ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಚಿತ್ರದುರ್ಗ ಜಿಲ್ಲೆಯ ಮೊದಲ ಗ್ರಾಮ ತುರುವನೂರು
ಚಿತ್ರದುರ್ಗ, ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ದೇಶದೆಲ್ಲೆಡೆ ಸಂಭ್ರಮ ಸಡಗರದ ವಾತಾವರಣ ನಿರ್ಮಾಣವಾಗುತ್ತದೆ. ದೇಶದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಮತ್ತಿತರ ಕಡೆಗಳಲ್ಲಿ ರಂಗು ರಂಗಿನ ಬೆಳಕಿನ ಮಧ್ಯೆ ತ್ರಿವರ್ಣ ಧ್ವಜ ಹಾರಾಟ ಕಣ್ಮನ ಸೆಳೆಯುತ್ತದೆ.
ಅಂದಹಾಗೆ 1947ಕ್ಕಿಂತ ಮೊದಲು ಪರಕೀಯರ ಕೈಯಲ್ಲಿದ್ದ ದೇಶದ ಆಡಳಿತವನ್ನು ವಾಪಸ್ ಪಡೆಯಲು ದೇಶ, ರಾಜ್ಯ ಮತ್ತು ಜಿಲ್ಲೆಗಳಲ್ಲಿ ಸಾಕಷ್ಟು ರೀತಿಯಲ್ಲಿ ಚಳವಳಿಗಳು ನಡೆದವು. ಅಂತಹ ಚಳವಳಿಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಗ್ರಾಮವೇ ತುರುವನೂರು. ಗ್ರಾಮದ ಕಿಚ್ಚು ತಿಳಿಯಲು ಈ ಸ್ಟೋರಿ ಓದಿ.
ಚಿತ್ರದುರ್ಗ ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮ ಸ್ವಾತಂತ್ರ್ಯ ಹೋರಾಟಗಾರ ತವರೂರಾಗಿದೆ ಎಂದರೇ ತಪ್ಪಾಗಲಾರದು. ಜೊತೆಗೆ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಒಳಗೊಂಡ ಜಿಲ್ಲೆಯ ಏಕೈಕ ಗ್ರಾಮ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಗ್ರಾಮದಲ್ಲಿ ಆಳೆತ್ತರದ ಕಂಚಿನ ಗಾಂಧೀಜಿ ಪ್ರತಿಮೆ
ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದಲ್ಲಿ ಮೊಟ್ಟ ಮೊದಲು ಸ್ವಾತಂತ್ರ ಹೋರಾಟದ ಕಿಚ್ಚು ಪ್ರಾರಂಭವಾಯಿತು. ಇದರ ಸವಿನೆನಪಿಗಾಗಿ ಗ್ರಾಮದಲ್ಲಿ ಆಳೆತ್ತರದ ಕಂಚಿನ ಗಾಂಧೀಜಿ ಪ್ರತಿಮೆಯ ದೇವಾಲಯ ನಿರ್ಮಿಸಿ ನಿತ್ಯ ಪೂಜಾ ಕೈಂಕರ್ಯ ಮಾಡಲಾಗುತ್ತಿದೆ. ದೆಹಲಿಯಲ್ಲಿ ಏಳು ಅಡಿ ಎತ್ತರದ ಗಾಂಧಿ ಪ್ರತಿಮೆ ಬಿಟ್ಟರೆ ದೇಶದ ಎರಡನೆಯದು ತುರುವನೂರು ಗಾಂಧಿ ಪ್ರತಿಮೆಯಾಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ತುರುವನೂರು ಗ್ರಾಮ ತನ್ನದೇ ಛಾಪು ಮೂಡಿಸಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ನೇತೃತ್ವದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಳು ಇಲ್ಲಿ ನಡೆದಿವೆ. ಇದೇ ತುರುವನೂರು ಗ್ರಾಮದಲ್ಲಿ ಮೊದಲ ಬಾರಿಗೆ ಈಚಲ ಮರ ಕಡಿಯುವ ಚಳವಳಿ ತುರುವನೂರು ಗ್ರಾಮದಿಂದ ಆರಂಭವಾಯಿತು.
ಪೂರ್ಣ ಸ್ವರಾಜ್ಯ ಚಳವಳಿಯ ಕಿಚ್ಚು
ನೂರಾರು ಜನ ಸ್ವತಂತ್ರ ಹೋರಾಟಗಾರರು ಈ ಗ್ರಾಮದಿಂದಲೇ ಹೋರಾಟಕ್ಕೆ ಇಳಿದರು. 1942ರ ಮುಂಬೈಯಲ್ಲಿ ಜರುಗಿದ ಅಧಿವೇಶನದಲ್ಲಿ ಘೋಷಿಸಿದ ಪೂರ್ಣ ಸ್ವರಾಜ್ಯ ಚಳವಳಿಯ ಕಿಚ್ಚು ನಗರ ಹಾಗೂ ಪಟ್ಟಣಗಳಿಂದ ಹಳ್ಳಿಗಳಿಗೆ ಹರಡಿತು. ತುರುವನೂರು ಗ್ರಾಮದಲ್ಲಿ ಈಚಲು ಮರದ ಹೋರಾಟ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನು ಬದಲಿಸಿತು. ಆಗಿನ ಬ್ರಿಟಿಷ್ ಸರ್ಕಾರ ಈಚಲು ಮರಗಳಿಂದ ಹೆಂಡ (ಸೇಂದಿ) ಇಳಿಸಿ ಹೆಚ್ಚಿನ ಸುಂಕ ವಿಧಿಸಿ ಮಾರಾಟ ಮಾಡುತ್ತಿದ್ದರು.
