ಚಿತ್ರದುರ್ಗ; ವಿಜೃಂಭಣೆಯಿಂದ ನಡೆದ ತೇರುಮಲ್ಲೇಶ್ವರ ರಥೋತ್ಸವ
ಚಿತ್ರದುರ್ಗ, ಫೆಬ್ರವರಿ 26: ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಶ್ರೀ ತೇರುಮಲ್ಲೇಶ್ವರನ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಶುಕ್ರವಾರ ನಡೆದ ರಥೋತ್ಸವಕ್ಕೆ ತಹಶೀಲ್ದಾರ್ ಜಿ. ಎಚ್. ಸತ್ಯನಾರಾಯಣ, ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಚಾಲನೆ ನೀಡಿದರು. ರಥೋತ್ಸವದ ಸಮಯದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ, ಜಿಲ್ಲಾಡಳಿತ ಅನುಮತಿ ಕೊಡಲಿಲ್ಲ. ತೆರುಮಲ್ಲೇಶ್ವರ ಸ್ವಾಮಿಯ ಮುಕ್ತಿ ಭಾವುಟವನ್ನು ಹರಾಜಿನಲ್ಲಿ 5 ಲಕ್ಷಕ್ಕೆ ಆಟ್ಟಿಕಾ ಗೋಲ್ಡ್ ಪ್ಯಾಲೇಸ್ ಬೊಮ್ಮನಹಳ್ಳಿ ಬಾಬು ಪಡೆದುಕೊಂಡರು.
ತೇರುಮಲ್ಲೇಶ್ವರ ದೇಗುಲದ ಮುಂಭಾಗದಿಂದ ಸಿದ್ದನಾಯಕ ಸರ್ಕಲ್ ತನಕ ಭಕ್ತರು ರಥವನ್ನು ಎಳೆದರು. ಸ್ವಾಮಿಗೆ ಭಕ್ತರು ಬಾಳೆ ಹಣ್ಣು ಎಸೆದು ಪುಳಕಿತರಾದರು. ವಿವಿಧ ಸಂಘ ಸಂಸ್ಥೆಗಳಿಂದ ಮಜ್ಜಿಗೆ, ಪಾನಕ, ಕೊಸಂಬರಿ, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರೆಯಲ್ಲಿ ಮಾಜಿ ಸಚಿವ ಡಿ. ಸುಧಾಕಾರ್, ಡಿ. ಟಿ. ಶ್ರೀನಿವಾಸ್, ಸಿ. ಬಿ. ಪಾಪಣ್ಣ, ನಾಗೇಂದ್ರನಾಯ್ಕ ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ಚುನಾವಣೆಯಲ್ಲಿ ಸ್ಪರ್ಧೆ: "ಹೆಲಿಕಾಪ್ಟರ್ ಮೂಲಕ ಶ್ರೀ ತೇರುಮಲ್ಲೆಶ್ವರ ಸ್ವಾಮಿಗೆ ಪುಷ್ಪಾರ್ಚನೆ ಮಾಡಬೇಕೆಂಬ ಹರಕೆ ಇತ್ತು. ಆದರೆ, ಸರ್ಕಾರ ಅನುಮತಿ ಕೊಡಲಿಲ್ಲ. ಕೈಯಿಂದಲೇ ಹೂವನ್ನು ಸ್ವಾಮಿಗೆ ಅರ್ಪಿಸಿದ್ದೇನೆ. ನನಗೆ ಜಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಖುಷಿಯಾಗಿದೆ" ಎಂದು ಬೊಮ್ಮನಹಳ್ಳಿ ಬಾಬು ತಿಳಿಸಿದರು.
ಹಿರಿಯೂರಿನಲ್ಲಿ ಮಾತನಾಡಿದ ಅವರು, "ಸ್ವಾಮಿಯ ಆಶೀರ್ವಾದ ಇದ್ದರೆ ಖಂಡಿತ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರ ಒತ್ತಾಸೆಯಂತೆ ಹಿರಿಯೂರು ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ" ಎಂದು ಹೇಳಿದರು.