ಒತ್ತಡಕ್ಕೆ ಮಣಿದ ಜಿಲ್ಲಾಡಳಿತ, ವಿವಿ ಸಾಗರ ಹೋರಾಟಕ್ಕೆ ತಾತ್ಕಾಲಿಕ ಜಯ
ಹಿರಿಯೂರು, ಜುಲೈ 2: ಚಿತ್ರದುರ್ಗ ಜಿಲ್ಲೆಯ ಏಕೈಕ ಅಣೆಕಟ್ಟು ಹಿರಿಯೂರಿನ ವಾಣಿವಿಲಾಸ ಜಲಾಶಯ ಡೆಡ್ ಸ್ಟೋರೇಜ್ ತಲುಪಿದ್ದು, 'ಡೆಡ್ ಸ್ಟೋರೇಜ್ ನೀರು ಉಳಿಸಿ ಡ್ಯಾಂ ರಕ್ಷಿಸಿ' ಎಂದು ವಿವಿ ಸಾಗರ ಹೋರಾಟ ಸಮಿತಿಯು ಕಳೆದ ಮೂರ್ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿತ್ತು. ಇದೀಗ ಆ ಹೋರಾಟಕ್ಕೆ ಫಲ ದೊರೆತಿದೆ.
ಶನಿವಾರ ನಡೆದ ಪ್ರತಿಭಟನಾ ಸಮಾವೇಶ ಯಶಸ್ವಿಯಾಗಿದ್ದು, ಸಮಾವೇಶದಲ್ಲಿ ಪಕ್ಷಾತೀತವಾಗಿ ನಾಯಕರು ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಜೊತೆಗೆ ನಿನ್ನೆ ನಡೆದ ಹಿರಿಯೂರು ಬಂದ್ ಗೂ ವ್ಯಾಪಾಕ ಬೆಂಬಲ ವ್ಯಕ್ತವಾಗಿತ್ತು. ಇದೀಗ ಜಿಲ್ಲಾಡಳಿತ ರೈತರ ಹೋರಾಟಕ್ಕೆ ಮಣಿದು ತಾತ್ಕಾಲಿಕವಾಗಿ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆಯ ಡಿಆರ್ ಡಿಒಗೆ ಪಂಪಿಂಗ್ ಮೂಲಕ ಕೊಡುವ ನೀರನ್ನು ಸ್ಥಗಿತಗೊಳಿಸಿದೆ. ಪಂಪಿಂಗ್ ಸ್ಥಗಿತ ಮಾಡಿರುವ ಬಗ್ಗೆ ಸಂಜೆ ಜಿಲ್ಲಾಧಿಕಾರಿಗಳು ಆದೇಶದ ಪ್ರತಿ ಕೊಡಬೇಕೆಂದು ರೈತರು ಸೂಚಿಸಿದ್ದಾರೆ.
ಹಿರಿಯೂರು ಬಂದ್ ಗೆ ಉತ್ತಮ ಪ್ರತಿಕ್ರಿಯೆ; ಸಂಘಟನೆಗಳ ಬೆಂಬಲ
ಹಿರಿಯೂರು ಪ್ರವಾಸಿ ಮಂದಿರದಲ್ಲಿ ಸೇರಿದ ಪ್ರತಿಭಟನಾಕಾರರು ಹಿರಿಯೂರಿನಿಂದ ವಿವಿ ಪುರದವರಿಗೂ ಬೈಕ್ ಮೂಲಕ ರಾಲಿ ನಡೆಸಿ ವಿವಿ ಪುರದಿಂದ ಡ್ಯಾಂವರೆಗೆ ಪಾದಯಾತ್ರೆ ನಡೆಸಿದರು. ಪ್ರತಿಭಟನಾಕಾರರ ಜೊತೆಗೆ ಸುಮಾರು 20 ಕಿ.ಮೀ.ವರೆಗೂ ಶಾಸಕಿ ಕೆ. ಪೂರ್ಣಿಮಾ ಸ್ಕೂಟಿ ಓಡಿಸುತ್ತಾ ಬೆಂಬಲ ಸೂಚಿಸಿದರು.
ವಿವಿ ಪುರ ಡ್ಯಾಂ ಸಮೀಪದ ಕಣಿವೆ ಮಾರಮ್ಮ ದೇವಸ್ಥಾನದ ಬಳಿ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು ಬಹಿರಂಗ ಸಭೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಭದ್ರಾ ಕಾಮಗಾರಿ ಕೆಲಸ ಪೂರ್ಣಗೊಳಿಸಿ ವಿವಿ ಸಾಗರಕ್ಕೆ ನೀರು ಹರಿಸುವಂತೆ ಒತ್ತಾಯಿಸಿದರು. ಪಂಪಿಂಗ್ ಮಾಡುವ ಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಎಸಿ, ಎಸ್ಪಿ, ನೀರಾವರಿ ಇಲಾಖೆ ಅಧಿಕಾರಿಗಳು, ವಿವಿ ಸಾಗರ ಜಲಾಶಯ ಅಧಿಕಾರಿಗಳು ಭೇಟಿ ನೀಡಿದ್ದರು.
ವಿವಿ ಸಾಗರ ಡೆಡ್ ಸ್ಟೋರೇಜ್ ನೀರು ಉಳಿಸಲು ಆಗ್ರಹಿಸಿ ಪ್ರತಿಭಟನಾ ಸಮಾವೇಶ
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ, ಕಸವನಹಳ್ಳಿ ರಮೇಶ್, ಎಚ್.ಆರ್. ತಿಮ್ಮಯ್ಯ, ಸಿ. ನಾರಾಯಣಾಚಾರಿ, ಮಾರಿಕಣಿವೆ ಉಮೇಶ್, ಸಿದ್ದರಾಮಣ್ಣ, ಆರನಕಟ್ಟೆ ಶಿವಕುಮಾರ್, ಸುರೇಶ್, ಶಂಕರ್, ವಿವಿಧ ಕನ್ನಡ ಪರ ಸಂಘಟನೆಗಳು, ಸ್ತ್ರೀ ಸಂಘಗಳು ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.