ಈಚಲು ಮರಗಳು ಬ್ರಿಟಿಷರಿಗೆ ಆದಾಯದ ದಾರಿ
ತುರುವನೂರು ಗ್ರಾಮದ ಬಯಲು ಪ್ರದೇಶದಲ್ಲಿ ಬೆಳೆದು ನಿಂತಿದ್ದ ಈಚಲು ಮರಗಳು ಬ್ರಿಟಿಷರಿಗೆ ಆದಾಯದ ದಾರಿಯಾಯಿತು. ಹಳ್ಳಿ ಜನರನ್ನು ಕುಡಿತಕ್ಕೆ ಸೆಳೆಯುತ್ತಿದ್ದ ಆಂಗ್ಲರ ವಿರುದ್ಧ ಜನರು ದಂಗೆಯದ್ದರು. ಈಚಲು ಮರಗಳು ಸಾಲು ಸಾಲಾಗಿ ಬೆಳೆದು ಹೆಂಡಕ್ಕೆ ಕಾರಣವಾಗಿದ್ದ ಮರಗಳನ್ನೇ ಕುಡಿದು ಹಾಕುವ ನಿರ್ಧಾರಕ್ಕೆ ಬರುವ ಮೂಲಕ ಹೋರಾಟದ ಹಾದಿಯನ್ನು ಹಿಡಿದರು. ಹಿರಿಯೂರು ಹಾಗೂ ಹೊಳಲ್ಕೆರೆ ಮತ್ತು ಚಳ್ಳಕೆರೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಸಹ ಈಚಲು ಮರದ ಹೋರಾಟ ನಡೆಸಲಾಗಿದೆ.
ಆ ಹೋರಾಟದ ಸವಿನೆನಪಿಗಾಗಿ ಹಾಗೂ ಚಿತ್ರದುರ್ಗ ಜಿಲ್ಲೆಯವರೇ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪನವರು ಗ್ರಾಮದಲ್ಲಿ ಗಾಂಧಿ ಪ್ರತಿಮೆ ನಿರ್ಮಾಣಕ್ಕೆ ತೀರ್ಮಾನಿಸಿದರು. ಈ ದೇಗುಲವನ್ನು ಅಕ್ಟೋಬರ್ 1, 1968 ರಂದು ಎಸ್.ನಿಜಲಿಂಗಪ್ಪ ಈ ಗಾಂಧಿ ದೇಗುಲವನ್ನು ಉದ್ಘಾಟಿಸಿದ್ದರು. ಈ ಗಾಂಧಿ ಪ್ರತಿಮೆಯ ದೇವಸ್ಥಾನದಲ್ಲಿ ದಿನನಿತ್ಯ ಪೂಜೆ ಪುನಸ್ಕಾರ ನಡೆಯುತ್ತಲಿವೆ.
Recommended Video
ಸ್ವಾತಂತ್ರ್ಯ ಯೋಧರಿಗೆ ಮಾಸಾಶನ
ಸ್ವಾತಂತ್ರ್ಯ ನಂತರ ರಾಜ್ಯ ಸರ್ಕಾರ ಇಲ್ಲಿನ 136 ಜನರಿಗೆ ಸ್ವಾತಂತ್ರ್ಯ ಯೋಧರ ಮಾಸಾಶನ ಮಂಜೂರು ಮಾಡಿತು. ತದನಂತರದ ದಿನಗಳಲ್ಲಿ ಬಹುತೇಕ ಯೋಧರು ನಿಧನರಾಗಿದ್ದಾರೆ. ಚಳವಳಿಯ ಸಮಯದಲ್ಲಿ ಗ್ರಾಮದ ನೂರಾರು ಜನರು ಆಂಗ್ಲರ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ್ದರು. ಈಗ ಸ್ವಾತಂತ್ರ್ಯ ಯೋಧರ ಪತ್ನಿ ಹಾಗೂ ಆಶ್ರಿತರು ಕೇಂದ್ರ ರಾಜ್ಯ ಸರ್ಕಾರಗಳ ಮಾಸಾಶನ ಪಡೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ನಾಲ್ಕು ಜನರಿಗೆ ಹಾಗೂ ರಾಜ್ಯ ಸರ್ಕಾರ 13 ಜನರಿಗೆ ಸ್ವಾತಂತ್ರ್ಯ ಯೋಧರಿಗೆ ಮಾಸಾಶನ ನೀಡುತ್ತಿದೆ.
ಒಟ್ಟಾರೆಯಾಗಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಪಡೆದ ಚಿತ್ರದುರ್ಗ ಜಿಲ್ಲೆಯ ಮೊದಲ ಗ್ರಾಮ ಎಂಬ ಹೆಸರಿಗೆ ಹೆಗ್ಗಳಿಕೆಗೆ ಪಾತ್ರವಾಗಿರುವ ತುರುವನೂರು ಗ್ರಾಮದಲ್ಲಿ ಹೋರಾಟದ ನೆನಪಿಗಾಗಿ ಕಲ್ಲಿನ ಕೋಟೆಯಂಥ ಕಟ್ಟಡದ ಮೇಲೆ ನಿರ್ಮಿಸಿರುವ ಕಂಚಿನ ಗಾಂಧಿ ಪ್ರತಿಮೆ ಎಲ್ಲರ ಕಣ್ಮನ ಸೆಳೆಯುತ್ತದೆ.