ಕೊರೊನಾ ಕೊಟ್ಟ ಕಷ್ಟ; ತಾಯಿ ಉಳಿಸಿಕೊಳ್ಳಲು ಶಿಕ್ಷಕಿಯ ಹೋರಾಟ
ಚಿತ್ರದುರ್ಗ, ಸೆಪ್ಟೆಂಬರ್ 14: ವಾಸಿಸಲು ಸರಿಯಾದ ಸೂರಿಲ್ಲ, ಕೈಯಲ್ಲಿ ಕೆಲಸವಿಲ್ಲ, ಜೀವನ ನಿರ್ವಹಣೆಗೂ ಹೆಣಗಾಟ, ಕ್ಯಾನ್ಸರ್ ಪೀಡಿತ ತಾಯಿಯನ್ನು ಉಳಿಸಿಕೊಳ್ಳಲು ಇವರ ಇನ್ನಿಲ್ಲದ ಹೋರಾಟ... ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಚಿತ್ರದುರ್ಗದ ಮಧು ಎಂಬ ಯುವತಿಗೆ ಕೊರೊನಾ ಲಾಕ್ ಡೌನ್ ಕೊಟ್ಟ ಹೊಡೆತ ಜೀವನವನ್ನೇ ಸಂಕಷ್ಟಕ್ಕೆ ದೂಡಿದೆ.
ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾದ ಪರಿಣಾಮ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅರೆಹಳ್ಳಿಯ ನಿವಾಸಿ ಮಧು ಅವರಿಗೆ ಕೆಲಸವಿಲ್ಲದಂತಾಗಿದೆ. ಅನಾರೋಗ್ಯಪೀಡಿತ ತಾಯಿಯ ಜವಾಬ್ದಾರಿಯೂ ಇವರ ಹೆಗಲ ಮೇಲಿದ್ದು, ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಮಧು, ಅವರ ತಾಯಿ, ದೊಡ್ಡಮ್ಮ, ಈ ಮೂವರೂ ಒಂದೇ ಮನೆಯಲ್ಲಿದ್ದು, ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದರು. ಇದೀಗ ಕೊರೊನಾ ಪರಿಣಾಮ ಸುಮಾರು ಆರು ತಿಂಗಳಿನಿಂದ ದುಡಿಮೆಯಿಲ್ಲದೇ ಕೈಚೆಲ್ಲಿದ್ದಾರೆ.
ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಈಗ ಆಟೋ ಚಾಲಕ
ಅತಿಥಿ ಶಿಕ್ಷಕಿಯಾಗಿದ್ದ ಮಧು
ಮಧು ಅವರು ಬಿಎಸ್ಸಿ ಪದವಿ ಮುಗಿಸಿದ್ದು, ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಶಾಲೆಗಳು ಕೂಡ ಇನ್ನೂ ಪ್ರಾರಂಭವಾಗಿಲ್ಲ. ದುಡಿಯಲು ಬೇರೆ ಯಾವುದೇ ಕೆಲಸವಿಲ್ಲ. ಮತ್ತೊಂದು ಕಡೆ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಮನೆಯಲ್ಲಿ ದುಡಿಯುವವರು ಯಾರೂ ಇಲ್ಲ. ವಾಸಿಸಲು ಯೋಗ್ಯವಾದ ಮನೆಯೂ ಇಲ್ಲ. ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ. ಈ ಸಂಕಷ್ಟದ ನಡುವೆಯೇ ಮೂವರೂ ಜೀವನ ಸಾಗಿಸಿದ್ದಾರೆ.
