ಕೋಟೆ ನಾಡು ಚಿತ್ರದುರ್ಗದಲ್ಲಿ ಹರ್ಷ ತಂದ ವರುಣ
ಚಿತ್ರದುರ್ಗ, ಸೆಪ್ಟೆಂಬರ್ 29: ಹಲವು ವರ್ಷಗಳಿಂದ ತೀವ್ರ ಬರಕ್ಕೆ ತುತ್ತಾಗಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆರಾಯ ಭರ್ಜರಿಯಾಗಿ ಆರ್ಭಟಿಸಿದ್ದಾನೆ. ಜಿಲ್ಲೆಯ ಹಿರಿಯೂರು, ಮೊಳಕಾಲ್ಮೂರು, ಚಳ್ಳಕೆರೆ ತಾಲೂಕು ಸೇರಿದಂತೆ ಹಲವೆಡೆ ಕಳೆದ ಮುರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗಿದ್ದು, ತಾಲೂಕಿನಲ್ಲಿ ಒಟ್ಟು ಹತ್ತು ಮನೆಗಳಿಗೆ ಹಾನಿಯಾಗಿದೆ. ಆದರೂ ಸತತ ಬರಗಾಲಕ್ಕೆ ಕಂಗೆಟ್ಟಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.
ಹಿರಿಯೂರು ತಾಲೂಕಿನಲ್ಲಿ ಬಹುತೇಕ ಮಳೆ ಆಗಿರುವ ಪ್ರದೇಶದಲ್ಲಿ ಆರನಕಟ್ಟೆ, ಮದ್ದೆರಹಳ್ಳ, ಆದಿವಾಲ ಗೊಲ್ಲರಹಟ್ಟಿ, ಕಸವನಹಳ್ಳಿ, ಪಿಟ್ಲಾಲಿ, ರಂಗನಾಥ ಪುರ ಚೆಕ್ ಡ್ಯಾಂ ತುಂಬಿ ಹರಿಯುತ್ತಿವೆ.
ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ: ಮತ್ತೆ ಮಹಾಮಳೆ ಆತಂಕ
ಒಣಗಿ ಹೋಗಿದ್ದ ಬೆಳೆಗಳಿಗೆ ಜೀವ ಬಂದಂತಾಗಿದೆ. ಚೆಕ್ ಡ್ಯಾಂ ಸುತ್ತಮುತ್ತ ಇರುವ ಬೋರ್ ವೆಲ್ ಗಳಿಗೆ ಇದರಿಂದ ಅನುಕೂಲವಾಗಲಿದೆ. ಸತತ ಬರಕ್ಕೆ ತುತ್ತಾಗಿದ್ದ ಹಿರಿಯೂರು ಒಂದಿಷ್ಟು ಚೇತರಿಸಿಕೊಳ್ಳುವಂತೆ ಮಳೆಯಾಗಿದೆ.
ನೀರಿಲ್ಲದೇ ಜಿಲ್ಲೆಯಲ್ಲಿ ತೋಟಗಳು ಒಣಗಿದ್ದವು, ಇರುವ ತೆಂಗು, ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸಿ ಹರಸಹಾಸ ಪಡುತ್ತಿದ್ದರು. ಇದೀಗ ಉತ್ತಮ ಮಳೆಯಾಗಿರುವುದು ಎಲ್ಲರಲ್ಲೂ ಭರವಸೆ ಮೂಡಿಸಿದೆ.