ಒನ್ ಇಂಡಿಯಾ ವರದಿಗೆ ಸ್ಪಂದಿಸಿದ ಶಿಕ್ಷಣ ಸಚಿವರು, ಶಾಲೆಗೆ ಅಧಿಕಾರಿಗಳ ಭೇಟಿ
ಚಿತ್ರದುರ್ಗ, ಜನವರಿ 06: ಜನವರಿ 4ರಂದು ಮೊಳಕಾಲ್ಮೂರು ತಾಲೂಕಿನ ಯರ್ರೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮೂಲಸೌಲಭ್ಯ ಕೊರತೆ ಕುರಿತ ವರದಿ ಪ್ರಕಟಗೊಂಡಿದ್ದು, ಈ ವರದಿ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಗ್ ಇಂಪ್ಯಾಕ್ಟ್ ಆಗಿದೆ. ಈ ಕುರಿತು ವಿಚಾರಿಸಲು ಇಂದು ಶಾಲೆಗೆ ಬಿಇಓ ಸೋಮಶೇಖರ್ ಭೇಟಿ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಯರ್ರೇನಹಳ್ಳಿ ಶಾಲೆಯಲ್ಲಿ ಕೊಠಡಿಗಳು ಇಲ್ಲದಿರುವುದರ ಬಗ್ಗೆ ಒನ್ ಇಂಡಿಯಾದಲ್ಲಿ ಕಳೆದ ಶನಿವಾರ ವಿಸ್ತೃತವಾಗಿ ವರದಿಯಾಗಿತ್ತು. ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಒನ್ ಇಂಡಿಯಾ ವರದಿ ಫಲಶ್ರುತಿ ನೀಡಿದೆ
ಮರದ ನೆರಳೇ ಈ ಮಕ್ಕಳಿಗೆ ಕ್ಲಾಸ್ ರೂಂ; ಯರ್ರೇನಹಳ್ಳಿ ಸರ್ಕಾರಿ ಶಾಲೆ ಕಥೆಯಿದು
ಶಾಲೆಯಲ್ಲಿ 274 ವಿದ್ಯಾರ್ಥಿಗಳು, 9 ಜನ ಶಿಕ್ಷಕರಿದ್ದು ,6 ಬೋಧನಾ ಕೊಠಡಿಗಳಿದ್ದವು. 7ನೇ ತರಗತಿ ಮಕ್ಕಳಿಗೆ ಬೋಧನಾ ಕೊಠಡಿ ಇಲ್ಲದೆ ಮರದ ನೆರಳಿನಲ್ಲೇ ಪಾಠ ಕೇಳಬೇಕಾದ ಪರಿಸ್ಥಿತಿಯಿತ್ತು. ಹಾಗೆಯೇ ಶಾಲೆಯಲ್ಲಿ ಶೌಚಾಲಯದ ಕೊರತೆಯ ಬಗ್ಗೆಯೂ ವರದಿ ಬೆಳಕು ಚೆಲ್ಲಿತ್ತು.
ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ, ಪರಿಶೀಲನೆ
ಈ ವರದಿ ಮಾನ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ ಹೋಗಿತ್ತು. ನಂತರ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ಕೂಡಲೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಶಿಕ್ಷಣ ಸಚಿವರ ಗಮನಕ್ಕೆ ಸುದ್ದಿ ಹೋಗಿರುವ ವಿಚಾರ ತಿಳಿದು ಇಂದು ಮೊಳಕಾಲ್ಮೂರು ಬಿಇಓ ಸೋಮಶೇಖರ್ ಅವರು ಯರ್ರೇನಹಳ್ಳಿ ಶಾಲೆಗೆ ಭೇಟಿ ನೀಡಿದ್ದಾರೆ.
ಬಿಇಓ ಶಾಲೆಗೆ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದ್ದು ನಂತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ತಕ್ಷಣ ಜೆಸಿಬಿ ತರಿಸಿ ಶಾಲೆಯ ಸುತ್ತಮುತ್ತ ಸ್ವಚ್ಛತೆ ಕಾರ್ಯ ಕೈಗೊಂಡಿದ್ದಾರೆ.
ಶಾಲಾ ಮಕ್ಕಳಿಗೆ ಕೊಠಡಿ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳು
ಸುದ್ದಿಗಾರರ ಜೊತೆ ಮಾತನಾಡಿದ ಮೊಳಕಾಲ್ಮೂರು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, "ಯರ್ರೇನಹಳ್ಳಿ ಶಾಲೆಯ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದರು.
"ಒನ್ ಇಂಡಿಯಾ" ವರದಿಯನ್ನು ನೋಡಿದೆ. ಶಾಲೆಯಲ್ಲಿ ಸಮಸ್ಯೆ ಇದ್ದಿದ್ದರಿಂದ ಡಿಡಿಪಿಐ ಸೂಚನೆಯ ಮೇರೆಗೆ ಪಂಚಾಯಿತಿ ಪಿಡಿಓ, ಪಂಚಾಯಿತಿ ಕಾರ್ಯದರ್ಶಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇವೆ. ವರದಿಯು ಸಮಸ್ಯೆಯನ್ನು ಗಮನಕ್ಕೆ ತಂದಿದೆ" ಎಂದರು.
