ಚಿತ್ರದುರ್ಗ: 26 ವರ್ಷಗಳಿಂದ ಮನೆಯಲ್ಲಿಯೇ ರಾಜ್ಯೋತ್ಸವ ಆಚರಣೆ ಮಾಡುವ ರಾಜೇಶ್ ಕುಟುಂಬ
ಚಿತ್ರದುರ್ಗ, ನವೆಂಬರ್ 1: ಕರ್ನಾಟಕ ರಾಜ್ಯೋತ್ಸವ ಬಂತೆಂದರೆ ಎಲ್ಲೆಲ್ಲೂ ಸಡಗರ, ಸಂಭ್ರಮ ಮನೆ ಮಾಡುತ್ತದೆ. ಕನ್ನಡ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಕನ್ನಡಾಭಿಮಾನಿಗಳಿಗೆ ನಾಡಹಬ್ಬವೇ ಸರಿ, ಸಂಘ-ಸಂಸ್ಥೆಗಳು ರಾಜ್ಯದಾದ್ಯಂತ ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಕೋಟೆನಾಡು ಚಿತ್ರದುರ್ಗದಲ್ಲೊಬ್ಬ ಅಪ್ಪಟ ಕನ್ನಡಾಭಿಮಾನಿಯಾಗಿರುವ ವಿ.ರಾಜೇಶ್ "ಕನ್ನಡ ಕುಟೀರ ಬಳಗ ಎಂಬ ವೇದಿಕೆ'ಯನ್ನು ಮನೆ ಮಂದಿ ಜೊತೆಗೆ ಸಿದ್ಧಪಡಿಸಿ, ಅದರ ಮೂಲಕ ಕನ್ನಡ ರಾಜ್ಯೋತ್ಸವವನ್ನು ಮನೆಯಲ್ಲಿಯೇ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಆಚರಣೆ ಇಲ್ಲಿಯವರೆಗೂ ನಿಂತಿಲ್ಲ ಎಂದು ರಾಜೇಶ್ ಹೇಳುತ್ತಾರೆ. ಕನ್ನಡಾಭಿಮಾನಿ ರಾಜೇಶ್ ಇದಕ್ಕಾಗಿ ಆರ್ಎಂವಿ ಎರಡನೇ ಹಂತದಲ್ಲಿರುವ ತಮ್ಮ ಮನೆಯಲ್ಲಿ ಕನ್ನಡ ರಾಜ್ಯೋತ್ಸವಕ್ಕಾಗಿ ಒಂದು ಮಂಟಪವನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಅಲ್ಲಿ ತಾಯಿ ಭುವನೇಶ್ವರಿಯನ್ನು ಪ್ರತಿಷ್ಠಾಪಿಸುತ್ತಾರೆ.
ಕನ್ನಡ ಕುಟೀರ ಬಳಗ ಎಂಬ ವೇದಿಕೆ
ರಾಜ್ಯೋತ್ಸವವನ್ನು ಆಚರಿಸಲು ಸ್ಪೂರ್ತಿ ಎಂದರೆ ತಂದೆ ವೆಂಕಟರಮಣ ಅವರು ಬಿಇಎಲ್ ನಲ್ಲಿ ಕೆಲಸ ಮಾಡುತ್ತಿದ್ದಾಗ, ರಾಜ್ಯೋತ್ಸವವನ್ನು ಸಂಘ ಸಂಸ್ಥೆಗಳಲ್ಲಿಯೇ ಯಾಕೆ ಆಚರಿಸಬೇಕು, ಮನೆಯಲ್ಲಿ ಯಾಕೆ ಆಚರಿಸಬಾರದು ಎಂದು ಮನಸ್ಸಿನಲ್ಲಿ ಹೊಳೆಯುತ್ತಿದ್ದಂತೆ ತಟ್ಟನೆ ಮನೆಯವರ ಜೊತೆ ಮಾತನಾಡಿ ಅವರ ಸಹಕಾರದೊಂದಿಗೆ ಕನ್ನಡ ಕುಟೀರ ಬಳಗ ಎಂಬ ವೇದಿಕೆ ಮಾಡಿಕೊಂಡು ರಾಜ್ಯೋತ್ಸವವನ್ನು ಆಚರಿಸಲು ಆರಂಭಿಸಿಯೇ ಬಿಟ್ಟರು.
"ನಾವು ಎಲ್ಲರ ಸ್ನೇಹ ಬಯಸುತ್ತೇವೆ, ಸ್ನೇಹಕ್ಕೆ ತೊಂದರೆಯಾದರೆ ಸಂಘರ್ಷಕ್ಕೂ ಸಿದ್ಧ"
ಕಲಾಕೃತಿಯನ್ನು ರಚಿಸಿ ಅಲಂಕರಿಸುತ್ತಾರೆ
ಅಕ್ಕ-ಪಕ್ಕದಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡಿದವರು, ಸಾಹಿತಿಗಳು, ಕವಿಗಳ ಭಾವಚಿತ್ರಗಳಿಂದ ಅಲಂಕೃತಗೊಳಿಸುತ್ತಾರೆ. ಇದು ಕವಿಗಳ, ಸಾಹಿತಗಳ, ಹೋರಾಟಗಾರರಿಂದ ಕಂಗೊಳಿಸುವಂತೆ ಮಾಡುತ್ತಾರೆ. ಜೊತೆಗೆ ಪ್ರತಿ ವರ್ಷ ಎಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತದೆಯೋ, ಅಲ್ಲಿಯೇ ಒಂದು ಸ್ಮಾರಕ ಅಥವಾ ಆ ಊರಿನ ನೆನಪು ತರುವಂತಹ ಕಲಾಕೃತಿಯನ್ನು ರಚಿಸಿ ಅಲಂಕರಿಸುತ್ತಾರೆ. ಅದಕ್ಕೆ ಕನ್ನಡಮ್ಮನ ತೇರು ಎಂದು ಹೆಸರಿಟ್ಟು ಪೂಜಿಸುತ್ತಾರೆ.
