ಹಿರಿಯೂರಿನ ಗ್ರಾಮದಲ್ಲಿ 20 ಲಕ್ಷದ ರಸ್ತೆ ಆಯಸ್ಸು 20 ದಿನ ಅಷ್ಟೆ
ಚಿತ್ರದುರ್ಗ, ಮಾರ್ಚ್ 03: ಹೆಸರಿಗೆ ಮಾತ್ರ ಸರ್ಕಾರಿ ಕೆಲಸ ದೇವರ ಕೆಲಸ. ಆದರೆ, ಸರ್ಕಾರ ನೀಡುವ ಅನುದಾನದ ಹಣ ಭಕ್ತರ ಪಾಲಿಗೆ ವರವಾದ ಉದಾಹರಣೆಗಳೇ ಸಿಗೋದಿಲ್ಲ. ಇಲ್ಲಿ ಏನಿದ್ರೂ ಪೂಜಾರಿಗಳದ್ದೇ ಆಟ. ಇದು ಹಿರಿಯೂರಿನ ಅಧಿಕಾರಿಗಳಿಗೂ ಅನ್ವಯಿಸುತ್ತದೆ.
ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲಿ ಎಂದು ಸರ್ಕಾರ ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡುತ್ತದೆ. ಒಬ್ಬರ ಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆದರೆ ಸೂಕ್ತ ಎಂದು ಅದನ್ನು ಕಾಂಟ್ರಾಕ್ಟರ್ ಗಳಿಗೆ, ಇಂಜಿನಿಯರ್ ಗಳಿಗೆ, ಅಧಿಕಾರಿಗಳಿಗೆ ವಹಿಸಲಾಗುತ್ತದೆ. ಆದರೆ, ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ. ಇಂಥದ್ದೊಂದು ಘಟನೆಗೆ ಹಿರಿಯೂರು ಸಾಕ್ಷಿಯಾಗಿದೆ.
ಸಂಸದ ಪ್ರತಾಪ್ ಸಿಂಹಗೆ ಕೊಡಗಿನ ಪುಟ್ಟ ಬಾಲಕಿ ಬರೆದ ಭಾವನಾತ್ಮಕ ಪತ್ರ ವೈರಲ್
ಕಳಪೆ ಕಾಮಗಾರಿಯೇ ಹೆಚ್ಚು
ಗ್ರಾಮದ ಜನರಿಗೆ ಓಡಾಡಲು ಅನುಕೂಲವಾಗಲಿ, ಊರಿಗೊಂದು ಸೂಕ್ತ ರಸ್ತೆಯಿರಲಿ ಎಂಬ ಕಾರಣಕ್ಕೆ ರಸ್ತೆಗಳ ನಿರ್ಮಾಣಕ್ಕೆಂದು ಸರ್ಕಾರ ಲಕ್ಷಾನುಗಟ್ಟಲೆ ಅನುದಾನ ನೀಡುತ್ತದೆ. ಆದರೆ ಆ ಹಣವನ್ನು ದುರ್ಬಳಕೆ ಮಾಡಿಕೊಂಡು ಕಳಪೆ ಕಾಮಗಾರಿ ಮಾಡಿ ಕೈತೊಳೆದುಕೊಳ್ಳುವವರೇ ಹೆಚ್ಚು. ಚಿತ್ರದುರ್ಗದ ಹಿರಿಯೂರಿನಲ್ಲಿ ಗ್ರಾಮವೊಂದರಲ್ಲಿಯೂ ಹೀಗೇ ಆಗಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿರ್ಮಾಣ ಮಾಡಿರುವ ಸಿ.ಸಿ. ರಸ್ತೆ 20 ದಿನಕ್ಕಷ್ಟೇ ಸೀಮಿತವಾದ ಆರೋಪ ಕೇಳಿ ಬಂದಿದೆ.
