"ಗೊಲ್ಲರಹಟ್ಟಿಗೆ ಸಂಸದರ ಪ್ರವೇಶ ತಡೆದ ಘಟನೆ ವೈಭವೀಕರಿಸಿದ್ದೇಕೆ?"
ಚಿತ್ರದುರ್ಗ, ಸೆಪ್ಟೆಂಬರ್ 29: ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಪ್ರವೇಶ ಕಲ್ಪಿಸಲಿಲ್ಲ ಎಂಬ ಪ್ರಕರಣವನ್ನು ವಿನಾಕಾರಣ ವೈಭವೀಕರಿಸಲಾಗಿದೆ. ಇದರಲ್ಲಿ ರಾಜಕೀಯ ಕೋಮುವಾದಿಗಳ ಷಡ್ಯಂತ್ರ ಅಡಗಿದೆ ಎಂದು ರಾಜ್ಯ ಕಾಡುಗೊಲ್ಲರ ಸಂಘದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ಕಾಡುಗೊಲ್ಲರ ಅಸ್ಪೃಶ್ಯತಾ ಆಚರಣೆ: ಗೊಲ್ಲರಹಟ್ಟಿಯಲ್ಲಿ ಸಿಕ್ಕ ಇನ್ನೊಂದು ಆಯಾಮ!
"ಹಿಂದಿನಿಂದಲೂ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇಂತಹ ಯಾವುದೇ ಘಟನೆಗಳು ಜರುಗಿರಲಿಲ್ಲ. ಈ ಜಿಲ್ಲೆಯನ್ನಾಳಿದ ಕೆ.ಎಚ್.ರಂಗನಾಥ್, ಡಿ.ಮಂಜುನಾಥ್, ಆಂಜನೇಯ, ಮಾಜಿ ಸಂಸದ ಚಂದ್ರಪ್ಪ ಇವರ ಅಧಿಕಾರದ ಕಾಲದಲ್ಲಿ ಹೀಗೆಲ್ಲ ಆಗಿರಲಿಲ್ಲ. ಆದರೆ ಈಗ ಏಕಾಏಕಿ ಈ ಘಟನೆ ನಡೆಯಲು ಹೇಗೆ ಸಾಧ್ಯ? ಚುನಾವಣಾ ಸಂದರ್ಭದಲ್ಲಿ ಸಂಸದರಿಗೆ ಈ ಅನುಭವ ಯಾಕೆ ಆಗಲಿಲ್ಲ" ಎಂದು ಪ್ರಶ್ನಿಸಿದರು ಸಂಘದ ಸಿ.ಶಿವು ಯಾದವ್.
"ಈ ದೇಶದಲ್ಲಿ ಜಾತಿ ವ್ಯವಸ್ಥೆ ಇದೆ ಎಂದಿರುವ ಸಂಸದರು ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರದಿಂದ ಯಾಕೆ ಸ್ಪರ್ಧೆ ಮಾಡಿದರು? ಈ ಪೆಮ್ಮನಹಳ್ಳಿ ಘಟನೆ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ" ಎಂದು ಅನುಮಾನ ವ್ಯಕ್ತಪಡಿಸಿದರು. "ಕಾಡುಗೊಲ್ಲರು ಅವರ ನಂಬಿಕೆಯನ್ನು ಅನುಸರಿಸಿದರೆ ತಪ್ಪೇ? ಈ ಘಟನೆಯನ್ನು ಅನವಶ್ಯಕವಾಗಿ ವೈಭವೀಕರಿಸಲಾಗಿದೆ" ಎಂದು ಆರೋಪಿಸಿದರು.