ಕೆಎಸ್ಆರ್ಟಿಸಿಗೆ ಒಂದು ವರ್ಷದಲ್ಲಿ 3 ಸಾವಿರ ಕೋಟಿ ನಷ್ಟ
ಚಿತ್ರದುರ್ಗ, ಮಾರ್ಚ್ 21: " ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಒಂದು ವರ್ಷದಲ್ಲಿ 3 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ" ಎಂದು ಸಾರಿಗೆ ಸಚಿವ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಭಾನುವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬಸಾಪುರ ಗೇಟ್ ಬಳಿ ಸಮಾಜ ಕಲ್ಯಾಣ ಇಲಾಖೆ ಮತ್ತು ಕೆಎಸ್ಆರ್ಟಿಸಿ ವತಿಯಿಂದ ನಿರ್ಮಿಸಿರುವ ಚಾಲಕರ ತರಬೇತಿ ಕೇಂದ್ರ ಹಾಗೂ ನೂತನ ಬಸ್ ಘಟಕದ ಶಂಕುಸ್ಥಾಪನೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು-ತಿರುಪತಿ ಪ್ಯಾಕೇಜ್ ಘೋಷಣೆ ಮಾಡಿದ ಕೆಎಸ್ಆರ್ಟಿಸಿ
"ಅಪಘಾತ ಸಂಖ್ಯೆಗಳನ್ನು ಕಡಿಮೆ ಮಾಡಲು ತರಬೇತಿ ಕೇಂದ್ರಗಳನ್ನು ಅನೇಕ ಕಡೆಗಳಲ್ಲಿ ಪ್ರಾರಂಭ ಮಾಡಿದ್ದೇವೆ. ನಾನು ಸಾರಿಗೆ ಮಂತ್ರಿಯಾದ ನಂತರ ಸಾರಿಗೆ ಸಂಸ್ಥೆಯ ಅಭಿವೃದ್ಧಿ ಬಗ್ಗೆ ಹಲವಾರು ರೀತಿಯ ಆಲೋಚನೆ ಮಾಡಲಾಗಿತ್ತು. ಕೊರೊನಾ ಬಂದ ಕಾರಣ ಸಂಸ್ಥೆಯ ನಾಲ್ಕು ನಿಗಮಗಳು ನಷ್ಟ ಅನುಭವಿಸಬೇಕಾಯಿತು" ಎಂದರು.
ಬೆಂಗಳೂರು-ಬೆಳಗಾವಿ ನಡುವೆ ಐರಾವತ್ ಕ್ಲಬ್ ಕ್ಲಾಸ್ ಬಸ್ ಸಂಚಾರ
"ಕೋವಿಡ್ ಸಮಯದಲ್ಲಿ ಸಿಬ್ಬಂದಿಯವರ ವೇತನಕ್ಕಾಗಿ ಸರ್ಕಾರದಿಂದ 1,900 ಕೋಟಿ ಹಣ ಪಡೆದು ವೇತನ ನೀಡಲಾಗಿದೆ. ಸಿಬ್ಬಂದಿಗಳ ವೇತನದಲ್ಲಿ ಯಾವುದೇ ಕಡಿತ ಮಾಡದೆ ಹಣ ಸಂದಾಯ ಮಾಡಲಾಗಿದೆ. ಇಷ್ಟೆಲ್ಲಾ ಮಾಡಿದರೂ ಸಹ ಸಿಬ್ಬಂದಿಯವರು ಇತ್ತೀಚಿಗೆ ಪ್ರತಿಭಟನೆ ಮಾಡಿದರು. ಇದರಿಂದ ನಾನು ಹಾಗೂ ನಮ್ಮ ಸರ್ಕಾರ ಟೀಕೆಗೆ ಒಳಗಾಗಬೇಕಾಯಿತು" ಎಂದು ಹೇಳಿದರು.
ವಿಡಿಯೋ ವೈರಲ್: ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸದ ಚಾಲಕ, ಮಾರುದೂರ ಓಡಿದ ವಿದ್ಯಾರ್ಥಿಗಳು!
"ಸಿಬ್ಬಂದಿಯ 10 ಬೇಡಿಕೆಗಳಲ್ಲಿ 9 ಬೇಡಿಕೆ ಈಡೇರಿಸುವುದಾಗಿ ತಿಳಿಸಿದ್ದೆವು. ಅದರಲ್ಲಿ 8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. 9ನೇ ಬೇಡಿಕೆಯಾದ ಆರನೇ ವೇತನ ಅಯೋಗದ ಶಿಫಾರಸು ಜಾರಿಗೆ ತರುವುದು ಬಾಕಿ ಇದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ನಿರ್ಣಯ ಮಾಡಲಿದ್ದೇವೆ" ಎಂದು ತಿಳಿಸಿದರು.
"ಮುಂದಿನ ದಿನಗಳಲ್ಲಿ 4 ನಿಗಮಗಳನ್ನು ನಷ್ಟದಿಂದ ಹೊರಗೆ ತರುತ್ತೇನೆ. ಇತ್ತೀಚಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಕಾರ್ಗೋ ಸೇವೆಯನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಇದರಿಂದ 200 ಕೋಟಿ ಲಾಭ ಗಳಿಸುವ ಗುರಿ ಇದೆ. ಸಾರಿಗೆ ಇಲಾಖೆಯ ವತಿಯಿಂದ ಪೆಟ್ರೋಲ್ ಬಂಕ್ ನಿರ್ಮಿಸುವ ಯೋಜನೆಯೂ ಇದೆ" ಎಂದು ಸಚಿವರು ವಿವರಿಸಿದರು.
"ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತ ನೀಡಲಾಗಿದೆ. 75%. ರಿಯಾಯಿತಿ ಯಲ್ಲಿ ಇತರೆ ವಿದ್ಯಾರ್ಥಿಗಳಿಗೆ ಬಸ್ಪಾಸ್ ನೀಡುತ್ತಿದ್ದೇವೆ. ಸರ್ಕಾರದಿಂದ ಸುಮಾರು 2600 ಕೋಟಿ ರೂ. ವಿದ್ಯಾರ್ಥಿಗಳ ಬಸ್ ಪಾಸಿನ ಅನುದಾನದ ಹಣ ಬರಬೇಕಾಗಿದೆ" ಎಂದರು.
"ನಿಗಮ ಬದುಕಿದರೆ ಸಿಬ್ಬಂದಿಯವರು ಬದುಕುವರು. ಆದರೆ ಸಿಬ್ಬಂದಿಯವರು ಮುಂದಿನ ತಿಂಗಳ 7ರಂದು ಪ್ರತಿಭಟನೆ ಮಾಡುವುದಾಗಿ ನೋಟಿಸ್ ನೀಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹಾಗೂ ನಮ್ಮೆಲ್ಲರಿಗೂ ತೊಂದರೆಯಾಗಲಿದೆ. ಸಿಬ್ಬಂದಿಗಳ ಶೇ 90 ರಷ್ಟು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆದರೂ ಸಹ ಪ್ರತಿಭಟನೆಗೆ ಮುಂದಾಗಿರುವುದು ಆಶ್ಚರ್ಯಕರವಾಗಿದೆ" ಎಂದು ಹೇಳಿದರು.