ಚಿತ್ರದುರ್ಗದಲ್ಲಿ ಭೀಕರ ಅಪಘಾತ:ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಸಾವು
ಚಿತ್ರದುರ್ಗ, ಏಪ್ರಿಲ್ 22: ಟೈಯರ್ ಪಂಕ್ಚರ್ ಆಗಿ ನಿಂತಿದ್ದ ಟೆಂಪೋ ಟ್ರಾವೆಲರ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಇಂದು ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಚಿತ್ರದುರ್ಗದಲ್ಲಿ ನಡೆದಿದೆ.
ರೇಷ್ಮೆ ಇಲಾಖೆ ಕಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ಸಂಭವಿಸಿದ್ದು, ಮೃತರು ಬೆಂಗಳೂರಿನ ವಿಜಯಾ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಬಿಕಾಂ ವಿದ್ಯಾರ್ಥಿಗಳಾದ ಹರ್ಷ, ಶ್ರೀನಿಧಿ ಹಾಗೂ ಕಾರ್ತಿಕ್ ಮೃತ ದುರ್ದೈವಿಗಳಾಗಿದ್ದು, ಗಾಯಾಳುಗಳು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀಲಂಕಾ ಸ್ಫೋಟ: ಚರ್ಚ್ ದಾಳಿಗೂ ಮೊದಲು ಉಗ್ರನನ್ನು ಪ್ರಶ್ನಿಸಿದ್ದ ಪಾದ್ರಿ
ವಿಜಯಾ ಕಾಲೇಜಿನ 14ಮಂದಿ ಬಿಕಾಂ ವಿದ್ಯಾರ್ಥಿಗಳು ಟೆಂಪೋ ಟ್ರಾವೆಲರ್ ನಲ್ಲಿ ಗೋಕರ್ಣ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಟೆಂಪೋ ಟ್ರಾವಲರ್ ಟೈಯರ್ ಪಂಕ್ಚರ್ ಆಗಿದೆ. ಕೂಡಲೇ ವಾಹನವನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಚಾಲಕ, ಇಬ್ಬರು ವಿದ್ಯಾರ್ಥಿಗಳ ಜೊತೆ ಪಂಕ್ಚರ್ ಷಾಪ್ ಗೆ ತೆರಳಿದ್ದಾನೆ. ಆಗ ನಿದ್ದೆ ಮಂಪರಿನಲ್ಲಿದ್ದ ಲಾರಿ ಚಾಲಕ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಈ ದುರ್ಘಟನೆ ನಡೆದಿದೆ.
ನಗುತ್ತಾ ದುಬೈ ವಿಮಾನ ಹತ್ತಿದ ಪತಿ ಇಳಿದ ತಕ್ಷಣ ಕೇಳಿದ್ದು ಪತ್ನಿ ಸಾವಿನ ಸುದ್ದಿ
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಟಿಟಿ ವಾಹನ ಅದೇ ಮಾರ್ಗವಾಗಿ ತೆರಳುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು, ಕಾರು ಕೂಡ ಜಖಂಗೊಂಡಿದೆ, ಸದ್ಯ ಕಾರಿನಲ್ಲಿದ್ದವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಮೃತ ದೇಹಗಳನ್ನು ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದ್ದು, ಸಂಚಾರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ..