ಚಿತ್ರದುರ್ಗದಲ್ಲಿ ಗುಡುಗು ಸಹಿತ ಸುರಿದ ವರ್ಷಧಾರೆ
ಚಿತ್ರದುರ್ಗ, ಏಪ್ರಿಲ್ 07: ಮಹಾಮಾರಿ ಕೊರೊನಾ ವೈರಸ್ ಹಾಗೂ ಲಾಕ್ ಡೌನ್ ಮಧ್ಯೆಯೂ ಕೋಟೆನಾಡು ಚಿತ್ರದುರ್ಗದಲ್ಲಿ ಮಳೆಯಾಗಿದ್ದು, ಮುಂಬರುವ ದಿನಗಳಲ್ಲಿ ಮಳೆರಾಯ ಹಬ್ಬರಿಸುವ ಮುನ್ಸೂಚನೆ ನೀಡಿದ್ದಾನೆ ಎನ್ನಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಸಂಜೆ ಸಮಯದಲ್ಲಿ ಸಾಧಾರಣ ಮಳೆಯಾಗಿದ್ದು, ಹಿರಿಯೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುಡುಗು-ಸಿಡಿಲು ಹಬ್ಬರಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆ ಚಿತ್ರದುರ್ಗ ನಗರದಲ್ಲಿ ಮಳೆಯಾಗಿತ್ತು. ಈ ಮಳೆಯ ವಾತಾವರಣದಿಂದ ಚಿತ್ರದುರ್ಗ ಜನತೆಯಲ್ಲಿ ಕೃಷಿ ಚಟುವಟಿಕೆಯ ಭರವಸೆ ಮೂಡಿದೆ.
ಇನ್ನು ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಸಹ ಮಳೆಯಾಗಿರುವ ವರದಿಯಾಗಿದೆ ಹಾಗೂ ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲೂ ಸಹ ಮಳೆಯಾಗಿದೆ. ರಣಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಚಿತ್ರದುರ್ಗ ಜನತೆಗೆ ಮಳೆ ತಂಪೆರೆದಂತಾಗಿದೆ.
ಸಾಧಾರಣವಾಗಿ ಸುರಿದ ಮಳೆಯ ಹನಿಗಳಿಂದ ವಾತಾವರಣ ಕೂಡ ತಂಪಾಗಿದೆ. ಇನ್ನು ಹಿರಿಯೂರು ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಕೆಲವು ಹಳ್ಳಿಗಳಿಗೆ ವಿವಿ ಸಾಗರದಿಂದ ನಾಲೆಗಳಿಗೆ ನೀರು ಹರಿಸಿದ ಕಾರಣ ತೆಂಗು, ಅಡಿಕೆ,ಬಾಳೆ, ಮತ್ತಿತರ ಗಿಡಮರಗಳು ಚಿಗುರೊಡೆದಿದ್ದವು.
ಜಿಲ್ಲೆಯಲ್ಲಿ ಇನ್ನೂ ಮೋಡ ಕವಿದ ವಾತಾವರಣ ಇದ್ದು, ಗಾಳಿಯ ಹಬ್ಬರ ಜೋರಾಗಿದೆ. ಈಗಾಗಲೇ ಜಿಲ್ಲೆ ಹೊರತುಪಡಿಸಿ ಬೇರೆ ಬೇರೆ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಜಿಲ್ಲೆಯ ಕೆಲ ಭಾಗಗಳಲ್ಲಿ ಮುಂದಿನ 48 ಗಂಟೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.