ಚಿತ್ರದುರ್ಗ: ಹೂ, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ ಹಣ ಜಮೆ
ಚಿತ್ರದುರ್ಗ, ಜುಲೈ 28: ಲಾಕ್ಡೌನ್ ಕಾರಣಕ್ಕೆ ಮಾರುಕಟ್ಟೆ ಇಲ್ಲದೆಯೇ ತೀವ್ರ ತೊಂದರೆಗೆ ಒಳಗಾದ ಚಿತ್ರದುರ್ಗ ಜಿಲ್ಲೆಯ 6435 ರೈತರಿಗೆ ಕೋವಿಡ್ ಪರಿಹಾರ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ 3,43,61,119 ರೂ. ಜಮೆ ಮಾಡಲಾಗಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ದೂರದ ನಗರಗಳಿಗೆ ಸಾಗಾಟ ಹಾಗೂ ಸೂಕ್ತ ಮಾರುಕಟ್ಟೆ ಸಮಸ್ಯೆಯಿಂದಾಗಿ ನಷ್ಟ ಅನುಭವಿಸಿದ್ದ ಚಿತ್ರದುರ್ಗ ಜಿಲ್ಲೆಯ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಾರರನ್ನು ಗುರುತಿಸಿ ಸಾವಿರಾರು ರೈತರಿಗೆ ಪರಿಹಾರ ನೀಡಲಾಗಿದೆ.
ಮಧ್ಯ ಕರ್ನಾಟಕದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಬೆಳೆಯಲಾಗುತ್ತದೆ. ಸಣ್ಣ, ಅತಿ ಸಣ್ಣ ರೈತರು ಅಧಿಕ ಸಂಖ್ಯೆಯಲ್ಲಿದ್ದು, ಜಿಲ್ಲೆಯಲ್ಲಿ ಚೆಂಡು, ಕನಕಾಂಬರ, ದುಂಡು ಮಲ್ಲಿಗೆ, ಸುಗಂಧರಾಜ, ಗುಲಾಬಿ, ಬಣ್ಣದ ಸೇವಂತಿಗೆ ಸೇರಿದಂತೆ ಮತ್ತಿತರ ಹೂವುಗಳನ್ನು ಬೆಳೆಯುತ್ತಾರೆ.
ಲಾಕ್ಡೌನ್ನಿಂದಾಗಿ ಪುಷ್ಪ ಬೆಳೆಗಾರರಿಗೆ ಸಮಸ್ಯೆಯಾಗಿತ್ತು. ಲಾಕ್ಡೌನ್ ಸಂದರ್ಭದಲ್ಲಿ ಪುಷ್ಪ ಬೆಳೆಗಾರರ ಸಮಸ್ಯೆ ಅರಿತ ರಾಜ್ಯ ಸರ್ಕಾರ ಪರಿಹಾರ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಇರುವ ಹೂವು ಬೆಳೆಗಾರರ ಪೈಕಿ ನಷ್ಟ ಅನುಭವಿಸಿದ 2925 ಕೃಷಿಕರ ಖಾತೆಗೆ ಒಟ್ಟು 11421751 ರೂ. ನೇರವಾಗಿ ಜಮೆ ಆಗಿದೆ.
ಮೊಳಕಾಲ್ಮೂರು ತಾಲ್ಲೂಕಿನ 241 ಫಲಾನುಭವಿಗಳಿಗೆ 8,59,927 ರೂ. ಪರಿಹಾರ ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ. ಚಳ್ಳಕೆರೆ ತಾಲ್ಲೂಕಿನ 789 ಫಲಾನುಭವಿಗಳಿಗೆ 32,65,264 ರೂ., ಚಿತ್ರದುರ್ಗ ತಾಲ್ಲೂಕಿನ 346 ಫಲಾನುಭವಿಗಳಿಗೆ 11,43,644 ರೂ., ಹೊಳಲ್ಕೆರೆ ತಾಲ್ಲೂಕಿನ 149 ಫಲಾನುಭವಿಗಳಿಗೆ 59,17,001 ರೂ., ಹೊಸದುರ್ಗ ತಾಲ್ಲೂಕಿನ 286 ಫಲಾನುಭವಿಗಳಿಗೆ 11,78,511 ರೂ. ಹಾಗೂ ಹಿರಿಯೂರು ತಾಲ್ಲೂಕಿನ 1114 ಫಲಾನುಭವಿಗಳಿಗೆ 4382704 ರೂ. ಸೇರಿದಂತೆ ಜಿಲ್ಲೆಯ ಆರು ತಾಲ್ಲೂಕುಗಳಿಂದ ಜಿಲ್ಲೆಯ 2925 ಫಲಾನುಭವಿಗಳಿಗೆ ಒಟ್ಟು 1,14,21,751 ರೂ. ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.
