ಟಿಕ್ ಟಾಕ್ ನಲ್ಲಿ ವೈರಲ್ ಆದ ಕುರಿಗಾಹಿ ಮದುವೆ; ಪ್ರಚಾರಕ್ಕಲ್ಲ ಎಂದ ಪ್ರೇಮಿ
ಚಿತ್ರದುರ್ಗ, ನವೆಂಬರ್ 11: ಮೂರು ದಿನಗಳ ಹಿಂದೆ ಚಿತ್ರದುರ್ಗದ ಕುರಿಗಾಹಿ ಅರುಣ್ ಮತ್ತು ಎಂ.ಎ. ವಿದ್ಯಾರ್ಥಿನಿ ಅಮೃತಾ ಪ್ರೇಮ ವಿವಾಹದ ವೀಡಿಯೋ ಟಿಕ್ ಟಾಕ್ ನಲ್ಲಿ ಭಾರೀ ವೈರಲ್ ಆಗಿತ್ತು. ಸಿನಿಮಾ ಶೈಲಿಯಲ್ಲಿ ಮದುವೆಯಾದ ಈ ಜೋಡಿ ಕುರಿತು ಎಲ್ಲೆಲ್ಲೂ ಮಾತು ನಡೆದಿತ್ತು. ಮನೆಯವರ ವಿರೋಧದ ನಡುವೆ ಕುರಿಹಟ್ಟಿ ಎದುರು ಮದುವೆಯಾದ ಈ ಜೋಡಿ ಹೀಗೆ ವೀಡಿಯೋ ಮಾಡಿದ್ದು ಸುದ್ದಿಯಾಗಿತ್ತು. ಇದೀಗ ಆ ವೀಡಿಯೋ ಕುರಿತು ಅರುಣ್ ಹಾಗೂ ಅಮೃತಾ ಮಾತನಾಡಿದ್ದಾರೆ.
ಪ್ರಚಾರಕ್ಕಾಗಿ ಅಲ್ಲ ಎಂದ ಪ್ರೇಮಿ
ಕುರಿಗಾಹಿ ಅರುಣ್ ನಾನು ಪ್ರಚಾರಕ್ಕೆ ಈ ವಿಡಿಯೋ ಮಾಡಿಸಿಲ್ಲ, ನನಗೆ ಪ್ರಚಾರದ ಅವಶ್ಯಕತೆ ಇರಲಿಲ್ಲ, ನಮ್ಮ ಮದುವೆಗೆ ನಮ್ಮಿಬ್ಬರ ಮನೆಯಲ್ಲೂ ಬೆಂಬಲ ಇರಲಿಲ್ಲ. ನಾನು ತಾಳಿ ಕಟ್ಟಿದರೂ ತಾಳಿಯನ್ನು ಹುಡುಗಿ ಮನೆಯವರು ಕಿತ್ತುಹಾಕಿ ನಮ್ಮಿಬ್ಬರನ್ನು ಬೇರೆ ಬೇರೆ ಮಾಡುತ್ತಾರೆ ಎಂಬ ಕಾರಣಕ್ಕೆ ಸಾಕ್ಷಿ ಎಂಬಂತೆ ಚಿಕ್ಕ ಹುಡುಗನೊಬ್ಬನಿಗೆ ವಿಡಿಯೋ ಮಾಡಲು ಹೇಳಿದ್ದೆ. ಅವನಿಗೆ ಏನೂ ಗೊತ್ತಿಲ್ಲ ಅವನಿಗೆ ಮೊಬೈಲ್ ಆನ್ ಮಾಡಿ ಹೀಗೆ ವಿಡಿಯೋ ಮಾಡು ಅಂತ ಹೇಳಿಕೊಟ್ಟು ವಿಡಿಯೋ ಮಾಡಿಸಿ ಸಾಕ್ಷಿಗೆ ಇಟ್ಟುಕೊಂಡಿದ್ದೆ ಅಷ್ಟೇ. ಆ ವಿಡಿಯೋವನ್ನ ನನ್ನ ದೊಡ್ಡಪ್ಪನ ಮಗನಿಗೆ ಕಳಿಸಿದ್ದೆ. ಅವನು ಟಿಕ್ ಟ್ಯಾಕ್ ನಲ್ಲಿ ಹಾಕಿದ್ದಾನೆ. ಅದೀಗ ವೈರಲ್ ಆಗಿದೆ ಎಂದು ಹೇಳಿದರು.