ವಿಡಿಯೋ: ಸರ್ಕಾರಿ ಶಾಲೆಯ ನೂತನ ಕಲಿಕಾ ಪ್ರಯೋಗ, ವರ್ಣಮಾಲೆಗೆ ಗಾದೆ ಮಾತು
ಶೌಚಾಲಯ ನಿರ್ಮಿಸಲು ಪಂಚಾಯತ್
ಮೊದಲು ಶಾಲೆಯ ಕೊಠಡಿಯನ್ನು ಪರಿಶೀಲನೆ ಮಾಡಿದರು. ನಂತರ ಶಾಲೆಯ ಪಕ್ಕದಲ್ಲಿ ಒಂದು ಸಮುದಾಯ ಭವನವಿದ್ದು, ಅದನ್ನು ಗ್ರಾಮಸ್ಥರೊಂದಿಗೆ ಮಾತನಾಡಿ ಮಕ್ಕಳಿಗೆ ಬೋಧನಾ ಕೊಠಡಿಯನ್ನು ಮಾಡಲು ಸೂಚಿಸಿದ್ದೇವೆ. ಪಕ್ಕದಲ್ಲೇ ಚರಂಡಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ತಕ್ಷಣ ಜೆಸಿಬಿ ಯಂತ್ರ ಕರೆಸಿ ಸ್ವಚ್ಛತೆ ಮಾಡಿಸಲಾಯಿತು ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಶೌಚಾಲಯ ನಿರ್ಮಾಣ ಮಾಡುವಂತೆ ಸೂಚಿಸಲಾಯಿತು ಹಾಗೂ ಯರ್ರೇಹಳ್ಳಿ ಪಕ್ಕದಲ್ಲೇ ನಿರ್ಮಾಣವಾಗಿರುವ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಾಲ್ಕು ಬೋಧಕೇತರ ಕೊಠಡಿಗಳಿದ್ದು ನಾಳೆ ಆ ಶಾಲೆ ಉದ್ಘಾಟನೆಗೊಳ್ಳಲಿದೆ ಎಂದು ಬಿಇಓ ಮಾಹಿತಿ ಕೊಟ್ಟರು.
ಬೇರೆ ಶಾಲೆಯಲ್ಲಿ ತಾತ್ಕಾಲಿಕವಾಗಿ ತರಗತಿ ಪ್ರಾರಂಭ
ನಿರ್ಮಾಣಗೊಳ್ಳುತ್ತಿರುವ ಕಿತ್ತೂರು ರಾಣಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರ ಜೊತೆ ಮಾತನಾಡಿದ್ದು, ತಾತ್ಕಾಲಿಕವಾಗಿ ನಮಗೆ ನಾಲ್ಕು ಕೊಠಡಿಗಳನ್ನು ಕೊಡಿ ಎಂದು ಮನವಿ ಮಾಡಿದ್ದೇವೆ, ಅದಕ್ಕೆ ಅವರು ಸ್ಪಂದಿಸಿದ್ದಾರೆ ಎಂದು ಹೇಳಿದರು.
ಯರ್ರೇನಹಳ್ಳಿ ಶಾಲೆಯ ಒಂದು ಕಿಲೋಮೀಟರ್ ದೂರದಲ್ಲಿ ಎರಡು ಕೊಠಡಿಗಳಿದ್ದು ಅಲ್ಲಿ ನೀರಿನ ಕೊರತೆ ಇದೆ. ಪಂಚಾಯಿತಿಯವರಿಗೆ ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಅಲ್ಲಿ 2 ತರಗತಿಗಳಿಗೆ ಪಾಠ ಮಾಡಲು ತಿಳಿಸಿದ್ದಾರೆ. ಹೊಸ ಕೊಠಡಿ ದೂರವಿರುವುದರಿಂದ ಬಿಸಿಯೂಟವನ್ನು ಕ್ಯಾರಿಯರ್ ನಲ್ಲಿ ತೆಗೆದುಕೊಂಡು ಹೋಗಿ ಮಕ್ಕಳಿಗೆ ಕೊಡಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಒನ್ ಇಂಡಿಯಾ ವರದಿಗೆ ಧನ್ಯವಾದ ತಿಳಿಸಿದ ಸಚಿವರು, ಅಧಿಕಾರಿಗಳು
ಇನ್ನು ಯರ್ರೇನಹಳ್ಳಿ ಶಾಲೆಯಲ್ಲಿ ಸಾಕಷ್ಟು ಸಮಸ್ಯೆಗಳಿರುವುದರಿಂದ ಒಂದೇ ಕಡೆ ಕಟ್ಟಡಗಳನ್ನು ನಿರ್ಮಿಸಿ ಕೊಡಲು ಶಿಕ್ಷಣ ಇಲಾಖೆಗೆ ವರದಿ ನೀಡಲಾಗುವುದು ಎಂದು ಬಿಇಓ ಸೋಮಶೇಖರ್ ತಿಳಿಸಿದರು.
ಜೊತೆಗೆ ಶಾಲೆಯ ಸಮಸ್ಯೆ ಬಗ್ಗೆ ವರದಿ ಮೂಲಕ ಬೆಳಕು ಚೆಲ್ಲಿದ ಒನ್ ಇಂಡಿಯಾಗೂ ಅಭಿನಂದನೆ ತಿಳಿಸಿದರು. ವರದಿಗೆ ಸ್ಪಂದಿಸಿದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರೂ ಧನ್ಯವಾದ ಹೇಳಿದ್ದಾರೆ.
ಬಿಇಓ ಸೋಮಶೇಖರ್, ಗ್ರಾಮ ಪಂಚಾಯ್ತಿ ಪಿಡಿಓ, ಕಾರ್ಯದರ್ಶಿ, ಸಚಿವ ಶ್ರೀರಾಮುಲು ಆಪ್ತ ಸಹಾಯಕ ಪಾಲಣ್ಣ ಸೇರಿದಂತೆ ಗ್ರಾಮಸ್ಥರು ಶಾಲೆಗೆ ಭೇಟಿ ನೀಡಿದ್ದರು.