ಚಿತ್ರದುರ್ಗದ ಕೋಟೆ, ಸ್ಮಾರಕಗಳನ್ನು ರಕ್ಷಿಸಲು ಮುರುಘಾ ಶ್ರೀಗಳ ಕರೆ
ಚಿತ್ರದುರ್ಗ, ಜೂನ್ 19: ಕೋಟೆ ನಾಡು ಚಿತ್ರದುರ್ಗದ ಇತಿಹಾಸ ಉಳಿಸಿ-ಸ್ಮಾರಕಗಳನ್ನು ರಕ್ಷಿಸಿ. ಅಂದಿನ ಕೋಟೆಯನ್ನು ಇಂದು ಕಟ್ಟಲು ಸಾಧ್ಯವಿಲ್ಲ, ಕಟ್ಟಿರುವ ಕೋಟೆಯನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ರಕ್ಷಿಸಿಕೊಂಡು ಹೋಗೋಣ ಎಂದು ಚಿತ್ರದುರ್ಗದ ಮುರುಘಾ ಶ್ರೀಗಳು ಹೇಳಿದರು.
ಇಂದು ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ, ಚಿತ್ರದುರ್ಗದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 'ನಮ್ಮ ನಡಿಗೆ ಕೋಟೆ ಸಂರಕ್ಷಣೆ ಕಡೆಗೆ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಲೆನಾಡಾಗಿದ್ದ ಹಿರಿಯೂರು ಇಂದಾಗಿದೆ ಬರದ ನಾಡು
ಕೋಟೆ ಮುಂಬಾಗಿಲಿನಿಂದ ಜಾಥಾ ಹೊರಟಿತು. ಮುರುಘಾ ಶರಣರು ಬಿಚ್ಚುಗತ್ತಿ ಭರಮಣ್ಣ ನಾಯಕರ ಸಮಾಧಿಗೆ ಹಾರಹಾಕಿ, ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಚಿತ್ರದುರ್ಗದ ಈ ಕೋಟೆ ಅತ್ಯಂತ ಪ್ರಸಿದ್ಧವಾದುದು. ಇದನ್ನು ಹೊರತುಪಡಿಸಿ ಮತ್ತೆಲ್ಲಿಯೂ ಈ 7 ಸುತ್ತಿನ ಕೋಟೆಯ ಬಗೆಯನ್ನು ಕಾಣಲು ಸಾಧ್ಯವಿಲ್ಲ. ಇದು ಅಪರೂಪದ ಸುಂದರ ಐತಿಹಾಸಿಕ ತಾಣ. ಈ ಕೋಟೆ ಆವರಣದಲ್ಲಿ ಪ್ರಾಚೀನವಾದ ಸ್ಮಾರಕಗಳು, ದೇವಾಲಯಗಳು, ಜಗತ್ತಿನ ಗಮನ ಸೆಳೆಯುವ ಬುರುಜುಗಳು, ಬತೇರಿಗಳು, ಇಗರ್ಜಿಗಳು ಇವೆ. ಇದೊಂದು ಪ್ರವಾಸಿ ತಾಣ. ಕೂಡಲೇ ಶಿಥಿಲಗೊಂಡಿರುವ ಗೋಡೆಗಳನ್ನು, ಸ್ಮಾರಕಗಳನ್ನು ರಕ್ಷಿಸಲು ಸೂಕ್ತ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕು. ಇದನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸಲು ಹಕ್ಕೊತ್ತಾಯ ಮಾಡುತ್ತೇವೆ ಎಂದರು.
ಮೊದಲು ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ವಿದ್ಯುತ್ ವ್ಯವಸ್ಥೆ ಮಾಡಬೇಕು. ರಸ್ತೆ ಅಗಲೀಕರಣ, ಗೋಡೆಗಳ ಕುಸಿತ ತಡೆಯುವಿಕೆ ಮತ್ತು ಕುಸಿದ ಗೋಡೆಗಳ ದುರಸ್ತೀಕರಣ ಆಗಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರೆಡೆ ಗಮನ ಹರಿಸಬೇಕು. ಈ ಹಿನ್ನೆಲೆಯಲ್ಲಿ ನಾವು 'ನಮ್ಮ ನಡಿಗೆ- ಕೋಟೆ ಸಂರಕ್ಷಣೆ ಕಡೆಗೆ' ಎಂಬ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ: ಮುರುಘಾ ಶ್ರೀ
ಸ್ವದೇಶಿ ದರ್ಶನ ಯೋಜನೆಯಲ್ಲಿ ಆಗಿರುವ ಬೆಳವಣಿಗೆಯ ಮಾಹಿತಿ ಪಡೆದು ಮುಂದಿನ ಪ್ರಗತಿಯ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಶರಣರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಹಲವು ಮುಖಂಡರು ಭಾಗವಹಿಸಿದ್ದರು.