ಬಿಜೆಪಿಗೆ ಬಂಡಾಯ ಬಾವುಟ ಹಾರಿಸಲು ಸಜ್ಜಾದ ಡಿ.ಟಿ. ಶ್ರೀನಿವಾಸ್
ಚಿತ್ರದುರ್ಗ, ಮಾರ್ಚ್ 19: ಜೂನ್ ತಿಂಗಳಲ್ಲಿ ನಡೆಯಲಿರುವ ಆಗ್ನೇಯ ಪದವೀಧರ ಚುನಾವಣೆ ಟಿಕೆಟ್ ಕೈತಪ್ಪಿದ್ದರಿಂದ ಸಿಎಂ ಬಿಎಸ್ ವೈ ಹಾಗೂ ಪಕ್ಷದ ವಿರುದ್ಧ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್ ಅಸಮಾಧಾನ ಹೊರಹಾಕಿದ್ದು, ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿದ್ದಾರೆ.
ಹಿರಿಯೂರಿನ ಬಿಜೆಪಿ ಕಚೇರಿಯಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸಿದ ಅವರು, ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ 5 ಜಿಲ್ಲೆಯ 31 ತಾಲೂಕುಗಳಲ್ಲಿ ಸಂಚರಿಸಿ ಬಿಜೆಪಿ ಪರವಾಗಿ ನೋಂದಣಿ ಮಾಡಿಸಿದ್ದೇನೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮತಗಳು ಇದ್ದದ್ದು ಈಗ 1ಲಕ್ಷದ 30 ಸಾವಿರ ಮತಗಳಾಗಿವೆ. ಹಿರಿಯೂರಿನಲ್ಲಿ 1688 ಮತ ಇದ್ದಿದ್ದು ಈಗ 5000 ಮತಗಳು ಆಗಿವೆ. ಅದೇ ರೀತಿ ಚಳ್ಳಕೆರೆ, ಪಾವಗಡ, ಶಿರಾ, ಜಗಳೂರು ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕಡಿಮೆ ಇದ್ದ ಮತಗಳು ಹೆಚ್ಚಿನದಾಗಿ ನೋಂದಣಿ ಮಾಡಿಸಲಾಗಿದೆ ಎಂದರು.
ಆಗ್ನೇಯ ಪದವೀಧರ ಚುನಾವಣೆ: ಪಕ್ಷೇತರನಾಗಿ ಡಿ.ಟಿ ಶ್ರೀನಿವಾಸ್?
ವಿಧಾನಸಭಾ ಚುನಾವಣೆ ಮುನ್ನ, ನೀವು ಕೆ.ಪೂರ್ಣಿಮಾನವರನ್ನು ಗೆಲ್ಲಿಸಿಕೊಂಡು ಬನ್ನಿ, ನಂತರ ನಿಮಗೆ ಒಳ್ಳೆಯ ಸ್ಥಾನ ಮಾನ ನೀಡುತ್ತೇನೆ ಎಂದು ಸಿಎಂ ಬಿಎಸ್ ವೈ ಭರವಸೆ ನೀಡಿದ್ದರು. ನುಡಿದಂತೆ ನಡೆಯದ ಕಾರಣ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಮೊದಲೇ ಸಿಎಂ ಬಳಿ ನಾನು ಮತ್ತು ಪತ್ನಿ ಪೂರ್ಣಿಮಾ ಭೇಟಿ ಮಾಡಿ ವಿಚಾರ ತಿಳಿಸಿದ್ವಿ. ಹತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಗೆಲುವಿಗೆ ನಾವು ಕಾರಣರಾಗಿದ್ದೇವೆ. ಸಾಮಾಜಿಕ ನ್ಯಾಯ ಕೊಡುವಲ್ಲಿ ಪಕ್ಷ ನಮ್ಮನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.
ಶಿಕ್ಷಕರ ಕ್ಷೇತ್ರಕ್ಕಿಂತ ಆಗ್ನೇಯ ಪದವೀಧರ ಕ್ಷೇತ್ರದ ಕಡೆಗೆ ಹೆಚ್ಚು ಗಮನ ಹರಿಸಿ ಪ್ರತಿ ಪಂಚಾಯಿತಿ, ಹೋಬಳಿವಾರು ನೋಂದಣಿ ಮಾಡಿಸಿದ್ದೇನೆ. ಸುಮಾರು 40 ಸಾವಿರಕ್ಕೂ ಹೆಚ್ಚು ನೋಂದಣಿ ವಿಚಾರವನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೆ. 72 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿದ್ದಾರೆ. ಶಿಕ್ಷಕರ ಸಮಸ್ಯೆ ಬಗ್ಗೆ ಸಿಎಂ ಜೊತೆ ಸಮಾಲೋಚನೆ ಮಾಡುತ್ತಾರೆ. ಹೀಗಾಗಿ ಈ ವರ್ಗದ ಶಿಕ್ಷಕರ ಒಲವು ನನ್ನ ಕಡೆ ಇದೆ. ಹಾಗಾಗಿ ಟಿಕೆಟ್ ಕೊಡದಿರುವುದಕ್ಕೆ ಅಸಮಾಧಾನವಾಗಿದೆ. ನನಗೆ ಟಿಕೆಟ್ ತಪ್ಪಿಸಿ ಬೇರೆಯವರಿಗೆ ಟಿಕೆಟ್ ನೀಡಲು ಅನುಸರಿಸುವ ಮಾನದಂಡ ಗೊತ್ತಿಲ್ಲ ಎಂದರು.
ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡಿಲ್ಲ. ಪಕ್ಷದಲ್ಲಿ ಸಾಮಾಜಿಕ ನ್ಯಾಯವಿಲ್ಲ ಹೀಗಾಗಿ ಅಭಿಪ್ರಾಯ ಸಂಗ್ರಹಿಸಲು ಸಭೆ ಕರೆದಿದ್ದೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ, ಈ ಚುನಾವಣೆಯಲ್ಲಿ ಮೂರು ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿದಂತೆ 14-15 ಅಭ್ಯರ್ಥಿಗಳು ಕಣಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ತಿಳಿಸಿದರು.