ಹಣ್ಣು ಮತ್ತು ತರಕಾರಿ ಬೆಳೆಗಾರರು:
ಚಿತ್ರದುರ್ಗ ಜಿಲ್ಲೆಯಲ್ಲಿ ಕಲ್ಲಂಗಡಿ, ಪಪ್ಪಾಯ, ಕರಬೂಜ, ಅಂಜೂರ ಹಾಗೂ ಬೆಳೆಯನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗಿತ್ತು. ತರಕಾರಿ ಬೆಳೆಗಳಾದ ಟೊಮೆಟೊ, ಈರುಳ್ಳಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯಲಾಗಿತ್ತು. ಲಾಕ್ಡೌನ್ ಘೋಷಣೆಯಾಗಿದ್ದರಿಂದ ಮಾರುಕಟ್ಟೆಗೆ ಸಮಸ್ಯೆಯಾಗಿತ್ತು. ಇದರಿಂದ ಹಣ್ಣು ಮತ್ತು ತರಕಾರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು.
ಜಿಲ್ಲೆಯ 595 ಹಣ್ಣು ಬೆಳೆಗಾರರಿಗೆ 45,59,281 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ 47 ಫಲಾನುಭವಿಗಳಿಗೆ 3,76,450 ರೂ., ಚಳ್ಳಕೆರೆ ತಾಲ್ಲೂಕಿನ 261 ಫಲಾನುಭವಿಗಳಿಗೆ 21,67,153 ರೂ., ಚಿತ್ರದುರ್ಗ ತಾಲ್ಲೂಕಿನ 35 ಫಲಾನುಭವಿಗಳಿಗೆ 2,46,300 ರೂ., ಹೊಳಲ್ಕೆರೆ ತಾಲ್ಲೂಕಿನ 25 ಫಲಾನುಭವಿಗಳಿಗೆ 1,49,000 ರೂ., ಹೊಸದುರ್ಗ ತಾಲ್ಲೂಕಿನ 58 ಫಲಾನುಭವಿಗಳಿಗೆ 3,33,450 ರೂ. ಹಾಗೂ ಹಿರಿಯೂರು ತಾಲ್ಲೂಕಿನ 169 ಫಲಾನುಭವಿಗಳಿಗೆ 12,86,928 ರೂ. ಮೊತ್ತ ಸೇರಿದಂತೆ ಜಿಲ್ಲೆಯ ಒಟ್ಟು 595 ಫಲಾನುಭವಿಗಳಿಗೆ 45,59,281 ರೂ. ಮೊತ್ತ ನೇರವಾಗಿ ನೇರವಾಗಿ ರೈತರ ಖಾತೆಗೆ ಜಮೆ ಆಗಿದೆ.
6435 ಫಲಾನುಭವಿಗಳಿಗೆ ಪರಿಹಾರ
Recommended Video
ಚಿತ್ರದುರ್ಗ ಜಿಲ್ಲೆಯ 2915 ತರಕಾರಿ ಬೆಳೆಗಾರರಿಗೆ ಒಟ್ಟು 1,83,80,087 ರೂ. ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲೆಯ 2975 ಹೂ ಬೆಳೆಗಾರರಿಗೆ 1,14,21,751 ರೂ., 595 ಹಣ್ಣು ಬೆಳೆಗಾರರಿಗೆ 45,59,281 ರೂ. ಹಾಗೂ 2915 ತರಕಾರಿ ಬೆಳೆಗಾರರಿಗೆ 1,83,80,087 ರೂ. ಸೇರಿದಂತೆ ಹೂ, ಹಣ್ಣು ಮತ್ತು ತರಕಾರಿ ಬೆಳೆದ ಒಟ್ಟು 6435 ಫಲಾನುಭವಿಗಳಿಗೆ ಒಟ್ಟು 3,43,61,119 ರೂ. ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.