ಚಿತ್ರದುರ್ಗ; ಮಳೆಗೆ ಬೆಳೆ ನಷ್ಟ, ಸಿಡಿಲಿಗೆ ಇಬ್ಬರು ಬಲಿ
ಚಿತ್ರದುರ್ಗಮೇ 5: ಚಿತ್ರದುರ್ಗ ಜಿಲ್ಲೆಯಲ್ಲಿ ಬುಧವಾರ ಸಂಜೆ ಮಳೆ, ಗಾಳಿ ಭಾರೀ ಅನಾಹುತ ಸೃಷ್ಟಿಸಿದೆ. ಬಾಳೆ ತೋಟ ನೆಲಕ್ಕುರುಳಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.
ಹಿರಿಯೂರು ತಾಲ್ಲೂಕಿನ ಕಕ್ಕಯ್ಯನಹಟ್ಟಿ ಗ್ರಾಮದ ಆನಂದಮೂರ್ತಿಯ ಬಾಳೆ ತೋಟದಲ್ಲಿ ಫಸಲಿಗೆ ಬಂದಿದ್ದ ಸುಮಾರು 200ಕ್ಕೂ ಹೆಚ್ಚು ಬಾಳೆ ಗಿಡಗಳು ಧರೆಗುರುಳಿದಿವೆ.
ಇನ್ನು ತಾಲ್ಲೂಕಿನ ತವಂದಿ ಗ್ರಾಮದ ಗೌಡರ ಬಾಳೆ ತೋಟ ಗಾಳಿಯ ಹೊಡೆತಕ್ಕೆ ಸಿಲುಕಿ ನೆಲಕಚ್ಚಿ ಹೋಗಿದೆ. ಇದೇ ಗ್ರಾಮದ ಪ್ರಶಾಂತ್ಗೆ ಸೇರಿದ ಅಡಕೆ ಮರಗಳು ಮುರಿದು ಬಿದ್ದಿವೆ.
ಇದಲ್ಲದೆ ಬೀರೆನಹಳ್ಳಿ ಗ್ರಾಮದ ಪ್ರಸನ್ನರ ಬಾಳೆ ತೋಟ ಸಹ ಗಾಳಿಗೆ ಸಿಲುಕಿ, ಅಪಾರ ನಷ್ಟ ಉಂಟಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.
ಸಿಡಿಲಿಗೆ ಇಬ್ಬರು ಬಲಿ: ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗಳಹಟ್ಟಿಯಲ್ಲಿ ಕುರಿ ಕಾಯಲು ತೆರಳಿದ್ದ ತಾಯಿ ಹಾಗೂ ಮಗ ಸಿಡಿಲಿಗೆ ಬಲಿಯಾಗಿದ್ದಾರೆ.
ಮೃತರನ್ನು ಮಾರಕ್ಕ (40), ವೆಂಕಟೇಶ್ (17) ಎಂದು ಗುರುತಿಸಲಾಗಿದೆ. ಇವರಿಬ್ಬರು ಎಂದಿನಂತೆ ಕುರಿಗಳನ್ನು ಮೇಯಿಸಿಕೊಂಡು ಬರಲು ತೆರಳಿದ್ದು, ಸಂಜೆ ಗುಡುಗು ಸಹಿತ ಮಳೆ ಆರಂಭವಾದಾಗ ತಿಪ್ಪೇಸ್ವಾಮಿ ಎನ್ನುವವರ ಜಮೀನಿನ ಹುಣಿಸೆ ಮರದಡಿಯಲ್ಲಿ ಅಶ್ರಯ ಪಡೆದಿದ್ದಾರೆ. ಆಗ ಸಿಡಿಲು ಬಡಿದಿದೆ.
ಕತ್ತಲಾದರೂ ಕುರಿ ಹಾಗೂ ಇಬ್ಬರೂ ಮನೆಗೆ ಬಾರದ್ದನ್ನು ಕಂಡು ಹುಡುಕಲು ತೆರಳಿದಾಗ ಈ ಘಟನೆ ನಡೆದಿರುವುದು ತಿಳಿದಿದೆ. ರಾತ್ರಿ ಸ್ಥಳಕ್ಕೆ ತಹಸೀಲ್ದಾರ್ ಟಿ. ಸುರೇಶ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಪರಮೇಶ್ ಲಂಬಾಣಿ ಹಾಗೂ ಪಿಎಸ್ಐ ಜಿ. ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ, ಹೆಚ್. ಡಿ. ಪುರ, ಸೇರಿದಂತೆ ತಾಲೂಕಿನ ಅಲ್ಲಿಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಒಟ್ಟಾರೆಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭಾರಿ ಗಾಳಿ ಬೀಸುತ್ತಿದ್ದು ಅಲ್ಲಿಲ್ಲಿ ಅಲ್ಪ ಸ್ವಲ್ಪ ಮಳೆಯಾಗುತ್ತಿದೆ.