ಚಿತ್ರದುರ್ಗದಲ್ಲಿ ನಿರಂತರ ಮಳೆ; ವಿವಿ ಸಾಗರದಲ್ಲಿ 5 ಅಡಿ ಮಳೆ ನೀರು
ಚಿತ್ರದುರ್ಗ, ಅಕ್ಟೋಬರ್ 11: ಸತತ ಬರಗಾಲಕ್ಕೆ ತುತ್ತಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಈಗ ಮಳೆ ಆರ್ಭಟಿಸುತ್ತಿದೆ. ಜಿಲ್ಲೆಯ ಏಕೈಕ ಜಲಾಶಯ ವಾಣಿವಿಲಾಸ ಜಲಾಶಯಕ್ಕೆ 5 ಅಡಿ ನೀರು ಹರಿದು ಬಂದಿದ್ದು, ಇಂದಿಗೆ ಜಲಾಶಯದ ನೀರಿನ ಮಟ್ಟ 66.7 ಅಡಿಯಷ್ಟಿದೆ.
5 ಅಡಿ ನೀರು ಬಂದಿರುವುದರಿಂದ ಕುಡಿಯುವ ನೀರಿನ ಅಭಾವ ಸದ್ಯಕ್ಕೆ ದೂರವಾಗಿದೆ. ಆದರೆ ಭದ್ರೆ ನೀರು ಇದುವರೆಗೂ ವಿವಿ ಸಾಗರ ತಲುಪಿಲ್ಲ. ಅಕ್ಟೋಬರ್ 3 ರಂದು ತರೀಕೆರೆ ತಾಲೂಕಿನ ಬೆಟ್ಟದತಾವರೆಕೆರೆ ಹತ್ತಿರ ಪಂಪ್ ಹೌಸ್ ನಿಂದ ಪ್ರಾಯೋಗಿಕವಾಗಿ ನೀರು ಹರಿಸಿದ್ದರು. ಆದರೆ ಭದ್ರೆ ಹರಿಯುವುದಕ್ಕಿಂತ ಮೊದಲೇ ಜಲಾಶಯಕ್ಕೆ ಮಳೆ ನೀರು ಬಂದಿರುವುದರಿಂದ ಜನರ ಆತಂಕ ದೂರವಾಗಿದೆ.
ಕೆಲವೇ ದಿನಗಳಲ್ಲಿ ವಿವಿ ಸಾಗರಕ್ಕೆ ನೀರು; ಅ.1ಕ್ಕೆ ಸಿಎಂ ಚಾಲನೆ
ಹಿರಿಯೂರು ತಾಲೂಕಿನ ಹಲವೆಡೆ ಮಳೆಯಾಗಿದ್ದು, ರಾತ್ರಿ ಸುರಿದ ಮಳೆಗೆ ತಾಲೂಕಿನ ಗೌಡನಹಳ್ಳಿ ಕೆರೆ ಇಪ್ಪತ್ತು ವರ್ಷಗಳ ನಂತರ ಕೋಡಿ ಬಿದ್ದಿದೆ. ಗೌಡನಹಳ್ಳಿ, ರಂಗಾಪುರ, ಕೆರೆಕೋಡಿಹಟ್ಟಿ ಗ್ರಾಮಸ್ಥರು ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ನಗರಕ್ಕೆ ಹೊಂದಿಕೊಂಡಂತೆ ಇರುವ ಲಕ್ಕವನಹಳ್ಳಿ ಡ್ಯಾಂ ಕೂಡ ತುಂಬಿದೆ. ಸತತ ಬರಗಾಲಕ್ಕೆ ಕಂಗೆಟ್ಟಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.
ಹಿರಿಯೂರು ತಾಲೂಕಿನಲ್ಲಿ 27.0ಎಂಎಂ, ಬಬ್ಬೂರು 8.2 ಎಂಎಂ, ಸುಗೂರು 6.2 ಎಂಎಂ, ಇಕ್ಕನೂರು 4 ಎಂಎಂ, ಒಟ್ಟು 45.4 ಎಂಎಂ ಮಳೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಹಲವಾರು ಚೆಕ್ ಡ್ಯಾಂ ತುಂಬಿದ್ದು, ಚೆಕ್ ಡ್ಯಾಂ ಸುತ್ತಮುತ್ತ ಇರುವ ಬೋರ್ ವೆಲ್ ಗಳು ಇದರಿಂದ ಮರುಪೂರಣಗೊಳ್ಳಲಿವೆ. ಈ ಬಾರಿ ಮಳೆ ಕೈ ಕೊಟ್ಟಿತು ಅನ್ನುವಷ್ಟರಲ್ಲಿ ಮಳೆಗಾಲದ ಕೊನೆಯಲ್ಲಿ ಇದೀಗ ಉತ್ತಮ ಮಳೆಯಾಗಿರುವುದು ಎಲ್ಲರಲ್ಲೂ ಭರವಸೆ ಮೂಡಿಸಿದೆ.
ಭದ್ರಾ ನದಿಯಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿ:ರೈತರ ಪ್ರತಿಭಟನೆ
ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ: ಹಿರಿಯೂರು ತಾಲೂಕಿನ ಗೌಡನಹಳ್ಳಿ ಕೆರೆ ಇಪ್ಪತ್ತು ವರ್ಷಗಳ ನಂತರ ತುಂಬಿದ್ದು, ಮೂರ್ನ್ಕಾಲ್ಕು ದಿನಗಳ ಕಾಲ ನಡೆಯುವ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗುವುದೆಂದು ಗ್ರಾಮದ ಹಿರಿಯ ಮುಖಂಡ ವಿ.ರಂಗಪ್ಪ ತಿಳಿಸಿದ್ದಾರೆ. 1999ರಲ್ಲಿ ಕೆರೆ ತುಂಬಿದ ಕಾರಣ ಯರಗುಂಟೇಶ್ವರಸ್ವಾಮಿ, ಶ್ರೀರಂಗನಾಥ ಸ್ವಾಮಿ, ಕರಿಯಮ್ಮ ದೇವರ ಸಮ್ಮುಖದಲ್ಲಿ ತೆಪ್ಪೋತ್ಸವ ಕಾರ್ಯಕ್ರಮ ಮಾಡಲಾಗಿತ್ತು. ಆಗಿನ ಚಿತ್ರದುರ್ಗ ಸಂಸದ ನಟ ಶಶಿಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ತೆಪ್ಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.