ಖಾಸಗಿ ಬಸ್ ಡಿಕ್ಕಿ; ಶಾಲಾ ವಿದ್ಯಾರ್ಥಿನಿ ಸಾವು
ಚಿತ್ರದುರ್ಗ, ಜೂನ್ 21: ಖಾಸಗಿ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಶಾಲೆಗೆ ತೆರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಜೆಎಮ್ ಐಟಿ ವೃತ್ತದ ಬಳಿ ನಡೆದಿದೆ. ಅಮೃತ (14) ಅಪಘಾತದಲ್ಲಿ ಮೃತಪಟ್ಟ ಬಾಲಕಿ.
ಘಟನೆಯಲ್ಲಿ ಬಾಲಕಿಯ ಸಹೋದರಿ ಹಾಗೂ ಬೈಕ್ ಓಡಿಸುತ್ತಿದ್ದ ಸಂಬಂಧಿ ಕೃಷ್ಣಾರೆಡ್ಡಿ ಎಂಬುವರು ಗಾಯಗೊಂಡಿದ್ದಾರೆ. ನಗರದ ಚಿಕ್ಕಪೇಟೆ ಬಡಾವಣೆಯ ನಿವಾಸಿಗಳಾದ ಸಹೋದರಿಯರನ್ನು ಶಾಲೆಗೆ ಬಿಡಲು ಕೃಷ್ಣಾರೆಡ್ಡಿ ಅವರು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ನಗರದ ಜೆಎಮ್ ಐಟಿ ವೃತ್ತದ ಬಳಿ ಆಗಮಿಸಿದ ವೇಳೆ ಕೃಷ್ಣಾರೆಡ್ಡಿ ಬೈಕನ್ನು ಯೂಟರ್ನ್ ಮಾಡಲು ಯತ್ನಿಸಿದ್ದಾರೆ.
ಬಾಲಕನ ಮೇಲೆ ಸ್ಕೂಲ್ ಬಸ್ ಹತ್ತಿಸಿದ್ದ ಚಾಲಕನ ಬಂಧನ
ಅವರ ಎದುರಿಗೆ ಕ್ಯಾಂಟರ್ ವಾಹನವೊಂದು ಬಂದಿದ್ದು, ಪರಿಣಾಮ ನಿಧಾನವಾಗಿ ಚಾಲನೆ ಮಾಡಿದ್ದಾರೆ. ಆದರೆ ಕ್ಯಾಂಟರ್ ಹಿಂದಿನಿಂದ ಬಂದ ಖಾಸಗಿ ಬಸ್ ವೇಗವಾಗಿ ಬಂದಿದ್ದರಿಂದ ಬೈಕಿಗೆ ಡಿಕ್ಕಿಯಾಗಿತ್ತು. ಈ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಅಪಘಾತ ನಡೆದ ಕೂಡಲೇ ಸ್ಥಳೀಯರು ನೆರವಿಗೆ ಆಗಮಿಸಿದ್ದು, ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದಾರೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಬಾಲಕಿಯ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಕುರಿತು ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.