ಕರು ಕೊಂದು ತಿಂದ ಬೀದಿ ನಾಯಿಗಳು; ಓಡಾಡಲು ಭಯಪಡುತ್ತಿರುವ ಜನ
ಚಿತ್ರದುರ್ಗ, ಡಿಸೆಂಬರ್ 27: ಬೀದಿ ನಾಯಿಗಳ ಹಾವಳಿಗೆ ಕೋಟೆನಾಡಿನ ಜನರು ರೋಸಿಹೋಗಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಕರುವೊಂದರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಜನ ಭಯಭೀತರಾಗಿ ತಿರುಗಾಡುವಂತೆ ಮಾಡಿದೆ.
ಜಿಲ್ಲೆಯ ಹಿರಿಯೂರು ನಗರದ ಶ್ರೀತೇರುಮಲ್ಲೇಶ್ವರ ದೇವಸ್ಥಾನದ ಮುಂಭಾಗ ಬೀದಿ ನಾಯಿಗಳನ್ನು ಕರುವಿನ ಮೇಲೆ ದಾಳಿ ನಡೆಸಿವೆ. ನೋಡ ನೋಡುತಿದ್ದಂತೆಯೇ ಕರುವಿನ ಮೇಲೆ ನಾಲ್ಕೈದು ಬೀದಿ ನಾಯಿಗಳು ದಾಳಿ ನಡೆಸಿ ಕರುವನ್ನು ಅರ್ಧಂಬರ್ಧ ತಿಂದು ಹಾಕಿವೆ.
ನಾಯಿಗಳು ಕರುವನ್ನು ರಸ್ತೆಗೆ ಎಳೆದು ತಂದು ದಾಳಿ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ಹಿರಿಯೂರು ನಾಗರಿಕರು ಬೀದಿ ನಾಯಿ ಹಾವಳಿ ತಡೆಗೆ ನಗರಸಭೆಯನ್ನು ಒತ್ತಾಯಿಸಿದ್ದಾರೆ.
ಬೆಳಗ್ಗಿನ ಜಾವ ಹಾಲು ತರಲು ಹೋಗುವವರ ಮೇಲೂ ಬೀದಿ ನಾಯಿಗಳು ಎರಗಿ ಬೀಳುತ್ತಿದ್ದು, ಕರುವನ್ನು ತಿಂದು ಬಿಟ್ಟಿರುವ ದೃಶ್ಯ ಕಂಡು ಜನರು ಇನ್ನಷ್ಟು ಆತಂಕಗೊಂಡಿದ್ದಾರೆ.
"ಬೀದಿ ನಾಯಿಗಳ ಹಾವಳಿ ಬಗ್ಗೆ ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು" ಎಂದು ಹಿರಿಯೂರಿನ ಸಾರ್ವಜನಿಕರು ನಗರಸಭೆ ಅಧಿಕಾರಿಗಳನ್ನ ಒತ್ತಾಯಿಸಿದ್ದಾರೆ.