ಜೂಲಯ್ಯನ ಗ್ರಾಮದಲ್ಲಿ 20 ದಿನಕ್ಕೇ ಹಾಳಾದ ರಸ್ತೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜೂಲಯ್ಯನಹಟ್ಟಿ ಗ್ರಾಮದಲ್ಲಿ ನಿರ್ಮಿಸಿರುವ ಸಿ.ಸಿ. ರಸ್ತೆ ನಿರ್ಮಾಣ ಮಾಡಿದ 20 ದಿನದೊಳಗೇ ಹಾಳಾಗಿ ಹೋಗಿದೆ. ರಸ್ತೆಗೆ ಹಾಕಿರುವ ಕಾಂಕ್ರೀಟ್, ಜಲ್ಲಿ ಕಲ್ಲುಗಳು ಕಿತ್ತು ಬಂದಿವೆ. 20 ಲಕ್ಷ ಹಣದಲ್ಲಿ ನಿರ್ಮಿಸಲಾಗಿದ್ದ ಈ ರಸ್ತೆ ಇಪ್ಪತ್ತೇ ದಿನದಲ್ಲಿ ಕಿತ್ತು ಬಂದಿರುವುದು ಕಾಮಗಾರಿಯ ಗುಣಮಟ್ಟವನ್ನು ಹೇಳುತ್ತಿದೆ.
ಗೊಲ್ಲರ ಹಟ್ಟಿ ಅಭಿವೃದ್ಧಿಗೆ ಸಿ.ಸಿ.ರಸ್ತೆ, ಬಾಕ್ಸ್ ಚರಂಡಿ
ಹಿಂದುಳಿದಿರುವ ಗೊಲ್ಲರಹಟ್ಟಿಗಳ ಅಭಿವೃದ್ಧಿಪಡಿಸಲು ಹಟ್ಟಿಗಳಲ್ಲಿ ಸಿ.ಸಿ. ರಸ್ತೆ, ಬಾಕ್ಸ್ ಚರಂಡಿ ಮಾಡಲಾಗುತ್ತದೆ. ಇದಕ್ಕೆ ಅನುಗುಣವಾಗಿ ಸರ್ಕಾರದಿಂದ ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಹಣ ಕೊಡಲಾಗುವುದು. ಆದರೆ ಕಳಪೆ ಗುಣಮಟ್ಟದ ಮೂಲಕ ಕಾಮಗಾರಿ ಮಾಡಿ ಇಪ್ಪತ್ತು ದಿನಗಳಲ್ಲೇ ಕಿತ್ತು ಹೋಗಿರುವುದರಿಂದ ಗ್ರಾಮಸ್ಥರು ಕಾಮಗಾರಿ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.
ಸತ್ಯಾಂಶ ಪರಿಶೀಲಿಸುವಂತೆ ಗ್ರಾಮಸ್ಥರ ಕೋರಿಕೆ
ಜೂಲಯನಹಟ್ಟಿ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಸಿ.ಸಿ.ರಸ್ತೆ ಕಳಪೆ ಕಾಮಗಾರಿಯಿಂದ ಕೂಡಿದೆ. ಇದರ ಬಗ್ಗೆ ತನಿಖೆ ನಡೆಸಿ ಬಿಲ್ ತಡೆಹಿಡಿಯುವಂತೆ ಸಂಬಂಧ ಪಟ್ಟ ಮೇಲಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ. ಗ್ರಾಮದಲ್ಲಿ ಪತ್ರದಲ್ಲಿ ಉಲ್ಲೇಖಿಸಿರುವಂತೆ ಕ್ರ.ಸ. 42 ಮತ್ತು 43ರಲ್ಲಿ ಕಾಮಗಾರಿ ಕೆಲಸ ನಡೆದಿಲ್ಲದಿದ್ದರೂ ಬಿಲ್ ನಮೂದಿಸಲಾಗಿದ್ದು, ಇದರ ಸತ್ಯಾಂಶವನ್ನು ಪರಿಶೀಲಿಸುವಂತೆ ಗ್ರಾಮಸ್ಥರು ಕೋರಿದ್ದಾರೆ. ಈ ಸಂಬಂಧ ಪಿಡಿಒ ಸಂಪರ್ಕಿಸಿದರೆ, ಕಾಂಕ್ರೀಟ್ ರಸ್ತೆಯಲ್ಲಿ ದೊಡ್ಡ ಗಾಡಿ ಹೋಗಿದ್ದರಿಂದ ರಸ್ತೆ ಹೀಗಾಗಿದೆ ಅದನ್ನು ಸರಿಪಡಿಸಲಾಗುವುದು ಎಂದು ಉತ್ತರಿಸುತ್ತಿದ್ದಾರೆ.