ಕೈಲಾಗದ ವೃದ್ಧ ದಂಪತಿಯನ್ನು ಬೀದಿಗೆ ತಳ್ಳಿದ ಮೂರು ಮಕ್ಕಳು
ಚಿತ್ರದುರ್ಗ, ಜನವರಿ 23: ಆ ದಂಪತಿಗೆ ಮೂವರು ಗಂಡು ಮಕ್ಕಳು. ಗ್ಯಾಂಗ್ರಿನ್ ಗೆ ತುತ್ತಾಗಿ ಕಾಲು ಕಳೆದುಕೊಂಡ ಪತ್ನಿ, ಇದ್ದ ಆಸ್ತಿ ಪಾಸ್ತಿಯನ್ನೆಲ್ಲಾ ಮಕ್ಕಳಿಗೆ ಬರೆದುಕೊಟ್ಟ ತಂದೆ. ಇದೀಗ ಕಣ್ಣೀರು ಹಾಕುತ್ತಾ ಮಗಳ ಮನೆಯಲ್ಲಿ ಬದುಕಿನ ಬಂಡಿ ನೂಕುತ್ತಿದ್ದಾರೆ.
ಇದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದ ಗೌರಮ್ಮ ಮತ್ತು ಬಸವರಾಜಪ್ಪ ದಂಪತಿಯ ವಾಸ್ತವ ಬದುಕಿನ ಚಿತ್ರಣ. ಅಷ್ಟಕ್ಕೂ ಆ ವೃದ್ಧ ದಂಪತಿಗಳ ಕಣ್ಣೀರಿಗೆ ಕಾರಣ ಏನಿರಬಹುದು ಅಂತೀರಾ?
ಹಿರಿಯೂರಲ್ಲಿ ಕಳೆದುಕೊಂಡಿದ್ದ ಮಗು ಇಂದು ತಂದೆಯ ಮಡಿಲು ಸೇರಿತು
ಅಂದಹಾಗೆ ಒಂದು ಕಾಲದಲ್ಲಿ ಚೆನ್ನಾಗಿ ಬಾಳಿ ಬದುಕಿದ ಈ ದಂಪತಿಗೆ ಮೂವರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳಿದ್ದಾರೆ. ವಯಸ್ಸಿದ್ದಾಗ ಎಲ್ಲರನ್ನೂ ಸಾಕಿ ಸಲುಹಿದ ಇವರು, ಮಕ್ಕಳಿಗೆ ಮದುವೆ ಮಾಡಿ ಇದ್ದ ಮೂವತ್ತು ಎಕರೆ ಆಸ್ತಿಯನ್ನ ಹಂಚಿದ್ದಾರೆ.
ಗಂಡು ಮಕ್ಕಳಿಂದ ನಿರ್ಲಕ್ಷಕ್ಕೆ ಒಳಗಾದ ವೃದ್ಧ ದಂಪತಿ
ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಹಣವನ್ನೂ ನಮ್ಮ ಕಷ್ಟ ಕಾಲಕ್ಕೆ ಆಗ್ತಾರೆ ಅನ್ನೋ ನಂಬಿಕೆಯಿಂದ ಮಕ್ಕಳಿಗೆ ಕೊಟ್ಟಿದ್ದರು. ಕಿರಿಯ ಮಗ ಹೈಕೋರ್ಟ್ ವಕೀಲರಾಗಿ ಬೆಂಗಳೂರು ಸೇರಿದರೆ, ಇನ್ನಿಬ್ಬರು ಮಕ್ಕಳು ಕಂಚೀಪುರ ಗ್ರಾಮದಲ್ಲೇ ವಾಸವಿದ್ದಾರೆ. ಗಂಡು ಮಕ್ಕಳು ಅನ್ನೋ ಆಸೆಯಿಂದ ತನ್ನ ಆಸ್ತಿಯನ್ನೆಲ್ಲಾ ಕೊಟ್ಟು ಈಗ ಖಾಲಿ ಕೈಯಲ್ಲಿ ನಿಂತಿರುವ ತಂದೆ-ತಾಯಿ ಈಗ ಮಗಳ ಮನೆಯಲ್ಲಿ ಕೊನೆಯ ದಿನಗಳನ್ನು ದೂಡುತ್ತಿದ್ದಾರೆ.
