ದೇವಾಲಯಗಳಿಂದ ಮಾತ್ರ ಉಳಿದಿದೆ ನಮ್ಮ ಧರ್ಮ, ಸಂಸ್ಕೃತಿ
ಚಿತ್ರದುರ್ಗ, ಮೇ 28 : ದೇಶದಲ್ಲಿ ಧರ್ಮ ಸಂಸ್ಕೃತಿ ಹಾಗೂ ನಮ್ಮ ಸನಾತನ ಧರ್ಮ ಉಳಿದಿದ್ದರೆ ಅದು ದೇವಾಲಯಗಳಿಂದ ಮಾತ್ರ ಸಾಧ್ಯ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥರು ಅಭಿಪ್ರಾಯಪಟ್ಟರು. ಚಿತ್ರದುರ್ಗದ ತಾಲೂಕಿನ ಮುತ್ತಯ್ಯನಹಟ್ಟಿಯಲ್ಲಿ ಮಂಗಳವಾರ ನಡೆದ ರಾಜ ರಾಜೇಶ್ವರಿ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇವಾಲಯಗಳ ಮೂಲಕ ಧಾರ್ಮಿಕ ಜಾಗೃತಿ ಮತ್ತು ಭಕ್ತಿಯ ಪ್ರಸಾರ ಮಾಡುವುದರಿಂದ ಹಿಂದೂ ಧರ್ಮ ಉಳಿದಿದೆ. ದೇವಾಲಯಗಳ ಮುಖಾಂತರ ಸನಾತನ ಧರ್ಮದ ಜಾಗೃತಿ ನಡೆಯುತ್ತದೆ. ಪಂಚ ದೇವತೆಗಳು ಮತ್ತು ಮೂಲ ಮಠಾಧೀಶರು ನಮ್ಮ ಹಿಂದೂ ಧರ್ಮದ ಸಂಕೇತ. ಇದೊಂದು ಅನೇಕ ಧರ್ಮಗಳ ಸಮುಚ್ಚಯ, ನಮ್ಮ ಧರ್ಮಕ್ಕೆ ಅನೇಕ ಮುಖಗಳಿದ್ದರೂ ನಮ್ಮ ಹೃದಯ ಒಂದೇ ಎಂದರು.
ದೇಶ, ಹಿಂದೂ ಧರ್ಮ ಉಳಿದರೆ ಬ್ರಾಹ್ಮಣ ಉಳಿಯುತ್ತಾನೆ: ಪೇಜಾವರ ಶ್ರೀ
ನಮ್ಮಲ್ಲಿ ಬೇರೆ ಬೇರೆ ಸಂಪ್ರದಾಯ, ಮತ- ಭೇದಗಳು ಇದ್ದರೂ ನಮ್ಮ ಹೃದಯ ಒಂದಾದರೆ ಮಾತ್ರ ಹಿಂದೂ ಧರ್ಮ ಹಾಗೂ ರಾಷ್ಟ್ರ ಬಲಿಷ್ಠವಾಗಿ ಬೆಳೆಯಲಿಕ್ಕೆ ಸಾಧ್ಯ ಎಂದು ತಿಳಿಸಿದರು. ಶಿಲೆಯಲ್ಲಿ ಅರಳುವ ದೇವತಾ ಮೂರ್ತಿ ನಮ್ಮಲ್ಲಿ ಭಕ್ತಿಯ ಭಾವವನ್ನು ಮೂಡಿಸುತ್ತದೆ. ಹೇಗೆ ನಮ್ಮ ರಾಷ್ಟ್ರ ಧ್ವಜವು ಬಟ್ಟೆಯ ತುಂಡಾದರೂ ನಮ್ಮಲ್ಲಿ ರಾಷ್ಟ್ರ ಭಕ್ತಿಯನ್ನು ಮೂಡಿಸುತ್ತದೋ ಹಾಗೆ ಎಂದು ಅವರು ಹೇಳಿದರು.