ಬೊಮ್ಮಾಯಿ ಸಿಎಂ ಆಗಲು ಸ್ವಾಮೀಜಿಗಳ ಪ್ರಭಾವ ಕೂಡ ಇರಬಹುದು
ಚಿತ್ರದುರ್ಗ, ಜುಲೈ 28: ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದು, ಇವರು ಸಿಎಂ ಆಗಲು ಲಿಂಗಾಯತ ಸ್ವಾಮೀಜಿಗಳ ಪ್ರಭಾವ ಕೂಡ ಇರಬಹುದು ಎಂದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಚಿತ್ರದುರ್ಗ ನಗರದ ಮುರುಘಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, "ರಾಜಕೀಯ ರಾಜರಾಣಿಗಳ ನಿದ್ದೆ ಕೆಡಿಸುತ್ತದೆ, ಇದಕ್ಕೆಲ್ಲ ಕಾರಣ ರಾಜಕೀಯ ಅಸ್ಥಿರತೆ ಆಗಿದೆ. ಇದಕ್ಕಾಗಿ ಆಡಳಿತದಲ್ಲಿ ಸ್ಥಿರತೆ ಬೇಕು ಇದು ಇಂದು ಆಗಿದೆ,'' ಎಂದು ಮುರುಘಾ ಶ್ರೀಗಳು ತಿಳಿಸಿದರು.
"ರಾಜಕೀಯ ಅಸ್ಥಿರತೆ ಕೊನೆಗೊಂಡು, ಸ್ಥಿರತೆ ಆಗಬೇಕು ಎಂದು ನಾವು ಹೇಳಿದ್ದೆವು. ಇದಕ್ಕೆ ಪೂರಕವಾಗಿ ಕೆಲಸ ಆಗಿದ್ದು, ಸಿಎಂ ಆಗಿ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿದ್ದಾರೆ. ಇದರಿಂದ ರಾಜಕೀಯ ಅಸ್ಥಿರತೆ ಕೊನೆಗೊಂಡಿದೆ,'' ಎಂದು ಮುರುಘಾ ಶರಣರು ಹೇಳಿದರು.
"ಬಸವರಾಜ ಬೊಮ್ಮಾಯಿ ಸರ್ವ ಜನರನ್ನು ಕೂಡ ಜೊತೆಗೆ ಕರೆದುಕೊಂಡು ಹೋಗುವ ಮಾತು ಹೇಳಿದ್ದಾರೆ. ಸಿಎಂ ಬೊಮ್ಮಾಯಿ ಹೋರಾಟದ ಮೂಲಕ ಅಧಿಕಾರಕ್ಕೆ ಬಂದವರು. ಸರ್ವ ಜನರ ಕೆಲಸವನ್ನು ಮಾಡುತ್ತಾರೆ. ಇಂತವರಿಗೆ ನಾವು ಶುಭಾಶಯಗಳನ್ನು ಕೋರುತ್ತೇವೆ,'' ಎಂದು ಶ್ರೀಗಳು ನೂತನ ಮುಖ್ಯಮಂತ್ರಿಗೆ ಶುಭಾಶಯ ಕೋರಿದರು.
"ಮುಂದಿನ ದಿನಗಳಲ್ಲಿ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅಸ್ಥಿರತೆಯನ್ನು ಇಲ್ಲದಂತೆ ಮಾಡುತ್ತಾರೆ. ಬೊಮ್ಮಾಯಿಯವರು ಬಿಎಸ್ವೈ ಗರಡಿಯಲ್ಲಿ ಪಳಗಿದ್ದಾರೆ.''
"ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಠದ್ದಲ್ಲ, ಇದು ಜನರು ನೀಡುವ ಸ್ಥಾನ. ಇದರ ಬಗ್ಗೆ ಯಾವುದೇ ಹಿತಾಸಕ್ತಿ ಇಲ್ಲ, ಬಿಎಸ್ವೈ ಬದಲಾವಣೆ ಬೇಡ ಎಂದು ಹೇಳಿದ್ದು, ನಾವು ಅವರಿಗೆ ಸಾಂತ್ವನ ಹೇಳಿದ್ದೇವೆ. ಈಗ ಒಮ್ಮತ ಅಭಿಪ್ರಾಯಕ್ಕೆ ಬಂದು ಬೊಮ್ಮಾಯಿಯವರನ್ನು ಆಯ್ಕೆ ಮಾಡಿದ್ದಾರೆ. ಯಡಿಯೂರಪ್ಪ ಅಭಿವೃದ್ದಿ ಪರವಾದ ಕೆಲಸ ಮಾಡಿದ್ದು, ಪ್ರಧಾನಿ ಮೋದಿ, ಯಡಿಯೂರಪ್ಪರವರ ಕೆಲಸಗಳನ್ನು ಹೊಗಳಿ, ನೂತನ ಸಿಎಂಗೆ ಶುಭಾಶಯ ಕೋರಿದ್ದಾರೆ.
"ಬಸವರಾಜ ಬೊಮ್ಮಾಯಿ ಸಿಎಂ ಆಗಲು ಸ್ವಾಮೀಜಿಗಳ ಪ್ರಭಾವವೂ ಕೂಡ ಇರಬಹುದು, ಯಾವುದೇ ಸಮಸ್ಯೆಗಳಿಲ್ಲದೆ ಸರಿಯಾದ ಆಡಳಿತ ನಡೆಸಿಕೊಂಡು ಹೋಗುತ್ತಾರೆ ಎಂಬ ಭರವಸೆ ಇದೆ. ಇನ್ನು ಚಿತ್ರದುರ್ಗ ಜಿಲ್ಲೆಗೆ ಬಹುಮುಖ್ಯವಾದ ಭದ್ರಾ ಮೇಲ್ದಂಡೆ ಯೋಜನೆ ಸ್ಪೀಡ್ ಅಪ್ ಮಾಡಲು ನಾನು ಸಿಎಂ ಜೊತೆ ಮಾತನಾಡುತ್ತೇನೆ,'' ಎಂದರು.
Recommended Video
"ಬಿ.ಎಸ್. ಯಡಿಯೂರಪ್ಪ ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ನಾವು ಸಂತ್ರಸ್ತರಿಗೆ ಆಹಾರದ ಕಿಟ್ಗಳನ್ನು ಕೊಡಲು ಹೊಗುತ್ತಿದ್ದೇವೆ. ಇನ್ನು ಬೊಮ್ಮಾಯಿ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರ ಅಡಳಿತವೂ ಕೂಡ ಸರ್ವರ ಒಳಿತಿಗಾಗಿ ಇರಲಿ,'' ಎಂದು ಶ್ರೀಗಳು ಸಲಹೆ ನೀಡಿದರು.