ಅನೈತಿಕ ಸಂಬಂಧದ ಜಗಳ; ಚಿತ್ರದುರ್ಗದಲ್ಲಿ ಬೆಂಕಿ ಹಚ್ಚಿಕೊಂಡು ಮೂವರ ಆತ್ಮಹತ್ಯೆ
ಚಿತ್ರದುರ್ಗ, ಜನವರಿ 02: ಕೌಟುಂಬಿಕ ಕಲಹದಿಂದ ಬೇಸತ್ತು ಬೆಂಕಿ ಹಚ್ಚಿಕೊಂಡು ಗಂಡ, ಹೆಂಡತಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಗಾರೆಹಟ್ಟಿ ಬಡಾವಣೆಯಲ್ಲಿ ಗುರುವಾರ ನಡೆದಿದೆ.
ಪತಿ ಅರುಣ್ ಕುಮಾರ್ (43), ಪತ್ನಿ ಲತಾ (35) ಹಾಗೂ ಮಗಳು ಅಮೃತಾ (12) ಘಟನೆಯಲ್ಲಿ ಮೃತಪಟ್ಟಿದ್ದಾರೆ. ಅರುಣ್ ಖಾಸಗಿ ಬಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿ ಲತಾ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹದಿನಾಲ್ಕು ವರ್ಷಗಳ ಹಿಂದೆ ಅರುಣ್ ಹಾಗೂ ಲತಾ ಮದುವೆಯಾಗಿತ್ತು.
ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿ
ಅರುಣ್ ಕುಮಾರ್ ಗೆ ಅನೈತಿಕ ಸಂಬಂಧವಿದ್ದು, ಈ ವಿಷಯವಾಗಿ ಪದೇ ಪದೇ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತು. ಅರುಣ್ ಕುಮಾರ್ ಹೆಂಡತಿ, ಮಗಳಿಗೆ ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಲತಾ ಪೋಷಕರು ದೂರಿದ್ದಾರೆ. ಮದುವೆಯಾದ ಕೆಲವು ವರ್ಷಗಳು ಅನ್ಯೋನ್ಯವಾಗೇ ಇದ್ದ ಗಂಡ ಹೆಂಡತಿ ನಡುವೆ ನಂತರದ ವರ್ಷಗಳಲ್ಲಿ ವೈಮನಸ್ಸು ಹೆಚ್ಚಾಗಿತ್ತು. ವಿಚ್ಛೇದನಕ್ಕೂ ಅವರು ಮುಂದಾಗಿದ್ದರು ಎಂದು ತಿಳಿದುಬಂದಿದೆ. ಆದರೆ ಹಿರಿಯರು ಕುಳಿತು ಇಬ್ಬರಿಗೂ ಬುದ್ಧಿ ಹೇಳಿದ್ದರು. ಈಚೆಗೆ ಬಸ್ ಅಪಘಾತದಲ್ಲಿ ಅರುಣ್ ಕಾಲಿನ ಬೆರಳು ಮುರಿದುಕೊಂಡಿದ್ದ ನಂತರ ವೈಮನಸ್ಸು ಇನ್ನಷ್ಟು ಹೆಚ್ಚಾಗಿತ್ತು.
ಅತ್ತೆ ವಾಯುವಿಹಾರಕ್ಕೆ ಹೋದಾಗ ಘಟನೆ
ಈಚೆಗೆ ಅರುಣ್ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿ ಲತಾ ಅವರ ತಾಯಿಯೂ ಮನೆಯಲ್ಲಿ ಇದ್ದರು. ಮಾಮೂಲಿಯಂತೆ ಇಂದು ವಾಯುವಿಹಾರಕ್ಕೆ ಅವರ ತಾಯಿ ಹೊರ ಹೋದಾಗ ಅರುಣ್ ಮನೆಗೆ ಬಂದಿದ್ದಾರೆ. ಅವರು ವಾಯುವಿಹಾರ ಮುಗಿಸಿಕೊಂಡು ಮನೆಗೆ ಹಿಂತಿರುಗುವಷ್ಟರಲ್ಲಿ ಈ ಘಟನೆ ನಡೆದುಹೋಗಿದೆ.
ಮನೆಯಿಂದ ಕೇಳಿಬಂತು ಅಳುವ ಶಬ್ದ
"ಮೊದಲು ಇವರಿದ್ದ ಮನೆಯಿಂದ ಜೋರಾಗಿ ಅಳುವ ಶಬ್ದ ಕೇಳಿಬಂತು. ಆ ಸಂದರ್ಭ ನೋಡಿದಾಗ ಮನೆಯ ಕಿಟಕಿ ಹಾಗೂ ಬಾಗಿಲ ಬಳಿಯಿಂದ ದಟ್ಟ ಹೊಗೆ ಹೊರ ಬರುತ್ತಿತ್ತು. ನಾವು ಅಲ್ಲಿಗೆ ಹೋದಾಗ ಒಳಗಿನಿಂದ ಬಾಗಿಲು ಹಾಕಲಾಗಿತ್ತು. ಕಬ್ಬಿಣದ ರಾಡ್ ತೆಗೆದುಕೊಂಡು ಒಳಹೋಗುವುದರಲ್ಲಿ ಎಲ್ಲರೂ ಸತ್ತಿದ್ದರು" ಈ ಘಟನೆಯನ್ನು ವಿವರಿಸಿದರು ಸ್ಥಳೀಯರು.
ಆತ್ಮಹತ್ಯೆಯೋ ಆಕಸ್ಮಿಕವೋ ತಿಳಿದಿಲ್ಲ
ಈ ಘಟನೆ ನಡೆದಾಗ ಮೊದಲು ಸಿಲಿಂಡ್ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿತ್ತು. ಮನೆಯಲ್ಲಿ ಪೆಟ್ರೋಲ್ ವಾಸನೆ ಬರುತ್ತಿದ್ದುದು ಅನುಮಾನ ಹುಟ್ಟುಹಾಕಿತ್ತು. ಅಡುಗೆ ಅನಿಲ ಸೋರಿಕೆ ಅಥವಾ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆ ತಿಳಿಸಿದೆ. ಆದರೆ ಘಟನೆ ಕುರಿತು ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ಇದು ಆಕಸ್ಮಿಕವಾಗಿ ಸಂಭವಿಸಿದ ಅವಘಡವೋ, ಆತ್ಮಹತ್ಯೆಯೋ ಎಂಬ ಕುರಿತು ನಿಖರ ಮಾಹಿತಿ ಇನ್ನೂ ದೊರೆತಿಲ್ಲ. ತನಿಖೆ ನಂತರವಷ್ಟೇ ಎಲ್ಲವೂ ಸ್ಪಷ್ಟವಾಗಬೇಕಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಮೂವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.