"ಓಡೋಡಿ ಬಂದು ಕುರಿಹಟ್ಟಿಯಲ್ಲಿ ಪ್ರೇಮಿಗಳ ಮದುವೆ"; ವೀಡಿಯೋ ವೈರಲ್
ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ
ಕುರಿಗಾಹಿ ಅರುಣ್ ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸೀಗೆಹಟ್ಟಿ ಗ್ರಾಮ. ಅರುಣ್ ಕುರಿಗಾಹಿ ಮತ್ತು ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಅದೇ ಗ್ರಾಮದ ಅಮೃತಾ ಹಾಗೂ ಅರುಣ್ ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಅಮೃತಾ ತುಮಕೂರು ವಿವಿಯಲ್ಲಿ ಎಂ.ಎ. ಓದುತ್ತಿದ್ದಾಳೆ. ಇವರಿಬ್ಬರ ವಿಚಾರ ಮನೆಯವರಿಗೆ ತಿಳಿದಿದ್ದು, ಇಬ್ಬರ ಮನೆಯಲ್ಲೂ ವಿರೋಧ ವ್ಯಕ್ತವಾಗಿದೆ. ಒಮ್ಮೆ ಊರಲ್ಲಿ ಹಬ್ಬ ಇದ್ದಾಗ ಹುಡುಗಿಯ ತಂದೆ ಅರುಣ್ ನನ್ನು ಊಟಕ್ಕೆ ಮನೆಗೆ ಕರೆಸಿಕೊಂಡು ಸಂಬಂಧಿಕರೊಂದಿಗೆ ಥಳಿಸಿದ್ದಾರೆ.
ಬಹಿರ್ದೆಸೆಗೆ ಹೋಗುವುದಾಗಿ ತಪ್ಪಿಸಿಕೊಂಡ ಯುವತಿ
ಇವರಿಬ್ಬರನ್ನು ದೂರಮಾಡಿ ಹುಡುಗಿಯ ಕುಟುಂಬದವರು ಅಮೃತಾಳಿಗೆ ಸಂಬಂಧಿಕರೊಬ್ಬರಿಗೆ ಕೊಟ್ಟು ಮದುವೆ ಮಾಡುವ ಸಿದ್ಧತೆಯಲ್ಲಿದ್ದರು. ವಿಷಯ ತಿಳಿದ ಅರುಣ್ ತಾನೂ ಮದುವೆ ಮಾಡಿಕೊಳ್ಳಲು ಸಿದ್ಧವಾಗಿದ್ದನು. ಯುವತಿ ಪೋಷಕರು ಅಮೃತಾಳನ್ನು ಕಾಲೇಜಿಗೆ ಬಿಟ್ಟು ಬರುವುದಾಗಿ ನೆಪ ಹೇಳಿ ಮದುವೆ ಮಾಡಲು ಸಿದ್ಧತೆಯಲ್ಲಿದ್ದರು. ಇತ್ತ ಅಮೃತಾ ಬಹಿರ್ದೆಸೆಗೆ ಹೋಗುವೆನೆಂದು ಸುಳ್ಳು ಹೇಳಿ ಅರುಣ್ ಇರುವ ಕುರಿಹಟ್ಟಿಗೆ ಸಿನಿಮೀಯ ಶೈಲಿಯಲ್ಲಿ ಓಡೋಡಿ ಬಂದು ತಾಳಿ ಕಟ್ಟಿಸಿಕೊಂಡಿದ್ದಾಳೆ.
ನೆದರ್ ಲ್ಯಾಂಡ್ ನಿಂದ ಬಂದು ಮೈಸೂರು ಯುವತಿ ವರಿಸಿದ ಯುವಕ
"ಒಳ್ಳೆಯವನಾಗಿದ್ದರೆ ಸಾಕು ಎಂದುಕೊಂಡಿದ್ದೆ"
ಈ ಕುರಿತು ಮಾತನಾಡಿದ ಅಮೃತಾ, "ನನಗೆ ತುಂಬಾ ಖುಷಿಯಾಗಿದೆ. ಅವನು ಚೆನ್ನಾಗಿ ದುಡಿಯುತ್ತಾನೆ. ನನಗೆ ಡಾಕ್ಟರ್, ಎಂಜಿನಿಯರ್ ಮಾಡಿದವರನ್ನು ಮದುವೆಯಾಗಬೇಕೆಂಬ ಆಸೆ ಇರಲಿಲ್ಲ. ಒಳ್ಳೆಯವರಾಗಿದ್ದರೆ ಸಾಕು ಅಂದುಕೊಂಡಿದ್ದೆ. ನಾನು ಪ್ರೀತಿ ಮಾಡಿದ್ದೆ. ಹೀಗಾಗಿ ಇವನ ಮೇಲೆ ನಂಬಿಕೆ ಇತ್ತು ಮದುವೆಯಾದೆ" ಎಂದು ತಮ್ಮ ಪ್ರೀತಿಯ ಬಗ್ಗೆ ಹೇಳಿದ್ದಾರೆ.