ಚಿತ್ರದುರ್ಗದಲ್ಲಿ ಭರ್ಜರಿ ಮಳೆ; ವಿವಿ ಸಾಗರ ಜಲಾಶಯ ಮಟ್ಟ ಈಗ 71.30 ಅಡಿ
ಚಿತ್ರದುರ್ಗ, ಅಕ್ಟೋಬರ್ 21: ಹಲವು ವರ್ಷಗಳಿಂದ ತೀವ್ರ ಬರಕ್ಕೆ ತುತ್ತಾಗಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ತಡ ರಾತ್ರಿ ಮಳೆ ಆರ್ಭಟಿಸಿದೆ. ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳಲ್ಲಿ ವರುಣ ಭರ್ಜರಿಯಾಗಿ ಆರ್ಭಟಿಸಿದ್ದಾನೆ.
ಚಿತ್ರಗಳು: ಬೆಳಗಾವಿಯಲ್ಲಿ ಮತ್ತೆ ಮಳೆ; ಒಂದೇ ದಿನದಲ್ಲಿ ಪ್ರವಾಹದ ಭೀತಿ
ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕಿನಲ್ಲಿ ರಾತ್ರಿ ಸುರಿದ ಮಳೆಗೆ ಕೆರೆ, ಕಟ್ಟೆಗಳು ತುಂಬಿ ಹರಿದಿವೆ. ಹೊಸದುರ್ಗ ತಾಲೂಕಿನ ಕೆಲ್ಲೋಡು ಚೆಕ್ ಡ್ಯಾಂ ತುಂಬಿ ಹರಿಯುತ್ತಿದ್ದು ತರೀಕೆರೆ ಭಾಗದಲ್ಲಿ ಸಹ ಉತ್ತಮ ಮಳೆಯಾಗಿರುವುದರಿಂದ ವಿವಿ ಸಾಗರಕ್ಕೆ 75 ರಿಂದ 80 ಅಡಿ ನೀರು ಬರುವ ಸಾಧ್ಯತೆ ಇದೆ. ಹೊಸದುರ್ಗದ ಆಲದಹಳ್ಳಿ ದಲಿತ ಕಾಲೋನಿ ಗ್ರಾಮದಲ್ಲಿ 15 ಮನೆಗಳಿಗೆ ನೀರು ನುಗ್ಗಿದೆ. ದೇವಪುರ ಗ್ರಾಮಕ್ಕೆ ನೀರು ನುಗ್ಗಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ. ಹಾನಿಗೊಳಾಗಾದ ಗ್ರಾಮಗಳಿಗೆ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಭೇಟಿ ನೀಡಿ ಪರೀಶಿಲಿಸಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಳೆ ಇಲ್ಲದೆ ಕಂಗೆಟ್ಟಿದ್ದ ಚಿತ್ರದುರ್ಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸತತ ಮಳೆಯಾಗುತ್ತಿರುವುದರಿಂದ ಹಿರಿಯೂರಿನ ವಿವಿ ಸಾಗರ ಜಲಾಶಯಕ್ಕೆ ನೀರು ಹರಿದು ಬಂದಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 71.30 ಅಡಿಯಾಗಿದೆ. ಈ ಹಿಂದೆ ಸುಮಾರು 61 ಅಡಿಯಷ್ಟು ನೀರಿತ್ತು. ಹೊಳಲ್ಕೆರೆ ತಾಲೂಕಿನಲ್ಲಿ ಮಳೆಯಾಗಿದ್ದು ಗುಂಡಿಹಳ್ಳ, ದೊಡ್ಡಕಿಟ್ಟದಹಳ್ಳಿ, ಮಾಡದಕೆರೆ ಇನ್ನಿತರ ಕಡೆ ಭರ್ಜರಿ ಮಳೆಯಾಗಿದ್ದು, ಗಂಗೆ ವಾಣಿವಿಲಾಸದ ಕಡೆ ಮುಖ ಮಾಡಿದ್ದಾಳೆ