ಕೊನೆ ದಿನದಲ್ಲಿ ಮಕ್ಕಳ ಆಸರೆ ಬಯಸುತ್ತಿರುವ ವೃದ್ಧ ತಂದೆ, ತಾಯಿ
ಆದರೆ ಹೆತ್ತವರನ್ನು ನೋಡೋಕೆ ಮಾತ್ರ ಯಾರೂ ಬರುತ್ತಿಲ್ಲ. ಕಷ್ಟ ಬಂದರೆ ಬೇಕಾಗುತ್ತದೆ ಅಂತ ಇನ್ಸುರೆನ್ಸ್ ಮಾಡಿಸಿದ್ದ ಹಣವನ್ನೂ ಕಿತ್ತುಕೊಂಡಿರುವ ಗಂಡು ಮಕ್ಕಳು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ತಾಯಿಯನ್ನೂ ನೋಡೋಕೆ ಬರುತ್ತಿಲ್ಲ.ಹೀಗಾಗಿ ಸಾಯೋದರ ಒಳಗೆ ಮಕ್ಕಳು, ಮೊಮ್ಮಕ್ಕಳು ಸೊಸೆಯಂದಿರನ್ನು ಮುಟ್ಟಿ ಮಾತನಾಡಿಸಬೇಕು ಎಂದು ಈ ನತದೃಷ್ಟ ತಾಯಿ ಆಸೆ ಪಡುತ್ತಿದ್ದಾರೆ. ಎಲ್ಲಾದರೂ ಇರಲಿ ನನ್ನ ಮಕ್ಕಳು ಚೆನ್ನಾಗಿರಲಿ ಅಂತ ಹಾರೈಸುತ್ತಾ ಕಣ್ಣೀರು ಹಾಕುತ್ತಿದ್ದಾರೆ.
ಜೀವನಾಂಶಕ್ಕೆ ಇರುವ ಜಮೀನಿನ ಮೇಲೂ ಮಕ್ಕಳ ಕಣ್ಣು
ಇದ್ದ ಎಲ್ಲಾ ಆಸ್ತಿ, ಹಣವನ್ನು ಗಂಡು ಮಕ್ಕಳಿಗೆ ಕೊಟ್ಟು ಬರಿಗೈಲಿ ನಿಂತಿರೋ ತಂದೆ ಬಸವರಾಜಪ್ಪ, ಕಾಲು ಕಳೆದುಕೊಂಡಿರುವ ಅಂಧ ಪತ್ನಿಯ ಚಿಕಿತ್ಸೆ ಸಲುವಾಗಿ, ತಮ್ಮ ಜೀವನಾಂಶಕ್ಕೆ ಅಂತ ಇಟ್ಟುಕೊಂಡಿರುವ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಮಾರಾಟ ಮಾಡಲು ಹೊರಟಿದ್ದರು. ಆಗ ಎರಡನೇ ಮಗ ತಂದೆ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.
ಹೆತ್ತವರ ಯೋಗ-ಕ್ಷೇಮವನ್ನು ಒಂದು ದಿನವೂ ಬಂದು ವಿಚಾರಿಸದ ಗಂಡು ಮಕ್ಕಳು ತಮ್ಮ ಜೀವನಾಂಶಕ್ಕೆ ಇಟ್ಟುಕೊಂಡಿದ್ದ ಮೂರು ಎಕರೆ ಜಮೀನಿನ ಮೇಲೂ ಕಣ್ಣು ಹಾಕಿದ್ದಾರೆ.
ಯಾವ ತಂದೆ, ತಾಯಿಗೂ ಇಂತಹ ಸ್ಥಿತಿ ಬಾರದಿರಲಿ
ಇಳಿವಯಸ್ಸಿನಲ್ಲಿ ಹೆತ್ತವರನ್ನು ನೋಡಿಕೊಳ್ಳಬೇಕಾದ ಗಂಡು ಮಕ್ಕಳು ತಂದೆ ತಾಯಿಯನ್ನು ದೂರ ಮಾಡಿದ್ದಾರೆ. ಆದರೆ ಮಕ್ಕಳು ಮೊಮ್ಮಕ್ಕಳನ್ನು ಮಾತನಾಡಿಸಬೇಕು ಅಂತ ವೃದ್ದ ಅಂಧ ತಾಯಿ ಆಸೆಯಿಂದ ಕಾಯುತ್ತಿದ್ದಾರೆ. ನಮಗಾದ ಸ್ಥಿತಿ ಬೇರೆ ಯಾವ ತಂದೆ, ತಾಯಿಗೂ ಬಾರದಿರಲಿ ಅಂತಾರೆ. ಈಗಲಾದರೂ ಇವರ ಮಕ್ಕಳು ಬಂದು ತಾಯಿಯ ಆಸೆಯನ್ನು ಈಡೇರಿಸಲಿ ಹಾಗೂ ಅವರನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬುದು ಸ್ಥಳೀಯರ ಆಶಯವಾಗಿದೆ.