ಚಿತ್ರದುರ್ಗ: ಭಾರಿ ಮಳೆಗೆ ಸರ್ಕಾರಿ ಶಾಲೆ ಜಲಾವೃತ, ಗ್ರಾಮಸ್ಥರ ಆಕ್ರೋಶ
ಚಿತ್ರದುರ್ಗ, ಮೇ19: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಪಿಳ್ಳೇಕೇರನಹಳ್ಳಿ ಸರ್ಕಾರಿ ಶಾಲೆ ಆವರಣ ಸಂಪೂರ್ಣ ಜಲಾವೃತ್ತಗೊಂಡಿದೆ. ಚಿತ್ರದುರ್ಗ ತಾಲೂಕಿನ ಪಿಳ್ಳೇಕೇರನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣಕ್ಕೆ ಪಕ್ಕದಲ್ಲೇ ಇರುವ ಮಲ್ಲಾಪುರ ಕೆರೆಯು ನೀರು ಹರಿದು ಬಂದಿದ್ದರಿಂದ ಜಲಾವೃತ್ತಗೊಂಡಿದೆ. ಮಳೆಗಾಳಿಯ ಅರ್ಭಟಕ್ಕೆ ಶಾಲಾವರಣದಲ್ಲಿದ್ದ 2 ಮರಗಳು ಸಹ ನೆಲಕ್ಕುರುಳಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಶಾಲೆ ಜಲಾವೃತ್ತಗೊಳ್ಳುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಗಮನಕ್ಕೆ ತಂದರೂ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ನಿರ್ಲಕ್ಷ ಧೋರಣೆ ತೋರುತ್ತಿವೆ ಎಂದು ಸ್ಥಳೀಯರು ಕಿರಿಕಾಡಿದ್ದಾರೆ.
ಜಿಲ್ಲೆಯಲ್ಲಿ ಮಳೆರಾಯನ ಆಗಮನಕ್ಕೆ ಜನಜೀವನ ಅಸ್ತವ್ಯಸ್ತ
ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ತಡರಾತ್ರಿ ವರುಣನ ಆರ್ಭಟಕ್ಕೆ ಅಲ್ಲಲ್ಲಿ ಸಣ್ಣ ಪುಟ್ಟ ಕೆರೆ ಕಟ್ಟೆಗಳು, ಕೃಷಿ ಹೊಂಡ, ಚೆಕ್ ಡ್ಯಾಂ ಗಳು ತುಂಬಿ ಹರಿಯುತ್ತಿವೆ.
ಸಿಡಿಲಿನ ಹೊಡೆತಕ್ಕೆ 154 ಜಾನುವಾರುಗಳು ಸಾವು
ಮೊಳಕಾಲ್ಮೂರು ತಾಲೂಕಿನ ಜಮೀನು ಒಂದರಲ್ಲಿ ಕಳೆದ ಸೋಮವಾರ ಸಂಜೆ ಸುಮಾರಿಗೆ ಸಿಡಿಲು ಬಡಿದು 154 ಜಾನುವಾರುಗಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.ತಾಲ್ಲೂಕಿನ ಅಡವಿಮಲ್ಲಾಪುರ ಗ್ರಾಮದ ಬೈಯಣ್ಣ, ಪಾಪಯ್ಯ ಸೇರಿದಂತೆ ನಾಲ್ವರಿಗೆ ಜಾನುವಾರುಗಳು ಸೇರಿವೆ. ಇನ್ನು ಸಿಡಿಲಿನ ಹೊಡೆತಕ್ಕೆ 114 ಮೇಕೆಗಳು, 39 ಕುರಿಗಳು ಹಾಗೂ 1 ಎತ್ತು ಮೃತಪಟ್ಟಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.ಇದೇ ತಾಲ್ಲೂಕಿನ ತಳವಾರಹಳ್ಳಿ ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ಕುರಿ ಶೆಡ್ ಶೀಟುಗಳು ಅಲ್ಲೋಲ ಕಲ್ಲೋಲವಾಗಿದ್ದು, ಶೆಡ್ನಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಜಖಂ ಆಗಿವೆ.
ಲಕ್ಷಾಂತರ ನಷ್ಟ
ಸಂಜೆ ಬೀಸಿದ ಬಿರುಗಾಳಿಗೆ ಕುರಿ ಮೇಕೆ ಸಾವುಗಳಿಂದ ಕುರಿಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ದಿಕ್ಕು ತೊಚದಂತೆ ಕುರಿಗಾಹಿಗಳ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವನಕ್ಕೆ ಆಧಾರವಾಗಿ ನಂಬಿಕೊಂಡಿದ್ದ ಕುರಿ ಮೇಕೆಗಳು, ಇದೀಗ ಸಿಡಿಲಿಗೆ ಅಸುನೀಗಿವೆ. ಇದರಿಂದ ಬಡ ಕುರಿಗಾಹಿಗಳ ಜೀವನ ದುಸ್ಥಿತಿಗೆ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಚಿತ್ರದುರ್ಗ ನಗರದಾದ್ಯಂತ ಸಂಜೆ ಹೊತ್ತಿಗೆ ಸಿಡಿಲು ಸಹಿತ ಮಳೆ ಸುರಿಯಲಾರಂಭಿಸಿ ಅಪಾರ ನಷ್ಟ ಉಂಟಾಗಿದೆ.
Recommended Video