ಸಿದ್ದರಾಮಯ್ಯಗೆ ಸಂಸ್ಕಾರವೇ ಗೊತ್ತಿಲ್ಲ: ಶ್ರೀರಾಮುಲು ಟೀಕೆ
ಚಿತ್ರದುರ್ಗ, ಮೇ 25: ಕೋಟೆಯೆಲ್ಲಾ ಒಡೆದು ಹೋಗಿ, ಕೋಟೆಯ ರಾಜರನ್ನು ಜನ ತಿರಸ್ಕಾರ ಮಾಡಿದ್ದಾರೆ ಎಂದು ಮೈತ್ರಿ ನಾಯಕರ ವಿರುದ್ಧ ಶ್ರೀರಾಮುಲು ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಮಾಜಿ ಪ್ರಧಾನ ಮಂತ್ರಿಗಳನ್ನು ಜನ ತಿರಸ್ಕಾರ ಮಾಡಿದ್ದಾರೆ. ಜನರೇ ಹೋಗಿ ಅವರ ಕೋಟೆ ಕೆಡವಿದ್ದಾರೆ, ಮತ್ತೆ ಆ ಕೋಟೆ ಕಟ್ಟಲು ಇವರು ಹೊರಟಿದ್ದಾರೆ. ಮೈತ್ರಿ ಕೋಟೆಯಲ್ಲಿದ್ದ ಎಲ್ಲರೂ ಸೋತಿದ್ದಾರೆ, ಸೋತು ಸುಣ್ಣವಾಗಿದ್ದಾರೆ. ನೈತಿಕತೆ ಇದ್ದರೆ ಅವರು ರಾಜೀನಾಮೆ ನೀಡಬೇಕು ಎಂದರು.
ಲೋಕಸಭಾ ಚುನಾವಣೆ : ಕೋಟೆ ನಾಡಿನಲ್ಲಿ ನೆಲ ಕಚ್ಚಿದ ಕಾಂಗ್ರೆಸ್
ಸಿದ್ದರಾಮಯ್ಯ ಒಂದು ತರದ ಮನುಷ್ಯ. ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅಂತಾರೆ. ಸರ್ಕಸ್ ಕಂಪನಿ ಹೀರೊ ರೀತಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ರು. ಕಂಡವರನ್ನೆಲ್ಲ ಏಕವಚನದಲ್ಲಿ ಮಾತನಾಡುತ್ತಾರೆ, ಸಂಸ್ಕಾರವೇ ಗೊತ್ತಿಲ್ಲ. ನನ್ನದೇ ನಡೆಯಬೇಕು ಅನ್ನುವ ವ್ಯಕ್ತಿ ಎಂದು ಟೀಕಿಸಿದರು.
ಸಿದ್ದರಾಮಯ್ಯ ಭಸ್ಮಾಸುರ ಇದ್ದಂತೆ, ಭಸ್ಮಾಸುರ ಯಾರ ತಲೆ ಮೇಲೆ ಕೈ ಇಟ್ಟರು ಅವರು ಭಸ್ಮ ಆದರು. ಹಾಗೇ ಸಿದ್ದರಾಮಯ್ಯ ಕೊನೆಗೆ ತನ್ನ ತಲೆಯ ಮೇಲೆ ತಾನೇ ಕೈ ಇಟ್ಟುಕೊಂಡು ಭಸ್ಮ ಆಗುವ ಸಂದರ್ಭ ಬರುತ್ತದೆ.. ದೇವೆಗೌಡರನ್ನ, ಕುಮಾರಸ್ವಾಮಿ ಪುತ್ರನನ್ನ ಸೋಲಿಸಿದ್ದು, ಬಿಜೆಪಿ ಅವರಲ್ಲ, ಸಿದ್ದರಾಮಯ್ಯ. ಹಾವಿನ ದ್ವೇಷ 12 ವರ್ಷ ಅನ್ನುವಂತೆ, ಕಾದು ಕಾದು ಕಬ್ಬಿಣ ಕೆಂಪಾದಂತೆ ಸಿದ್ದರಾಮಯ್ಯ ಕೆಂಪಾಗಿದ್ದರು. ಸಿದ್ದರಾಮಯ್ಯ ಬರೇ ಇಡಬೇಕಿತ್ತು, ಸರಿಯಾಗಿ ಬರೇ ಇಟ್ಟಿದ್ದಾರೆ ಎಂದರು.
ಇದು ದೇಶ ಭಕ್ತರ ಚುನಾವಣೆ ಎಂದ ನಾರಾಯಣಸ್ವಾಮಿ
ರಾಹುಲ್ ಗಾಂಧಿ ಕುಸಿದು ಬಿದ್ದು ಹೋಗಿದ್ದಾರೆ, ಮತ್ತೆ ದೆಹಲಿಗೆ ಹೋಗಿದ್ದಾರೆ. ಅಲ್ಲಿ ಏನು ಮಾಡುತ್ತಾರೆ ಎಂದು ರಾಮುಲು ಪ್ರಶ್ನೆ ಮಾಡಿದರು. ಮೈತ್ರಿ ಮುಖಂಡರಿಗೆ ರೋಷ ಇದ್ದರೆ, ಕತ್ತಲೆ ಕೋಣೆಯಲ್ಲಿ ರಾಜೀನಾಮೆ ನೀಡುತ್ತಿದ್ದರು. ನಮ್ಮ ಸಂಪರ್ಕ ಯಾವ ಶಾಸಕರ ಜೊತೆಯೂ ಇಲ್ಲ. ಯಡಿಯೂರಪ್ಪ ಅವರಿಗೆ ಎಲ್ಲಾ ಜವಾಬ್ದಾರಿ ನೀಡಿದ್ದು, ಅವರೇ ಎಲ್ಲಾ ನೋಡ್ಕೊಳ್ತಾರೆ ಎಂದರು.