ಚಿತ್ರದುರ್ಗದಲ್ಲಿ ಸರಳವಾಗಿ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆ
ಚಿತ್ರದುರ್ಗ, ಸೆಪ್ಟೆಂಬರ್ 13: ಕೋಟೆನಾಡು ಚಿತ್ರದುರ್ಗ ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮ ಅತ್ಯಂತ ಸರಳವಾಗಿ, ಯಶಸ್ವಿಯಾಗಿ ನಡೆದಿದೆ.
ಪ್ರತಿ ವರ್ಷ ಬೆಳಿಗ್ಗೆ 11 ಕ್ಕೆ ಆರಂಭವಾಗಬೇಕಿದ್ದ ಶೋಭಾಯಾತ್ರೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಶೋಭಾಯಾತ್ರೆ ಪ್ರಾರಂಭವಾಯಿತು. ಈ ಶೋಭಾಯಾತ್ರೆಗೆ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಾಳೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ; ರಸ್ತೆ ಮಾರ್ಗಸೂಚಿ ಬದಲಾವಣೆ
ನಗರದ ಓಬವ್ವ ಮೈದಾನ ರಸ್ತೆಯ ಎಂ.ಎಂ ಪ್ರೌಢಶಾಲೆ ಆವರಣದ ವೇದಿಕೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ವೇದಿಕೆಯಿಂದ ಆರಂಭವಾದ ಶೋಭಾಯಾತ್ರೆ ನಗರದ ಮುಖ್ಯ ರಸ್ತೆಯಾದ ಬಿಡಿ ರಸ್ತೆ, ಆಸ್ಪತ್ರೆ ಮುಂಭಾಗ, ಮದಕರಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಎಸ್.ಜೆ.ಎಂ ಸರ್ಕಲ್, ಗಾಂಧಿ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತದ ಮೂಲಕ ಕನಕ ಸರ್ಕಲ್ ನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು.
ಪ್ರತಿ ವರ್ಷ ಡಿಜೆ ಸೌಂಡ್, ಕರಡಿ ವಾದ್ಯ, ವೀರಗಾಸೆ, ಕೋಲಾಟ, ನೃತ್ಯ ಹೊಲಗ, ತಮಟೆ ವಾದ್ಯ ಮತ್ತಿತರ ವಾದ್ಯಗಳು ತುಂಬಿ ತುಳುಕುತ್ತಿದ್ದವು. ಆದರೆ ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ನಾದಸ್ವರ ಅಳವಡಿಸಲಾಗಿತ್ತು.
ವಿವಿಧ ವಾದ್ಯ ವೃಂದ ಮತ್ತು ಡಿಜೆ ಸೌಂಡ್ ಗೆ ಕುಣಿದು ಕುಪ್ಪಳಿಸಿ ಬೇಕಾಗಿದ್ದ ಹುಡುಗ, ಹುಡುಗರಿಗೆ ಭಾರಿ ನಿರಾಸೆ ಉಂಟಾಗಿತ್ತು. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕಿದ್ದ ಕಾರ್ಯಕ್ರಮದ ಅತಿ ಕಡಿಮೆ ಜನಸಂಖ್ಯೆ ಭಾಗವಹಿಸಿದ್ದರು. ಜೊತೆಗೆ ಈ ವರ್ಷ ಅತ್ಯಂತ ಸರಳವಾಗಿ ಶೋಭಾಯಾತ್ರೆ ನಡೆಸುವುದಾಗಿ ಆಯೋಜಕರು ತಿಳಿಸಿದ್ದರು.
ಈ ಸಲ ಪ್ರಮುಖ ರಸ್ತೆಯ ವಿವಿಧ ಸರ್ಕಲ್ ಗಳಲ್ಲಿ ಇರುವ ಪ್ರತಿಮೆಗಳಿಗೆ ಮಾತ್ರ ಕೇಸರಿ ಬಾವುಟ ಮತ್ತು ಹೂವುಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ಸುಮಾರು 8 ಗಂಟೆಯ ನಂತರ ಚಂದ್ರವಳ್ಳಿ ಕೆರೆಯಲ್ಲಿ ಗಣೇಶನ ವಿಸರ್ಜನೆ ಮಾಡಲಾಯಿತು. ಶೋಭಾಯಾತ್ರೆಗೆ ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನಗರದ ಎಲ್ಲಡೆ ಬ್ಯಾರಿಕೇಡ್ ನಿರ್ಮಿಸಿ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಒಟ್ಟಾರೆ ಕೋಟೆನಾಡು ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ನಡೆಯಬೇಕಿದ್ದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ, ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಶೋಭಾಯಾತ್ರೆ ಜರುಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಶಾಸಕರುಗಳು, ಜನಪ್ರತಿನಿಧಿಗಳು, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಸೇರಿದಂತೆ ಭಕ್ತಾಧಿಗಳು ಭಾಗವಹಿಸಿದ್ದರು.