ಸಿದ್ದರಾಮಯ್ಯ ವಕೀಲರಾಗಿದ್ದವರು, ಮೊದಲು ಸಿಎಎ ಚೆನ್ನಾಗಿ ಓದಿಕೊಳ್ಳಲಿ: ಶ್ರೀರಾಮುಲು
ಚಿತ್ರದುರ್ಗ, ಜನವರಿ 13: ವಿಪಕ್ಷ ಕಾಂಗ್ರೆಸ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರಿಯಾಗಿ ಅಧ್ಯಯನ ನಡೆಸದೇ ಈ ದೇಶದ ಜನರಿಗೆ ತಪ್ಪು ಕಲ್ಪನೆ ಮೂಡಿಸುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಠಿಸುತ್ತಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು ಅವರು, ಸ್ವತಃ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ವಕೀಲರಾಗಿದ್ದಾರೆ. ಅವರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಚೆನ್ನಾಗಿ ಓದಿಕೊಳ್ಳಲಿ ಎಂದು ತಿಳಿಸಿದರು.
ಮೊಳಕಾಲ್ಮೂರಿನ ಶಾಲೆಗೆ ಭೇಟಿಯಿತ್ತು ಭರವಸೆ ನೀಡಿದ ಶ್ರೀರಾಮುಲು
ಕಾಂಗ್ರೆಸ್ ಯಾವಾಗಲೂ ಒಡೆದು ಆಳುವ ಸಂಸ್ಕೃತಿ ಬೆಳೆಸಿಕೊಂಡಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿ ಶೋಷಿತರಾಗಿರುವ ಭಾರತೀಯರಿಗೆ ರಕ್ಷಣೆ ನೀಡಬೇಕಿದೆ. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.
ಅಲ್ಲಿನ ನಿರಾಶ್ರಿತರು ಭಾರತಕ್ಕೆ ಬಂದು ನಲೆಸಲು ಅವರಿಗೆ ಪೌರತ್ವ ಕೊಡುವ ಕಾಯ್ದೆ ಇದಾಗಿದೆ. ಭಾರತದ ಯಾವುದೇ ನಾಗರೀಕರಿಗೆ ಇದರಿಂದ ತೊಂದರೆ ಇಲ್ಲ, ಕಾಂಗ್ರೆಸ್ ನವರು ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಚಿತ್ರದುರ್ಗದಲ್ಲಿ ಎಸಿಬಿ ದಾಳಿ ಇಬ್ಬರು ಅರೆಸ್ಟ್
ಇದೇ ಸಂದರ್ಭದಲ್ಲಿ ಬಳ್ಳಾರಿಗೆ ಜಮೀರ್ ಅಹಮದ್ ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ಶ್ರೀರಾಮುಲು ಅವರು, ಜಮೀರ್ ಅಹಮದ್ ಅವರು ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ್ರೆ ಅವರ ಮನೆ ವಾಚ್ ಮನ್ ಆಗಿ ಕೆಲಸ ಮಾಡುತ್ತೇನೆ ಎಂದಿದ್ದರು. ಅದರಂತೆ ಅವರು ನಡೆದುಕೊಂಡರಾ? ಎಂದು ಪ್ರಶ್ನಿಸಿದರು.
ಬಳ್ಳಾರಿಯಲ್ಲಿ ಎರಡು ಕೋಮಿನವರು ಶಾಂತಿ, ಸಹಬಾಳ್ವೆ, ಸಹೋದರತ್ವದಿಂದ ಬಾಳುತ್ತಿದ್ದಾರೆ. ಅದಕ್ಕೆ ಬೆಂಕಿ ಹಚ್ಚಲು ಕಾಂಗ್ರೆಸ್ ನವರು ಬಂದಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಮತ್ತು ಜಮೀರ್ ಅಹಮದ್ ಖಾನ್ ಹಾಗೂ ಇತರೆ ಕಾಂಗ್ರೆಸ್ ನವರು ಬಳ್ಳಾರಿಗೆ ಬಂದು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಅವರು ವಾತಾವರಣಕ್ಕೆ ತಕ್ಕಂತೆ ಮಾತನಾಡಿದ್ದಾರೆ. ಇದರಲ್ಲಿ ಅವರ ಸ್ವಾರ್ಥ ಏನೂ ಇಲ್ಲ. ಇದನ್ನೇ ದೊಡ್ಡದು ಮಾಡಿ ಅವರ ಮನೆ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಇದನ್ನು ಯಾರು ಒಪ್ಪುವುದಿಲ್ಲ ಎಂದು ರೆಡ್ಡಿ ಅವರು ಮಾತನಾಡಿದ್ದನ್ನು ಸಮರ್ಥಿಸಿಕೊಂಡರು.