಪ್ಪನಹಟ್ಟಿ ಗ್ರಾಮದ ರೈತನಿಗೂ ಸಹ ಟೊಮೆಟೋ ದರ ಸಿಗದ ಕಾರಣ ಹತ್ತಾರು ಟೊಮೆಟೋ ಬಾಕ್ಸ್ ಹಣ್ಣುಗಳನ್ನು ರಸ್ತೆ ಪಕ್ಕದಲ್ಲಿ ಸುರಿದಿದ್ದಾರೆ. ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆದು, ಭೂಮಿಗೆ ಹಾಕಿದ ಬಂಡವಾಳವೂ ಕಾಣಲು ಸಾಧ್ಯವಾಗುತ್ತಿಲ್ಲ ಎನ್ನಬಹುದು. ಇಂದಿನ ಟೊಮೆಟೋ ಬೆಲೆ ಒಂದು ಕೆಜಿಗೆ 6 ರಿಂದ 10 ರೂಪಾಯಿ ಇದೆ. ಹೀಗಿರುವಾಗ ರೈತ ಹಾಕಿದ ಬಂಡವಾಳವೂ ಬರುತ್ತಿಲ್ಲ.
ಕೃಷಿ ಸಚಿವರ ಪ್ರವಾಸ; ಶನಿವಾರ ಹಿರಿಯೂರು ತಾಲ್ಲೂಕಿನಲ್ಲಿ ಕೃಷಿ ಸಚಿವ ಬಿ. ಸಿ. ಪಾಟೀಲ್ ರೈತರೊಂದಿಗೆ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಾಲೂಕಿನ ಐಮಂಗಲ, ಗುಯಿಲಾಳು, ಮಸ್ಕಲ್, ದೇವರಕೊಟ್ಟ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ಫಾರಂ ಹಾಗೂ ಆದಿವಾಲ ಗ್ರಾಮದಲ್ಲಿ ಕೃಷಿ ಸಚಿವರು ಪ್ರವಾಸ ಕೈಗೊಂಡಿದ್ದರು.
ಹಿರಿಯೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಹೆಚ್ಚಾಗಿ ಟೊಮೆಟೋ ಕೂಡ ಬೆಳೆಯುವುದು ಕಾಣಬಹುದಾಗಿದೆ. ಚಳ್ಳಕೆರೆಯಲ್ಲಿ ಟೊಮೆಟೋ ಖರೀದಿ ಕೇಂದ್ರ ತೆರೆಯಲು ಸಾಕಷ್ಟು ಹೋರಾಟಗಳು ನಡೆಯುತ್ತಿವೆ.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಬುಡ್ನಹಟ್ಟಿ ಸಮೀಪ ಖಾಸಗಿ ಟೊಮೆಟೋ ಮಾರುಕಟ್ಟೆ ಕೇಂದ್ರವನ್ನು ತೆರೆಯಲಾಗಿದೆ. ಖರೀದಿ ಕೇಂದ್ರ ತೆರೆಯುವ ಬಗ್ಗೆ ಆಗಲಿ, ಸೂಕ್ತ ಬೆಲೆ ಬಗ್ಗೆ ಸಚಿವರು ಮಾತಾಡಲಿಲ್ಲ.
Recommended Video
ರೈತರೊಂದಿಗೆ ವಿಶೇಷ ಕಾರ್ಯಕ್ರಮದಲ್ಲಿ ಟೊಮೆಟೋ ಬೆಲೆ ದರ ಕುಸಿತ ಕಂಡಿದ್ದು, ಟೊಮೆಟೋ ರಸ್ತೆಯಲ್ಲಿ ಸುರಿದಿರುವುದು ಸಚಿವರ ಗಮನಕ್ಕೆ ಬರಲಿಲ್ವಾ? ಎನ್ನುವ ಪ್ರಶ್ನೆ ಕಾಡತೊಡಗಿದೆ. ಇನ್ನು ತರಕಾರಿ ಬೆಳೆಗಳ ವಿಚಾರವಾಗಿ ಕೃಷಿ ಸಚಿವರು ರೈತರ ಜೊತೆ ಬೆಂಬಲ ಬೆಲೆಯ ಬಗ್ಗೆಯೂ ಮಾತಾಡಿಲ್ಲ ಎಂಬ ಆರೋಪದ ಮಾತುಗಳು ಕೇಳಿ ಬಂದವು.
ಒಟ್ಟಾರೆಯಾಗಿ ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ. ಬೆನ್ನೆಲುಬು ಬೆಂಡಾಗುವಂತೆ ಶ್ರಮಪಟ್ಟರು ಸೂಕ್ತ ಬೆಲೆ ಕಾಣಲು ಸಾಧ್ಯವಾಗುತ್ತಿಲ್ಲ. ಇತ್ತ ಸರ್ಕಾರ ಕೂಡ ರೈತರ ಸಮಸ್ಯೆಗೆ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಒದಗಿಸುತ್ತಾ? ಹೇಗೆ ಎಂಬುದನ್ನು ಕಾದು ನೋಡಬೇಕಿದೆ.