ಕೊರೊನಾದಿಂದ ಚಿತ್ರದುರ್ಗದಲ್ಲಿ ಕುರಿಗಳ ಪಾಲಾಯಿತಲ್ಲ ಇಷ್ಟೊಂದು ಟೊಮೆಟೊ
ಚಿತ್ರದುರ್ಗ, ಏಪ್ರಿಲ್ 08: ಕೋಟೆ ನಾಡು ಚಿತ್ರದುರ್ಗದ ರೈತರಿಗೆ ಪ್ರತಿ ವರ್ಷವೂ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇರುತ್ತದೆ. ಮೊದಲೆಲ್ಲಾ ನೀರಿನದ್ದೇ ಸಮಸ್ಯೆಯಾಗುತ್ತಿತ್ತು. ಕಾಲ ಕಾಲಕ್ಕೆ ಮಳೆಯಾಗದೇ ಭಾರೀ ಕಷ್ಟ ಅನುಭವಿಸಿದ್ದ ರೈತರಿಗೆ ಈ ಬಾರಿ ಮಹಾಮಾರಿ ಕೊರೊನಾ ಹೊಡೆತ ಕೊಟ್ಟಿದೆ.
ರೈತರು ಬೆಳೆದಿರುವ ಬೆಳೆಗಳಿಗೆ ಬೆಲೆ ಇಲ್ಲದೇ ಕಂಗೆಡುವಂತೆ ಮಾಡಿದೆ. ಮೊನ್ನೆಮೊನ್ನೆಯಷ್ಟೆ ಹಿರಿಯೂರು ತಾಲ್ಲೂಕಿನ ಮುಂಗಸವಳ್ಳಿ ಗ್ರಾಮದ ಬಂಗಾರಣ್ಣ ಎನ್ನುವ ರೈತ ಸುಮಾರು ಹತ್ತು ಎಕರೆಯಲ್ಲಿ ಟೊಮೆಟೊ ಬೆಳೆ ಬೆಳೆದಿದ್ದು, ಅದನ್ನು ಮಾರುಕಟ್ಟೆಗೆ ಸಾಗಿಸಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಇದೀಗ ಗೊಲ್ಲರ ಹಟ್ಟಿ ರೈತನದ್ದೂ ಅದೇ ಪಾಡಾಗಿದೆ. ಬೆಳೆದ ಟೊಮೆಟೊ ಹಣ್ಣುಗಳನ್ನು ಸಾಗಿಸಲಾಗದೇ, ಅವೆಲ್ಲ ಕುರಿಗಳ ಪಾಲಾಗುತ್ತಿವೆ.
ಗೊಲ್ಲರಹಟ್ಟಿಯ ಪ್ರಗತಿಪರ ರೈತನ ಕಥೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಪ್ರಗತಿಪರ ರೈತ ಈರಣ್ಣ ಸುಮಾರು 10 ಎಕರೆಯಲ್ಲಿ ಟೊಮೆಟೊ ಬೆಳೆ ಬೆಳೆದಿದ್ದು ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ನಿಗದಿತ ಸಮಯದಲ್ಲಿ ಮಾರುಕಟ್ಟೆ ತಲುಪಿಸಲು ಸಾಧ್ಯವಾಗದೆ ಇರುವುದರಿಂದ 15 ಲಕ್ಷಕ್ಕೂ ಹೆಚ್ಚು ನಷ್ಟ ಅನುಭವಿಸಿದ್ದಾನೆ. ಈ ರೈತನ ಗೋಳು ಕೇಳುವವರೇ ಇಲ್ಲವಾಗಿದ್ದಾರೆ.
ಆತ್ಮಹತ್ಯೆ ಪರಿಹಾರವಲ್ಲ, ಅನ್ನದಾತರೆ ಆತ್ಮಸ್ಥೈರ್ಯದಿಂದಿರಿ: ಬಿ.ಸಿ.ಪಾಟೀಲ
ಕುರಿ, ಎಮ್ಮೆಗಳಿಗೆ ಮೇಯಲು ಬಿಟ್ಟ ರೈತ
ಸೂಕ್ತ ಬೆಲೆ ಸಿಗದೇ, ಮಾರುಕಟ್ಟೆಗೆ ತಲುಪಿಸಲೂ ಆಗದೇ ಟೊಮೆಟೊ ಬೆಳೆಯನ್ನು ಕಿತ್ತು ರಾಶಿ ಹಾಕಿರುವ ಈರಣ್ಣ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಬೆಳೆ ಕೈಗೆಟುಕದೆ ಬೇಸತ್ತ ಈ ರೈತ ಪ್ರತಿನಿತ್ಯ ನೂರಾರು ಎಮ್ಮೆ, ಕುರಿಗಳನ್ನು ಬಿಟ್ಟು ಬೆಳೆಯನ್ನೇ ಮೇಯಿಸುತ್ತಿದ್ದಾನೆ.
ಕೋಲಾರಕ್ಕೆ ರಫ್ತಾಗುತ್ತಿದ್ದ ಟೊಮೆಟೊ
"ಕುರಿ ಕಾದುಕೊಂಡಿದ್ದ ನಾನು ಕಳೆದ ಎಂಟು, ಹತ್ತು ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೇನೆ. ಟೊಮೆಟೊ ಬೆಳೆದು ಕೋಲಾರಕ್ಕೆ ಕಳುಹಿಸುತ್ತಿದ್ದೆ. ಈಗ ಅದೂ ಸಾಧ್ಯವಾಗುತ್ತಿಲ್ಲ. ಟೊಮೆಟೊಗಳು ಕೊಳೆಯುತ್ತಿವೆ. ನನ್ನ ಕುಟುಂಬ ಬೀದಿಪಾಲು ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸಾಲದಲ್ಲಿ ಸಿಲುಕಿಕೊಂಡಿದ್ದೇನೆ" ಎಂದು ದುಃಖ ತೋಡಿಕೊಂಡಿದ್ದಾರೆ ರೈತ ಈರಣ್ಣ.
ಸಂಕಷ್ಟದಲ್ಲಿದ್ದ ಚನ್ನಪಟ್ಟಣ ರೈತನ ಫಸಲು ಖರೀದಿಸಿದ ಸಂಸದ ಡಿ.ಕೆ.ಸುರೇಶ್
"ಯಾರೂ ಇತ್ತ ತಿರುಗಿ ನೋಡುತ್ತಿಲ್ಲ"
ಇಷ್ಟೆಲ್ಲಾ ನಷ್ಟವಾಗುತ್ತಿದ್ದರೂ ಯಾವ ಅಧಿಕಾರಿಗಳು ಇತ್ತ ಕಡೆ ತಿರುಗಿ ನೋಡಿಲ್ಲ. ನಮ್ಮ ಕಷ್ಟವನ್ನು ಯಾರೂ ಕೇಳಿಲ್ಲ. ಸರ್ಕಾರ ಸಹ ರೈತರ ಕಡೆ ಗಮನ ಹರಿಸುತ್ತಿಲ್ಲ ಎಂದು ಈರಣ್ಣ ಅಸಮಾಧಾನ ಹೊರ ಹಾಕಿದ್ದಾರೆ. ಈರಣ್ಣ ಬೆಳೆದಿರುವ ಹತ್ತು ಎಕರೆ ಬೂದುಗುಂಬಳ, ಹಾಗಲಕಾಯಿ ಬೆಳೆಯು ಸಹ ಕೈ ಕೊಟ್ಟಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.