ಈ ರಾಜ್ಯದಲ್ಲಿ ಮತ್ತೋರ್ವ ಯಡಿಯೂರಪ್ಪ ಹುಟ್ಟಲ್ಲ; ರೇಣುಕಾಚಾರ್ಯ
Recommended Video
ಚಿತ್ರದುರ್ಗ, ಆಗಸ್ಟ್ 24: "ನಾನು ಹೊನ್ನಾಳಿ ಹುಲಿ, ಯಾವುದಕ್ಕೂ ಜಗ್ಗಲ್ಲ. ಸಚಿವ ಸ್ಥಾನಕ್ಕೆ ಭಿಕ್ಷೆ ಬೇಡೋದಿಲ್ಲ. ಆ ಸ್ಥಾನ ಬೇಕಂದ್ರೆ ನಾನೇ ಬಿಎಸ್ ವೈ ಬಳಿ ಪಟ್ಟು ಹಿಡಿದು ಕೂರುತ್ತೇನೆ" ಎಂದಿದ್ದಾರೆ ಶಾಸಕ ರೇಣುಕಾಚಾರ್ಯ.
ಸಿರಿಗೆರೆ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, "ನನಗೆ ಸಚಿವ ಸ್ಥಾನ ಬೇಕಿದ್ದರೆ ಯಡಿಯೂರಪ್ಪ ಹಾಗೂ ವರಿಷ್ಟರ ಬಳಿ ನಾಲ್ಕು ಗೋಡೆಗಳ ಮಧ್ಯೆ ಕೇಳ್ತೇನೆ. ನಾನು ಹೊನ್ನಾಳಿ ಹುಲಿ, ಯಾವುದಕ್ಕೂ ಜಗ್ಗಲ್ಲ. ಬಿಜೆಪಿಗೆ ದ್ರೋಹ ಮಾಡಲ್ಲ. ನನಗೆ ಸದ್ಯ ಮಂತ್ರಿ ಸ್ಥಾನದ ಅಗತ್ಯವೂ ಇಲ್ಲ" ಎಂದು ಹೇಳಿದರು.
ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಮತ್ತೆ ಅಸಮಾಧಾನ
"ಸೋತವರು, ಯಡಿಯೂರಪ್ಪ ಸಂಕಷ್ಟದಲ್ಲಿದ್ದಾಗ ಸಾಥ್ ನೀಡಲಿಲ್ಲ. ಈಗ ಕೆಲವರು ಸಚಿವರಾಗಿ ನಮಗೆ ನೀತಿ ಪಾಠ ಹೇಳುತ್ತಿದ್ದಾರೆ, ಅದರ ಅಗತ್ಯ ನನಗಿಲ್ಲ. ಎಲ್ಲರೂ ತಿರಸ್ಕರಿಸಿದ ಅಬಕಾರಿ ಖಾತೆ ಪಡೆದು ರಾಜ್ಯ ಸುತ್ತಿದವನು ನಾನು. ಅಬಕಾರಿ ಇಲಾಖೆಗೆ ಹೆಚ್ಚಿನ ಆದಾಯ ತಂದುಕೊಟ್ಟಿದ್ದೆ" ಎಂದರು.
ಇದೇ ಸಂದರ್ಭದಲ್ಲಿ, ಹೈಕಮಾಂಡ್ ಬಳಿ ಯಡಿಯೂರಪ್ಪ ಅಸಹಾಯಕರಾಗಿದ್ದಾರೆಂಬ ಮಾಜಿ ಸಚಿವ ಎಚ್.ಆಂಜನೇಯ ಅವರ ಹೇಳಿಕೆಗೂ ರೇಣುಕಾಚಾರ್ಯ ತಿರುಗೇಟು ನೀಡಿದರು.
"ಮಾಜಿ ಸಚಿವ ಆಂಜನೇಯ, ಸಿದ್ದರಾಮಯ್ಯ ಬಾಲವಾಗಿದ್ದವರು. ಅವರಿಗೇನು ಗೊತ್ತಿದೆ ಯಡಿಯೂರಪ್ಪನವರು. ಭ್ರಷ್ಟಾಚಾರಿ ಆಂಜನೇಯನಿಗೆ ಬಿಎಸ್ ವೈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈ ರಾಜ್ಯದಲ್ಲಿ ಮತ್ತೋರ್ವ ಯಡಿಯೂರಪ್ಪ ಹುಟ್ಟಲ್ಲ. ನಮಗೆ ಇಂಥವರಿಂದ ಪಾಠ ಕಲಿಯಲು ಏನೂ ಇಲ್ಲ" ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.