ಚಿತ್ರದುರ್ಗದ ಗೊರವನಿಗೆ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ
ಚಿತ್ರದುರ್ಗ, ಫೆಬ್ರವರಿ 26 : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ತಿಪ್ಪಣ್ಣ (ಗೊರವ) ಇವರಿಗೆ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ದೊರೆತಿದೆ. ತಿಪ್ಪಣ್ಣ ಮೈಲಾರಲಿಂಗೇಶ್ವರ ದೇವರ ಭಕ್ತನಾಗಿರುವ ಇವರಿಗೆ ಗೊರವರ ಕುಣಿತ ಪೂಜೆ ಒಂದು ಕಾಯಕವಾಗಿದೆ.
ಕಡು ಬಡತನವಿದ್ದರೂ ಸಹ, ಭಕ್ತಿಯ ಕಾಯಕ ಚಾಚು ತಪ್ಪದೇ ಮಾಡುವ ಸಂಪ್ರದಾಯ ಇವರದ್ದಾಗಿದೆ. ಮೈಲಾರ ದೇವರ ಪೂಜೆಯನ್ನು ಮಾಡುವ ಮೂಲಕ ಅರಕೆ ಒಪ್ಪಿಸುತ್ತಾರೆ ಎನ್ನುವ ನಂಬಿಕೆಯೂ ಸಹ ಇದೆ. ಅನೇಕ ಮೆರವಣಿಗೆ ಕಾರ್ಯಕ್ರಮಗಳಲ್ಲಿ ಕಲಾವಿದರ ವೇಷ ಧರಿಸಿ ಭಾಗವಹಿಸುತ್ತಾರೆ.
ಭಕ್ತರು ನೀಡುವ ಕಾಣಿಕೆ ಪಡೆದುಕೋಲ್ಳುವ ಇವರು ಇದುವರೆಗೂ ಯಾವ ಇಲಾಖೆಗೆ ಅರ್ಜಿ ಸಲ್ಲಿಸದಿರುವುದು ವಿಶೇಷವಾಗಿದೆ. ಕಲಾವಿದನಾಗಿ ಭಾಗವಹಿಸಲು ಅವಕಾಶ ಕೊಡಿ ಎಂದು ಯಾರ ಹತ್ತಿರನೂ ಸಹ ಅಂಗಲಾಚಿಲ್ಲ.
ಇಂತಹ ಎಲೆ ಮರೆಯ ಕಾಯಿಯಂತಿರುವ ಈ ಕಲಾವಿದನಿಗೆ ಸರ್ಕಾರ ಪ್ರಶಸ್ತಿ ನೀಡದಿರುವುದು ತಿಪ್ಪಣ್ಣ ಅವರು ಮಾಧ್ಯಮಗಳಿಗೆ ತಿಳಿಸಿರುವ ವಿಷಯ. ಇವರು ಮೈಸೂರು ದಸರಾ ಸೇರಿದಂತೆ ವಿವಿಧ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನ್ನ ಕಲೆಯನ್ನು ತೋರಿಸಿಕೊಟ್ಟಿದ್ದಾರೆ.
ಕರ್ನಾಟಕವಲ್ಲದೇ ಹೊರ ರಾಜ್ಯಗಳಲ್ಲಿಯೂ ಕಲಾವಿದರಾಗಿ ಭಾಗವಹಿಸಿ ತಿಪ್ಪಣ್ಣ ತನ್ನ ಗೊರವರ ಕುಣಿತ ಕಲೆಯನ್ನು ತೋರಿಸಿ ಬಂದಿದ್ದಾರೆ.