ಮರದ ನೆರಳೇ ಈ ಮಕ್ಕಳಿಗೆ ಕ್ಲಾಸ್ ರೂಂ; ಯರ್ರೇನಹಳ್ಳಿ ಸರ್ಕಾರಿ ಶಾಲೆ ಕಥೆಯಿದು
ಚಿತ್ರದುರ್ಗ, ಜನವರಿ 4: ಶಾಲಾ ಕೊಠಡಿಗಳಿದ್ದರೂ ಮರದ ನೆರಳಲ್ಲಿಯೇ ಕುಳಿತು ಪಾಠ ಕೇಳುವ ಪರಿಸ್ಥಿತಿ ಸರ್ಕಾರಿ ಪ್ರಾಥಮಿಕ ಶಾಲೆಯ ಈ ಮಕ್ಕಳದ್ದು. ಆರೋಗ್ಯ ಸಚಿವ ಶ್ರೀರಾಮುಲು ಕ್ಷೇತ್ರವಾದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಯರ್ರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಥ ಅವ್ಯವಸ್ಥೆ ಎದ್ದು ಕಾಣುತ್ತಿದೆ.
ಶಾಲಾ ಮಕ್ಕಳಿಗೆ ತಕ್ಕಂತೆ ಬೋಧನಾ ಸಂಪನ್ಮೂಲ ಇದೆ. ಆದರೆ ಮಾನವ ಸಂಪನ್ಮೂಲದ ಕೊರತೆ ಎದ್ದು ಕಾಣುತ್ತಿದೆ. ಈ ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ ಒಟ್ಟು 274 ವಿದ್ಯಾರ್ಥಿಗಳಿದ್ದಾರೆ. 9 ಜನ ಶಿಕ್ಷಕರಿದ್ದು, ಮುಖ್ಯಶಿಕ್ಷರ ಹುದ್ದೆಯೂ ಖಾಲಿಯಾಗೇ ಇದೆ.
ಮರದ ನೆರಳಲ್ಲಿ ಪಾಠ
7ನೇ ತರಗತಿಯ ಸುಮಾರು 25 ವಿದ್ಯಾರ್ಥಿಗಳು ಪ್ರತಿನಿತ್ಯ ಮರದ ನೆರಳಲ್ಲಿ ಕುಳಿತುಕೊಂಡು ಮಳೆ, ಗಾಳಿ ಹಾಗೂ ಬಿಸಿಲನ್ನು ಲೆಕ್ಕಿಸದೇ ಪಾಠ ಕೇಳುತ್ತಾರೆ. ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವೂ ಹೇಳಿಕೊಳ್ಳುವಂತಿಲ್ಲ, ಶೌಚಾಲಯದ ವಿಷಯವಂತೂ ಹೇಳುವುದೇ ಬೇಡ. ಬಯಲಲ್ಲಿ ಶೌಚಾಲಯಕ್ಕೆ ಮಕ್ಕಳು ಹೋಗುತ್ತಾರೆ.
ವಿಡಿಯೋ: ಸರ್ಕಾರಿ ಶಾಲೆಯ ನೂತನ ಕಲಿಕಾ ಪ್ರಯೋಗ, ವರ್ಣಮಾಲೆಗೆ ಗಾದೆ ಮಾತು
ಆರು ಬೋಧನಾ ಕೊಠಡಿಗಳು
ಶಾಲೆಯಲ್ಲಿ ಅಡುಗೆ ಕೊಣೆ, ಶಿಕ್ಷಕರ ಕಚೇರಿ ಬಿಟ್ಟು 6 ಬೋಧನಾ ಕೊಠಡಿಗಳಿವೆ. 1 ರಿಂದ 7ನೇ ತರಗತಿಯಿದ್ದು, ತರಗತಿ ಕೊರತೆಯಿಂದ 7ನೇ ತರಗತಿ ಮಕ್ಕಳಿಗೆ ಶಾಲಾ ಆವರಣದಲ್ಲಿ ಮರದ ಅಡಿಯಲ್ಲಿ ಪಾಠ ಕೇಳುವಂತಾಗಿದೆ.
ಕೊಠಡಿಗಳಿಗೆ ಹೋಗಲು ಒಂದು ಕಿ.ಮೀ ಕ್ರಮಿಸಬೇಕು
6 ಮತ್ತು 7 ನೇ ತರಗತಿಗಳಿಗೆ ಬೇರೆ ಕಡೆ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಇರುವ ಶಾಲೆಗೂ ಆ ಎರಡು ಕೊಠಡಿಗಳಿಗೂ ಸುಮಾರು ಒಂದು ಕಿ.ಮಿ. ದೂರ ಇದೆ. ವಿದ್ಯಾರ್ಥಿಗಳು ಆ ಕೊಠಡಿಯಲ್ಲಿ ಕುಳಿತು ಪಾಠ ಕೇಳಿದರೆ, ಮಧ್ಯಾಹ್ನದ ಬಿಸಿಯೂಟಕ್ಕೆ ಅಲ್ಲಿಂದ ಇಲ್ಲಿಯವರಿಗೂ ಮತ್ತೆ ಬರಬೇಕಾಗುತ್ತದೆ. ಜೊತೆಗೆ ಶಿಕ್ಷಕರು ತರಗತಿಗಳನ್ನು ಬದಲಾವಣೆ ಮಾಡಿಕೊಂಡು ಪಾಠ ಮಾಡುವುದಕ್ಕೂ ತೊಂದರೆಯಾಗುತ್ತದೆ. ಶಿಕ್ಷಣ ಇಲಾಖೆ ಇದರ ಕಡೆ ಗಮನ ಹರಿಸಿಲ್ಲ.
ಶಾಲೆಗಳಲ್ಲಿ ನೀರಿನ ಬೆಲ್; ಸರ್ಕಾರದ ಅಧಿಕೃತ ಆದೇಶ
ಶಾಲೆ ಪಕ್ಕದಲ್ಲೇ ಮತ್ತೊಂದು ಸುಸಜ್ಜಿತ ವಸತಿ ಶಾಲೆ ನಿರ್ಮಾಣ
ಯರ್ರೇನಹಳ್ಳಿ ಗ್ರಾಮದ ಪಕ್ಕದಲ್ಲೇ ಸರ್ಕಾರದಿಂದ ಸುಮಾರು 15-16 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಕಿತ್ತೂರು ರಾಣಿ ಚನ್ನಮ್ಮ, ಮುರಾರ್ಜಿ ವಸತಿ ಶಾಲೆಯ ಕಟ್ಟಡ ಪ್ರಾರಂಭದ ಹೊಸ್ತಿಲಲ್ಲಿದೆ. ಆದರೆ ಪಕ್ಕದಲ್ಲೇ ಇರುವ ಯರ್ರೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯತ್ತ ಸರ್ಕಾರ ಗಮನ ಕೊಟ್ಟಿಲ್ಲ. ಈಗಲಾದರೂ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಈ ಅವ್ಯವಸ್ಥೆಯನ್ನು ಹೇಗೆ ಬಗೆಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.