ಚಿತ್ರದುರ್ಗದಲ್ಲಿ ಆಹಾರ ಸಿಗದೇ ಸುಡುಗಾಡು ಸಿದ್ಧರ ಪರದಾಟ
ಚಿತ್ರದುರ್ಗ, ಮಾರ್ಚ್ 30: ಕೊರೊನಾದಿಂದಾಗಿ ಚಿತ್ರದುರ್ಗ ಜಿಲ್ಲೆ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ. ಹೀಗಾಗಿ ಸರಿಯಾಗಿ ಊಟ, ನೀರಿಲ್ಲದೇ ಇಲ್ಲಿ ನೆಲೆ ಇಲ್ಲದವರು ಪರಿತಪಿಸುತ್ತಿದ್ದಾರೆ.
ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಗೇಟ್ ಬಳಿ ಇರುವ ಹಾಗೂ ಚಿತ್ರದುರ್ಗ ತಾಲೂಕಿನ ಹಿರೆಗೊಂಟುನೂರು ಹೋಬಳಿಯ ಅಳಲೂರ್ ಗ್ರಾಮದ ಸುಡುಗಾಡು ಸಿದ್ಧರು ಆಹಾರವಿಲ್ಲದೇ ಸಂಕಷ್ಟ ಪಡುತ್ತಿದ್ದಾರೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಕೋಟೆನಾಡು ರೈತರ ಸಂಕಷ್ಟ
"ಇಷ್ಟು ದಿನ ರೇಷನ್ ಇತ್ತು, ಊಟ ಮಾಡಿದ್ವಿ. ಅಕ್ಕಿ, ಬೇಳೆ ಎಲ್ಲ ಖಾಲಿ ಆಗಿದೆ. ಗಂಜಿ ಹಿಟ್ಟು ಕೂಡ ಇಲ್ಲ. ಕುಡಿಯುವ ನೀರೂ ಇಲ್ಲ" ಎಂದು ಸುಡುಗಾಡು ಸಿದ್ಧರು ಪರದಾಡುತ್ತಿದ್ದಾರೆ.
ಗ್ರಾಮದಿಂದ ಹೊರ ಹೋಗಲು ಸಾಧ್ಯವಾಗದೆ, ಭಿಕ್ಷೆ ಬೇಡಲು ಆಗದೆ ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾರೆ. ಏನಾದರೂ ಮಾಡಿ ಸಹಕಾರ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಒಂದೊತ್ತಿನ ಊಟಕ್ಕಾಗಿ ಪಾತ್ರೆ ಹಿಡಿದು ಅಂಗಲಾಚುತ್ತಿದ್ದಾರೆ. ನಾವು ಬಡವರು, ಅನಾಥರು ಸ್ವಾಮಿ, ಮಕ್ಕಳಿಗೆ ಊಟಕ್ಕಿಲ್ಲ. ಕಣ್ಣೀರಲ್ಲಿ ಕೈ ತೊಳೆಯುವ ಸ್ಥಿತಿ ಬಂದಿದೆ ಎಂದು ಒಪ್ಪೊತ್ತಿನ ಊಟಕ್ಕೆ ಇಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.