ಕವಿಗೋಷ್ಠಿ ಆಯೋಜನೆ
ಉದಾಹರಣೆಗೆ ಚಿತ್ರದುರ್ಗದಲ್ಲಿ ನಡೆದರೆ ಕನ್ನಡಮ್ಮನ ಕೋಟೆ, ಬೆಂಗಳೂರಾದರೆ ಕನ್ನಡಮ್ಮನ ಸೌಧ ಎಂದು ಹೆಸರಿಸಿ ಪೂಜಿಸುತ್ತಾರೆ. ಹೀಗೆ ಸುಮಾರು 26 ವರ್ಷಗಳಿಗೂ ಹೆಚ್ಚು ಕಾಲದಿಂದ ಆಚರಿಸಿಕೊಂಡು ಬಂದಿದ್ದಾರೆ. ಕಳೆದ ವರ್ಷ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ "ಬೆಳ್ಳಿ ಹಬ್ಬ' ಆಚರಣೆ ಮಹೋತ್ಸವ ಮಾಡಲಾಗಿದೆ. ರಾಜ್ಯೋತ್ಸವದ ಕಾರ್ಯಕ್ರಮವನ್ನು ಅತ್ಯಂತ ಚೊಕ್ಕವಾಗಿ ಪುಟ್ಟದಾಗಿ ಆಯೋಜಿಸಿ ಕವಿಗಳು, ಬರಹಗಾರರು, ವಿಮರ್ಶಕರು, ಅವರನ್ನು ಕರೆಯಿಸಿ ಕವಿಗೋಷ್ಠಿಗಳನ್ನು ಆಯೋಜಿಸಿ ಎಲ್ಲಿಯೂ ಪ್ರಮಾದವಾಗದಂತೆ ನೋಡಿಕೊಂಡು ಉತ್ತಮವಾಗಿ ಆಚರಿಸುತ್ತಾರೆ.
ಕನ್ನಡ ಮನೆಯನ್ನಾಗಿ ಅಲಂಕೃತ
ಕಾರ್ಯಕ್ರಮಕ್ಕೆ ಕರೆದಿರುವ ಅತಿಥಿಗಳಿಗೆ ಪುಟ್ಟದಾದ ಗಿಫ್ಟ್ ಗಳನ್ನು ಕೂಡ ಕೊಡುತ್ತಾರೆ. ಪ್ರತಿ ವರ್ಷದ ರಾಜ್ಯೋತ್ಸವದ ಆಚರಣೆಗಾಗಿ ಪ್ರತಿ ತಿಂಗಳು ತಲಾ ಒಂದು ಸಾವಿರ ರುಪಾಯಿ ಹಣವನ್ನು ಮನೆಯವರೆಲ್ಲರೂ ಸೇರಿ ತೆಗೆದಿರಿಸುತ್ತಾರೆ. ನವೆಂಬರ್ ಬಂದಾಗ ಅದಕ್ಕೆ ಇನ್ನಷ್ಟು ಸೇರಿಸಿ ಮನೆಯವರೆಲ್ಲಾ ಸೇರಿ ರಾಜೇಶ್ ಜೊತೆ ಅದ್ಧೂರಿಯಾಗಿ ಇಡೀ ಮನೆಯನ್ನು ಕನ್ನಡ ಮನೆಯನ್ನಾಗಿ ಅಲಂಕೃತಗೊಳಿಸಿ ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದ್ದಾರೆ. ಇವರ ಅರ್ಥ ಪೂರ್ಣ ಆಚರಣೆಗೆ ಹತ್ತು ಹಲವು ಭಾವಚಿತ್ರಗಳು ಇಲ್ಲಿ ಸಾಕ್ಷಿಯಾಗುತ್ತವೆ. ರಾಜ್ಯದಾದ್ಯಂತ ನಾಡಹಬ್ಬವಾಗಿ ಆಚರಿಸಲ್ಪಡುವ ಕರ್ನಾಟಕ ರಾಜ್ಯೋತ್ಸವ ಕನ್ನಡ ಕುಟೀರ ಬಳಗದ ವಿನೂತನ ಆಚರಣೆಯಿಂದಾಗಿ ಇಂದು ಎಲ್ಲರೂ ಒಂದು ಬಾರಿ ಕನ್ನಡ ಕುಟೀರ ಬಳಗದ ಆಚರಣೆ ಕಡೆಗೆ ತಿರುಗಿ ನೋಡುವಂತೆ ಮಾಡಿದೆ.