ವಾಸಿಸಲು ಮನೆ ಇಲ್ಲ
ವಾಸಕ್ಕೆ ಯೋಗ್ಯವಾದ ಮನೆ ಇಲ್ಲ, ಬೆಳೆದು ತಿನ್ನಲು ಒಂದು ಗೇಣು ಭೂಮಿ ಕೂಡ ಇಲ್ಲ. ಯಾರೋ ತಾತ್ಕಾಲಿಕವಾಗಿ ಸಣ್ಣ ಸೂರು ನೀಡಿದ್ದರು. ಈಗ ಗೋಡೆ ಕುಸಿದು ಮನೆ ಬಿದ್ದಿದೆ. ಮನೆಯ ಸುತ್ತಮುತ್ತಲೂ ಟಾರ್ಪಲ್ ಹೊದಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ನಿರಾಶ್ರಿತರಾದ ನಾವು ಬೇರೆಯವರ ಜಾಗದಲ್ಲಿ ಬದುಕುತ್ತಿದ್ದೇವೆ. ನಮಗೆ ಯಾರ ಕಡೆಯಿಂದಲೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಎರಡು ತಿಂಗಳ ಹಿಂದೆ ನಮ್ಮ ತಾಯಿಯ ಹೆಸರಿಗೆ ಅರೆನಹಳ್ಳಿ ಪಂಚಾಯಿತಿಯಿಂದ ಮನೆ ಕಟ್ಟಿಸಿಕೊಳ್ಳಲು ಜಾಗ ಮಂಜೂರು ಮಾಡಿ ಕೊಟ್ಟಿದ್ದಾರೆ. ಅಮ್ಮನ ಹತ್ತಿರ ಇದ್ದ ಸ್ವಲ್ಪ ದುಡ್ಡಿನಲ್ಲಿ ಅಡಿಪಾಯ ಹಾಕಿದ್ದೆವು. ಆದರೆ ಈಗ ದುಡ್ಡಿಲ್ಲದೆ ಅರ್ಧಕ್ಕೆ ಕೈ ಬಿಡಲಾಗಿದೆ ಎಂದು ಬೇಸರಗೊಂಡರು ಮಧು
ಗುರುವಿಗೆ ಮಿಡಿದ ಮನ; ಗುಡಿಸಲಲ್ಲಿದ್ದ ಶಿಕ್ಷಕಿಗೆ ಮನೆ ಕಟ್ಟಿಕೊಟ್ಟ ವಿದ್ಯಾರ್ಥಿಗಳು
"ಕೊರೊನಾದಿಂದ ಕೆಲಸ ಹೋಯ್ತು"
ನನ್ನ ಸಂಬಳದಲ್ಲಿ ಅಮ್ಮನ ಆರೈಕೆ ನಡೆಯುತಿತ್ತು. ಆದರೆ ನನ್ನ ಕೆಲಸ ಹೋಗಿ ಆರೇಳು ತಿಂಗಳು ಕಳೆದಿವೆ. ನಮ್ಮ ಮನೆಯಲ್ಲಿ ದುಡಿಯುವವರು ಯಾರೂ ಇಲ್ಲ. ಅಮ್ಮ ಎರಡು ವರ್ಷಗಳಿಂದ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ. ಅವರು ಎದ್ದೇಳುವ ಸ್ಥಿತಿಯಲ್ಲಿ ಇಲ್ಲ. ಅವರು ಕುಳಿತಲ್ಲೇ ಎಲ್ಲವು ನಡೆಯಬೇಕಿದೆ. ನಮಗೆ ಬದುಕಲು ಬೇರೆ ಏನಾದರೂ ವ್ಯವಸ್ಥೆ ಮಾಡಿಕೊಡಿ ಎಂದು ತನ್ನ ನೋವು ತೋಡಿಕೊಂಡಿದ್ದಾರೆ ಮಧು.
Recommended Video
ನೆರವಿಗಾಗಿ ಮೊರೆಹೋದ ಕುಟುಂಬ
ಕ್ಯಾನ್ಸರ್ ನಿಂದ ಬಳಲುತ್ತಿರುವ ತಾಯಿಯ ಚಿಕಿತ್ಸೆಗೆ ಹಾಗೂ ಜೀವನ ನಿರ್ವಹಣೆಗೆ ಸಹಾಯ ಮಾಡಿ ಎಂದು ನೆರವು ಕೇಳಿದ್ದಾರೆ ಮಧು. ಸಹಾಯಕ್ಕಾಗಿ ಅಂಗಲಾಚುತ್ತಿರುವ ಈ ಕುಟುಂಬವನ್ನು ನೋಡಿ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವರೇ? ಇವರ ಸಂಕಷ್ಟಕ್ಕೆ ಸ್ಥಳೀಯ ಪ್ರತಿನಿಧಿಗಳು ಸ್ಪಂದಿಸುವರೇ? ಕಾದು ನೋಡಬೇಕಿದೆ...